ಬೀದಿ ನಾಯಿಗಳು (ಸಾಂದರ್ಭಿಕ ಚಿತ್ರ)Image Credit source: PTI
ಬೆಂಗಳೂರು, ಜುಲೈ 2: ಬೆಂಗಳೂರು (Bengaluru) ನಗರದಲ್ಲಿ ಬೀದಿನಾಯಿಗಳ ಹಾವಳಿಗೆ ಬ್ರೇಕ್ ಹಾಕಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಸಂಪೂರ್ಣ ವಿಫಲವಾಗುತ್ತಿರುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಅದರಲ್ಲೂ ಒಂದೇ ಪ್ರದೇಶದಲ್ಲಿ ಮೇಲಿಂದ ಮೇಲೆ ಅಮಾಯಕರ ಮೇಲೆ ಬೀದಿನಾಯಿಗಳು ಎರಗುತ್ತಿದ್ದು, ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಹೊಯ್ಸಳ ನಗರದ ಜನಸಾಮಾನ್ಯರು ರೋಸಿಹೋಗಿದ್ದಾರೆ. ರಾಮಮೂರ್ತಿ ನಗರ ಸಮೀಪದ ಹೊಯ್ಸಳ ನಗರದಲ್ಲಿ ಕಾರ್ಮಿಕನೊಬ್ಬನ ಮೇಲೆ ಬೀದಿನಾಯಿ ಭೀಕರ ದಾಳಿ ನಡೆಸಿರುವ ಘಟನೆ ನಡೆದಿದ್ದು, ಇದು ಎರಡು ದಿನಗಳ ಬಳಿಕ ತಡವಾಗಿ ಬೆಳಕಿಗೆ ಬಂದಿದೆ.
ಸ್ಥಳೀಯರಲ್ಲಿ ಹೆಚ್ಚಿದ ಆತಂಕ
ಬೀದಿನಾಯಿ ದಾಳಿಯಿಂದ ತೀವ್ರವಾಗಿ ಗಾಯಗೊಂಡಿರುವ ಕಾರ್ಮಿಕ ಸದ್ಯ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡಿದ್ದಾರೆ. ರೇಬೀಸ್ ಕಾಯಿಲೆ ತಡೆಗಟ್ಟುವ ಸಲುವಾಗಿ ಈಗಾಗಲೇ ಎರಡು ಇಂಜೆಕ್ಷನ್ಗಳನ್ನು ಪಡೆದಿದ್ದು, ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ, ಒಂದೇ ಪ್ರದೇಶದಲ್ಲಿ ಮೇಲಿಂದ ಮೇಲೆ ಇಂತಹ ಘಟನೆಗಳು ಮರುಕಳಿಸುತ್ತಿರುವುದು ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕವನ್ನು ಹೆಚ್ಚು ಮಾಡಿದೆ.
ಒಂದೂವರೆ ತಿಂಗಳಿನಲ್ಲಿ ಇದು 3ನೇ ಪ್ರಕರಣ!
ಸ್ಥಳೀಯರ ಆರೋಪದ ಪ್ರಕಾರ, ಹೊಯ್ಸಳ ನಗರದಲ್ಲಿ ಕೇವಲ ಒಂದೂವರೆ ತಿಂಗಳ ಅಂತರದಲ್ಲಿ ದಾಖಲಾಗಿರುವ ಮೂರನೇ ನಾಯಿ ಕಡಿತದ ಪ್ರಕರಣ ಇದಾಗಿದೆ. ಇದೇ ಬೀದಿನಾಯಿಗಳ ಗುಂಪು ಈ ಹಿಂದೆ ಯುವತಿಯೊಬ್ಬರು ಹಾಗೂ ಮತ್ತೊಬ್ಬ ಕಾರ್ಮಿಕನ ಮೇಲೂ ಅತ್ಯಂತ ಕ್ರೂರವಾಗಿ ದಾಳಿ ನಡೆಸಿತ್ತು. ನಿರಂತರವಾಗಿ ನಡೆಯುತ್ತಿರುವ ಈ ನಾಯಿ ದಾಳಿಗಳಿಂದ ನಿವಾಸಿಗಳು ಭಯಭೀತರಾಗಿದ್ದು, ಮಕ್ಕಳು, ಹಿರಿಯರು ಹಾಗೂ ನಿತ್ಯ ಕೆಲಸಕ್ಕೆ ತೆರಳುವವರು ರಸ್ತೆಗಳಲ್ಲಿ ಮುಕ್ತವಾಗಿ ಸಂಚರಿಸಲು ಹೆದರುವಂತಹ ವಾತಾವರಣ ಸೃಷ್ಟಿಯಾಗಿದೆ.
ಪಶು ಸಂಗೋಪನಾ ಇಲಾಖೆ ವಿರುದ್ಧ ಸಾರ್ವಜನಿಕರ ಆಕ್ರೋಶ
ಬೀದಿನಾಯಿಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬ ಸಾರ್ವಜನಿಕರ ಸುದೀರ್ಘ ಒತ್ತಾಯದ ನಡುವೆಯೇ ಮತ್ತೊಂದು ದಾಳಿ ನಡೆದಿರುವುದು ಬೆಂಗಳೂರು ಪೂರ್ವ ನಗರ ಪಾಲಿಕೆ ಹಾಗೂ ಪಶು ಸಂಗೋಪನಾ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಹತ್ತಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನಾಯಿ ಕಡಿತದ ಪ್ರಕರಣಗಳಿಂದಲೇ ಪ್ರಸ್ತುತ ಹೆಚ್ಚು ಸುದ್ದಿಯಾಗುತ್ತಿರುವ ಹೊರಮಾವು ವಾರ್ಡ್ನ ಹೊಯ್ಸಳ ನಗರದಲ್ಲಿ ತಕ್ಷಣವೇ ಸಮಗ್ರ ಕ್ರಮ ಕೈಗೊಳ್ಳಬೇಕು ಮತ್ತು ಬೀದಿನಾಯಿಗಳ ಹಾವಳಿಗೆ ಸೂಕ್ತ ಕಡಿವಾಣ ಹಾಕಬೇಕು ಎಂದು ಸ್ಥಳೀಯ ನಿವಾಸಿಗಳು ಜಿಬಿಎ ಅಧಿಕಾರಿಗಳನ್ನು ತೀವ್ರವಾಗಿ ಆಗ್ರಹಿಸಿದ್ದಾರೆ.
ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
