
ಬೆಂಗಳೂರು, ಏಪ್ರಿಲ್ 12: ಸಿಲಿಕಾನ್ ಸಿಟಿಯಲ್ಲಿ ಕಸ ನಿರ್ವಹಣೆ ಮಾಡುವುದೇ ದೊಡ್ಡ ಸವಾಲು. ಇದೀಗ ಬೆಂಗಳೂರು ಮತ್ತೆ ಗಾರ್ಬೇಜ್ ಸಿಟಿಯಾಗುತ್ತಿದೆಯಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಏಕೆಂದರೆ ಕಳೆದ ಒಂದು ತಿಂಗಳಿಂದ ರಸ್ತೆಯಲ್ಲಿಯೇ ಬೃಹತ್ ಕಸದ ರಾಶಿ ಬಿದ್ದು ನಾರುತ್ತಿದ್ದರು ಸ್ಚಚ್ಛ ಮಾಡಿದೆ ಕಸ ನಿರ್ವಹಣೆಯಲ್ಲಿ GBA ಸಂಪೂರ್ಣ ವಿಫಲವಾಗಿದೆ. ಈ ಮಧ್ಯೆ ಬೆಂಗಳೂರಿನ ವ್ಯಕ್ತಿಯೊಬ್ಬರು ಇದಕ್ಕಾಗಿ ‘ನಮ್ಮ ಕಸ’ (NammaKasa) ಎಂಬ ವೇದಿಕೆಯನ್ನೇ ಸೃಷ್ಟಿಸಿದ್ದಾರೆ. ಆ ಮೂಲಕ ಕಸ ನಿರ್ವಹಣೆಗೂ ಟೆಕ್ನಾಲಜಿ ಬಂದಿದೆ.
ಕಸದ ರಾಶಿ ಕಂಡು ಮೂಗು ಮುಚ್ಚಿಕೊಂಡು ಹೋಗುವ ಬದಲು, ಆ ಕಸವನ್ನು ಹಾಕಿದವರನ್ನು ಮತ್ತು ಅದನ್ನು ಎತ್ತದವರನ್ನು ಹೊಣೆಗಾರರನ್ನಾಗಿ ಮಾಡಲು ‘ನಮ್ಮ ಕಸ’ ಎಂಬ ಹೊಸ ವೇದಿಕೆ ಸೃಷ್ಟಿಯಾಗಿದೆ. ಫಿನ್ಟೆಕ್ ಸಂಸ್ಥೆಯ ಪ್ರಾಡಕ್ಟ್ ಡಿಸೈನರ್ ಜ್ಯೋತಿಶ್ ವಿ.ಎಂ. ಅವರು ಕೇವಲ ಮೂರು ಸಾವಿರ ರೂ ವೆಚ್ಚದಲ್ಲಿ ಈ ಅದ್ಭುತ ಪ್ಲಾಟ್ಫಾರ್ಮ್ ಸಿದ್ಧಪಡಿಸಿದ್ದಾರೆ.
Indian Tech & Infra Tweet
A Bengaluru man built a platform, NammaKasa, that allows people to report civic issues like roadside garbage on an online platform, bringing local MLAs and MPs onto the accountability leaderboard. pic.twitter.com/xjlVkWnPPh — Indian Tech & Infra (@IndianTechGuide) April 12, 2026
‘ನಮ್ಮ ಕಸ’ ವೇದಿಕೆಯ ಕಾರ್ಯ ಹೇಗೆ?
ಇದು ಕೇವಲ ದೂರು ನೀಡುವ ಅಪ್ಲಿಕೇಶನ್ ಅಲ್ಲ, ಬದಲಿಗೆ ಇದೊಂದು ಅಕೌಂಟೆಬಿಲಿಟಿ ಲೀಡರ್ಬೋರ್ಡ್. ರಸ್ತೆಬದಿಯಲ್ಲಿ ಕಸ ಕಂಡರೆ ಅದರ ಫೋಟೋ ತೆಗೆದು ಲೊಕೇಶನ್ ಸಮೇತ ಅಪ್ಲೋಡ್ ಮಾಡಬಹುದು. ಇಲ್ಲಿ ದೂರು ನೀಡುವವರ ಹೆಸರನ್ನು ಗೌಪ್ಯವಾಗಿಡಲಾಗುತ್ತದೆ.
ಇದನ್ನೂ ಓದಿ: ಕಸದ ರಾಶಿಗೆ ರಸ್ತೆ, ಫುಟ್ಪಾತ್ ಮಾಯ! ಜಿಬಿಎ ವಿರುದ್ಧ ರೊಚ್ಚಿಗೆದ್ದ ಜನ
ಈ ಪ್ಲಾಟ್ಫಾರ್ಮ್ನಲ್ಲಿ ನಗರದ 243 ವಾರ್ಡ್ಗಳು, 28 ಶಾಸಕರು ಮತ್ತು 4 ಸಂಸದರ ಪಟ್ಟಿ ಇದೆ. ಯಾವ ಕ್ಷೇತ್ರದಲ್ಲಿ ಅತಿ ಹೆಚ್ಚು ಕಸದ ದೂರುಗಳಿವೆಯೋ ಆ ನಾಯಕರು ಲೀಡರ್ಬೋರ್ಡ್ ಪಟ್ಟಿಯಲ್ಲಿ ಕೆಳಗೆ ಹೋಗುತ್ತಾರೆ. ಇನ್ನು ದೂರು ದಾಖಲಾದ ಕೂಡಲೇ ಸಂಬಂಧಪಟ್ಟ ಶಾಸಕರ ಎಕ್ಸ್ ಖಾತೆಗೆ ಟ್ಯಾಗ್ ಮಾಡುವ ಮೂಲಕ ಎಚ್ಚರಿಸುವ ವ್ಯವಸ್ಥೆ ಕೂಡ ಇದೆ.
230ಕ್ಕೂ ಹೆಚ್ಚು ದೂರುಗಳು
ನಮ್ಮ ಕಸ ವೇದಿಕೆ ಸಿದ್ಧಪಡಿಸಲು ಜಾಸ್ತಿ ಹಣ ಖರ್ಚು ಮಾಡಲಾಗಿಲ್ಲ. ಮುಕ್ತವಾಗಿರುವ ತಂತ್ರಜ್ಞಾನಗಳನ್ನು ಬಳಸಿಕೊಂಡು ಕೆಲವೇ ದಿನಗಳಲ್ಲಿ ಜ್ಯೋತಿಶ್ ಇದನ್ನು ರೂಪಿಸಿದ್ದಾರೆ. ಏಪ್ರಿಲ್ 4 ರಂದು ಪ್ರಾರಂಭವಾಗಿರುವ ಈ ಪ್ಲಾಟ್ಫಾರ್ಮ್ನಲ್ಲಿ ಈಗಾಗಲೇ 230ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಮಹದೇವಪುರ ಭಾಗದಲ್ಲಿ ಕಸದ ರಾಶಿ ಅತಿ ಹೆಚ್ಚಾಗಿರುವುದು ಸದ್ಯಕ್ಕೆ ಕಂಡುಬಂದಿದೆ.
ಇದನ್ನೂ ಓದಿ: Video: ಬೀದಿ ಬದಿ ಕಸ ಹಾಕುವವರಿಗೆ ವಿಶಿಷ್ಟ ಬ್ಯಾನರ್ ಹಾಕಿ ವಾರ್ನಿಂಗ್ ಕೊಟ್ಟ ವ್ಯಕ್ತಿ
ಇನ್ನು ಸರ್ಕಾರದ ಜೊತೆಗೆ ಪಾಲುದಾರಿಕೆಯಲ್ಲಿ ಕೆಲಸ ಮಾಡುವ ಉದ್ದೇಶ ಹೊಂದಿರು ಜ್ಯೋತಿಶ್, ಬೆಂಗಳೂರಿನಿಂದ ಆರಂಭವಾಗಿರುವ ಈ ಕಸದ ಕ್ರಾಂತಿಯನ್ನು ದೇಶಾದ್ಯಂತ ವಿಸ್ತರಿಸುವ ಗುರಿ ಹೊಂದಿದ್ದಾರೆ. ಹೀಗಾಗಿ ನಾಗರಿಕರು ಮತ್ತು ಸರ್ಕಾರ ಕೈಜೋಡಿಸಿದರೆ ಮಾತ್ರ ಬದಲಾವಣೆ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.