ಬೆಂಗಳೂರು, (ಆಗಸ್ಟ್ 05): ಇತ್ತಿಚ್ಚಿಗೆ ರಾಜಧಾನಿಯ ಚಿಕ್ಕದಾದ ರಸ್ತೆಗಳಲ್ಲಿ ಅಗ್ನಿ (Fire) ಅವಘಡ ನಡೆದಾಗ ಅಗ್ನಿಶಾಮಕ ವಾಹನ, ಆ್ಯಂಬುಲೆನ್ಸ್ ಸಂಚಾರ ಮಾಡಲು ಕಷ್ಟವಾಗಿದೆ. ಹೀಗಾಗಿ ಬೆಂಗಳೂರಿನ ಜನನಿಬಿಡ ವಾಣಿಜ್ಯ ಪ್ರದೇಶಗಳಿಗೆ ಮೊದಲ ಬಾರಿಗೆ ಹೊಸ ಸುರಕ್ಷತಾ ವ್ಯವಸ್ಥೆಗೆ ಸರ್ಕಾರ ಮುಂದಾಗಿದೆ. ನಗರದ ಮೊದಲ ವೈಟ್ಟಾಪಿಂಗ್ ರಸ್ತೆಯೊಂದಿಗೆ ಇಂಟಿಗ್ರೇಟೆಡ್ ಫೈರ್ ಹೈಡ್ರಂಟ್ (integrated fire hydrant system,) ವ್ಯವಸ್ಥೆ ನಿರ್ಮಾಣ ಮಾಡಿದ್ದು, ಅಗ್ನಿ ಅವಘಡಗಳಿಗೆ ತ್ವರಿತ ಸ್ಪಂದನೆ ನೀಡಲು ಮುಂದಾಗಿದ್ದಾರೆ.. ಗಾಂಧಿನಗರ ವಿಧಾನಸಭಾ ಕ್ಷೇತ್ರದ ಆರ್.ಟಿ. ಸ್ಟ್ರೀಟ್ನಲ್ಲಿ ಮೊದಲ ಬಾರಿಗೆ ಪೈರ್ ಹೈಡ್ರಂಟ್ ವ್ಯವಸ್ಥೆ ನಿರ್ಮಾಣ ಮಾಡಿದ್ದು, ಈ ವ್ಯವಸ್ಥೆಯಿಂದ ಅಗ್ನಿ ಅವಘಡಗಳ ಸಂದರ್ಭದಲ್ಲಿ ತಕ್ಷಣವೇ ನೀರು ದೊರೆಯಲಿದೆ. ರಕ್ಷಣಾ ಕಾರ್ಯಾಚರಣೆ ಮತ್ತಷ್ಟು ವೇಗವಾಗಲಿದ್ದು ಅಗ್ನಿ ಅವಘಡದಿಂದ ಎದುರಾಗವ ಅಪಾಯ ನಿಯಂತ್ರಣ ಮಾಡಬಹುದಾಗಿದೆ.
ನಿರ್ಮಾಣವಾಗುವ ರಸ್ತೆಗಳಲ್ಲಿ ಪ್ರಮುಖವಾಗಿ ಕಿರಿದಾದ ಇಕ್ಕಟ್ಟಿನ ರಸ್ತೆಗಳಲ್ಲಿ ಎಸ್.ಎಸ್.ಬಿ. ಕುಡಿಯುವ ನೀರು ಮತ್ತು ಒಳಚರಂಡಿ ಪೈಪ್ಲೈನ್, ಮಳೆನೀರು ಚರಂಡಿ, ಪಾದಚಾರಿಗಳಿಗೆ ಅನುಕೂಲಕರ ಫುಟ್ಪಾತ್ ಹಾಗೂ ಆಧುನಿಕ ಬೀದಿ ದೀಪಗಳನ್ನು ಜೊತೆಗೆ ಫೈರ್ ಹೈಡ್ರಂಟ್ ವ್ಯವಸ್ಥೆ ಅಳವಡಿಕೆಗೂ ಸರ್ಕಾರ ಮುಂದಾಗಿದೆ. ಅಗ್ನಿ ಅವಘಡದ ಸಂದರ್ಭದಲ್ಲಿ ಅಗ್ನಿಶಾಮಕ ಸಿಬ್ಬಂದಿ ನೇರವಾಗಿ ನೀರು ಪಡೆದು ಬೆಂಕಿ ನಂದಿಸಲು ಸಾಧ್ಯವಾಗಲಿದೆ. ಪೇಟೆ ಪ್ರದೇಶದ ಕಿರಿದಾದ ರಸ್ತೆಗಳಲ್ಲಿ ಅಗ್ನಿಶಾಮಕ ವಾಹನಗಳು ಸುಲಭವಾಗಿ ತಲುಪಲಾಗದ ಸಮಸ್ಯೆಗೆ ಇದು ಮಹತ್ವದ ಪರಿಹಾರವಾಗಲಿದೆ ಅಂತಿದ್ದಾರೆ ಮಾಜಿ ಸಚಿವ ದಿನೇಶ್ ಗುಂಡೂರಾವ್.
ಇದನ್ನೂ ಓದಿ: ಮತದಾರರ ಪಟ್ಟಿ ಪರಿಷ್ಕರಣೆ: ಕರ್ನಾಟಕದಲ್ಲಿ ಪತ್ತೆಯಾಗದ 16.3 ಲಕ್ಷ ಮತದಾರರು, ಬೆಂಗಳೂರಲ್ಲಿ ಅತಿ ಹೆಚ್ಚು?
ರಾಜಧಾನಿಯಲ್ಲಿ ಮೊದಲ ಹಂತದಲ್ಲಿ ನಗರದಲ್ಲಿ 196 ಕಿಲೋಮೀಟರ್ ವೈಟ್ಟಾಪಿಂಗ್ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಎರಡನೇ ಹಂತದಲ್ಲಿ 120 ಕಿಲೋಮೀಟರ್ ರಸ್ತೆ ನಿರ್ಮಾಣ ಗುರಿ ಇಟ್ಟುಕೊಳ್ಳಲಾಗಿದ್ದು, ಈಗಾಗಲೇ 60 ಕಿಲೋಮೀಟರ್ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕಾಮಗಾರಿಯನ್ನು ಡಿಸೆಂಬರ್ ಒಳಗೆ ಮುಗಿಸುವ ಗುರಿಯನ್ನ ಜಿಬಿಎ ಹೊಂದಿದೆ. ಸದ್ಯ 418 ಮೀಟರ್ ಉದ್ದದ ಟ್ಯಾಂಕ್ ಬಂಡ್ ರಸ್ತೆಯನ್ನು 8.74 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದ್ದು. 10.5 ಮೀಟರ್ ಅಗಲದ ರಸ್ತೆ, ಮಳೆನೀರು ಚರಂಡಿ, ಯುಟಿಲಿಟಿ ಡಕ್ಟ್ ಮತ್ತು ಪಾದಚಾರಿ ಸೌಲಭ್ಯಗಳನ್ನು ನಿರ್ಮಿಸಲಾಗಿದೆ. ಮೆಟ್ರೋ ಮತ್ತು ಬಸ್ ನಿಲ್ದಾಣದ ಸಮೀಪ ಪುರುಷರು, ಮಹಿಳೆಯರು, ತೃತೀಯಲಿಂಗಿಗಳು ಹಾಗೂ ದಿವ್ಯಾಂಗರಿಗೆ ಅನುಕೂಲವಾಗುವ ಆಧುನಿಕ ಸಾರ್ವಜನಿಕ ಶೌಚಾಲಯವನ್ನೂ ನಿರ್ಮಿಸಲಾಗಿದೆ.
ಒಟ್ನಲ್ಲಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಫೈರ್ ಹೈಡ್ರಂಟ್ ವ್ಯವಸ್ಥೆ ಅಳವಡಿಸಿರುವುದರಿಂದ ಅಗ್ನಿ ಅವಘಡ ನಿಯಂತ್ರಣಕ್ಕೆ ಸಾಕಷ್ಟ ಅನಕೂಲವಾಗಲಿದ್ದು, ಅಗ್ನಿಶಾಮಕ ಸಿಬ್ಬಂದಿಗೆ ತುರ್ತು ಸಂದರ್ಭದಲ್ಲಿ ಸ್ಥಳದಲ್ಲೇ ನೀರು ದೊರೆಯಲಿದೆ. ಈ ಮಾದರಿಯನ್ನು ನಗರದ ಇತರೆ ಭಾಗಗಳಿಗೂ ವಿಸ್ತರಿಸಿದರೆ ಅಗ್ನಿ ಅವಘಡಗಳ ಹಾನಿಯನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ.
