ಬೆಂಗಳೂರಿನಲ್ಲಿ 410 ಕೋಟಿ ರೂಪಾಯಿ ಜಿಎಸ್‌ಟಿ ಹಗರಣ: ಜನರ ಆಧಾರ್, ಪಾನ್ ಕಾರ್ಡ್ ಬಳಸಿ 102 ಕೋಟಿ ತೆರಿಗೆ ಲೂಟಿ ಮಾಡಿದ ಕಿಲಾಡಿಗಳು! – Kannada News | Fake Invoice Scam: Rs 102.5 Cr GST Evasion Network Busted in Karnataka

ಬೆಂಗಳೂರು, ಏ,23:  ದೇಶಾದ್ಯಂತ ಸೈಬರ್​​ ಕ್ರೈಂ ಜಾಲಗಳು ಹೆಚ್ಚಾಗುತ್ತಿದೆ. ಸಾವಿರಾರೂ ಜನ ಕೋಟಿ ಕೋಟಿ ಹಣವನ್ನು ಕಳೆದುಕೊಂಡಿರುವ ಪ್ರಕರಣಗಳ ನಡುವೆ ಇದೀಗ ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ವಂಚಿಸುತ್ತಿದ್ದ ಬೃಹತ್ ಜಾಲವೊಂದನ್ನು ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗದ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಸುಮಾರು 410 ಕೋಟಿ ರೂಪಾಯಿ ಮೊತ್ತದ ಈ ವ್ಯವಹಾರದಲ್ಲಿ 102.5 ಕೋಟಿ ರೂಪಾಯಿ ತೆರಿಗೆ ಹಣವನ್ನು ಲೂಟಿ ಮಾಡಿರುವ ಬೆಚ್ಚಿಬೀಳಿಸುವ ಮಾಹಿತಿ ಹೊರಬಂದಿದೆ.

ಈ ವಂಚನೆ ಜಾಲದ ಪ್ರಮುಖ ಸೂತ್ರಧಾರಿ (Kingpin), ಆಂಧ್ರಪ್ರದೇಶದ ಚಿತ್ತೂರು ಮೂಲದ ತೌಕೀರ್ ಅಲಿಯಾಸ್ ಮೊಹಮ್ಮದ್ (42) ಎಂಬಾತನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಈತನನ್ನು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಈತನ ಸಹಚರ ಶೇಕ್ ಜಾಕೀರ್ ಹುಸೇನ್ ಅಲಿಯಾಸ್ ಬಾಷಾ ಎಂಬಾತ ವಿದೇಶಕ್ಕೆ ಪರಾರಿಯಾಗಿದ್ದು, ಆತನಿಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ.

ಅಮಾಯಕ ಜನರ ಪಾನ್ (PAN) ಮತ್ತು ಆಧಾರ್ ಕಾರ್ಡ್‌ಗಳನ್ನು ಅಕ್ರಮವಾಗಿ ಬಳಸಿ ಹಲವು ನಕಲಿ ಕಂಪನಿಗಳನ್ನು ನೋಂದಣಿ ಮಾಡಿಕೊಳ್ಳುತ್ತಿದ್ದರು. ಯಾವುದೇ ಸರಕು ಅಥವಾ ಸೇವೆಗಳನ್ನು ಸರಬರಾಜು ಮಾಡದೆಯೇ, ಕೇವಲ ಸಿಮೆಂಟ್, ಕಬ್ಬಿಣದ ಸರಳುಗಳ ಹೆಸರಿನಲ್ಲಿ ನಕಲಿ ಬಿಲ್‌ಗಳನ್ನು (Fake Invoices) ಸೃಷ್ಟಿಸಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಪಡೆಯುತ್ತಿದ್ದರು. ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲೂ ಈ ಜಾಲ ಹಬ್ಬಿತ್ತು. ನಕಲಿ ಐಟಿಸಿಯನ್ನು ವಿವಿಧ ಕಾಂಟ್ರಾಕ್ಟರ್‌ಗಳಿಗೆ ವರ್ಗಾಯಿಸಿ ತೆರಿಗೆ ವಂಚನೆಗೆ ಸಹಕರಿಸುತ್ತಿದ್ದರು.

ಇದನ್ನೂ ಓದಿ: ಕೋಲಾರ: ಪತ್ನಿಯ ಶೀಲ ಶಂಕಿಸಿ ಮಚ್ಚಿನಿಂದ ಕೊಚ್ಚಿ ಕೊಂದ ಪತಿ

ತೆರಿಗೆ ಇಲಾಖೆಯಿಂದ ನೋಂದಣಿ ಅಥವಾ ನೋಟಿಸ್ ಬರುತ್ತಿದ್ದಂತೆಯೇ ಜಿಎಸ್‌ಟಿ ನೋಂದಣಿ ರದ್ದು ಮಾಡಿ, ಮೊಬೈಲ್ ಸಂಖ್ಯೆಗಳನ್ನು ಬದಲಿಸಿ ಅಲ್ಲಿಂದ ಪರಾರಿಯಾಗುತ್ತಿದ್ದರು. ಈ ಕುರಿತು ಬೆಂಗಳೂರಿನ ಅಣ್ಣಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗದ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಸರ್ಕಾರಕ್ಕೆ ಬರಬೇಕಿದ್ದ 102.5 ಕೋಟಿ ರೂಪಾಯಿಗಳ ತೆರಿಗೆ ಹಣವನ್ನು ವಸೂಲಿ ಮಾಡಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *