ವಿಐಪಿ ಸಂಸ್ಕೃತಿ , ರಾಜ್ಯಪಾಲರ ಸಂಚಾರ
ಬೆಂಗಳೂರು, ಮೇ.31: ರಾಜಧಾನಿ ಬೆಂಗಳೂರಿನಲ್ಲಿ ವಿಐಪಿ ಸಂಸ್ಕೃತಿ ಮತ್ತು ಅಧಿಕಾರಿಗಳ ಭದ್ರತೆಯ ಹೆಸರಿನಲ್ಲಿ ಸಾಮಾನ್ಯ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುವ ಘಟನೆಗಳು ನಿಲ್ಲುವಂತೆ ಕಾಣುತ್ತಿಲ್ಲ. ಈಗಾಗಲೇ ಅಂಡರ್ಪಾಸ್ ನಿರ್ಮಾಣ ಕಾರ್ಯದಿಂದಾಗಿ ಉಸಿರುಗಟ್ಟುತ್ತಿರುವ ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿ (Old Airport Road), ಇಂದು ರಾಜ್ಯಪಾಲರ (Governor) ಸಂಚಾರದ ಹಿನ್ನೆಲೆಯಲ್ಲಿ ಸುಮಾರು 30 ನಿಮಿಷಗಳ ಕಾಲ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ನರಕಸದೃಶ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಚಾರ ದಟ್ಟಣೆಯ ನಡುವೆ ತನ್ನ ಗರ್ಭಿಣಿ ಪತ್ನಿಯನ್ನು ತುರ್ತಾಗಿ ಕರೆದೊಯ್ಯುತ್ತಿದ್ದ ವ್ಯಕ್ತಿಯೊಬ್ಬರು ಸಿಲುಕಿಕೊಂಡಿದ್ದು, ಸಾರ್ವಜನಿಕರ ಕಣ್ಣು ತೇವವಾಗುವಂತೆ ಮಾಡಿದೆ. ಅಂಡರ್ಪಾಸ್ ಕಾಮಗಾರಿಯಿಂದಾಗಿ ಮೊದಲೇ ಕಿರಿದಾಗಿದ್ದ ರಸ್ತೆಯಲ್ಲಿ ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೆ ಏಕಾಏಕಿ ರಸ್ತೆ ನಿರ್ಬಂಧಿಸಿದ್ದರಿಂದ, ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ತಲುಪಿಸಲಾಗದೆ ಆ ವ್ಯಕ್ತಿ ನಡುರಸ್ತೆಯಲ್ಲೇ ತೀವ್ರ ಕಂಗಾಲಾಗಿದ್ದರು.
ಇದನ್ನೂ ಓದಿ: ಬೆಂಗಳೂರು ಜಂಗಲ್ ರಾಜ್ ಆಗಿ ಬದಲಾಗುತ್ತಿದೆ?: ಶಾಲೆಯ ಮುಂದೆಯೇ ಲಾಂಗ್ ಬೀಸಿದ ಪುಂಡರು!; ವಿಡಿಯೋ ವೈರಲ್!
“ಸಾಮಾನ್ಯ ಸಾರ್ವಜನಿಕರ ಹಾಗೂ ರೋಗಿಗಳ ಅನುಕೂಲ ಮತ್ತು ಜೀವವು ವಿಐಪಿಗಳ ಸೌಕರ್ಯದಷ್ಟೇ ಮುಖ್ಯವಾಗುವುದು ಯಾವಾಗ?” ಎಂದು ಸ್ಥಳೀಯ ನಿವಾಸಿಗಳು ಮತ್ತು ವಾಹನ ಸವಾರರು ಕಟುವಾಗಿ ಪ್ರಶ್ನಿಸಿದ್ದಾರೆ. ಅಂಡರ್ಪಾಸ್ ನಿರ್ಮಾಣ ಹಂತದಲ್ಲಿರುವ ಇಂತಹ ಸೂಕ್ಷ್ಮ ರಸ್ತೆಗಳಲ್ಲಿ ಗಣ್ಯರ ಸಂಚಾರಕ್ಕೆ ಗಂಟೆಗಟ್ಟಲೆ ಸಾರ್ವಜನಿಕರನ್ನು ತಡೆಯುವುದು ಎಷ್ಟು ಸರಿ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರು ಬೆಂಗಳೂರು ಟ್ರಾಫಿಕ್ ಪೊಲೀಸ್ (BTP) ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
