ಬೆಂಗಳೂರಿನ ಖಾಲಿ ನಿವೇಶನ ಮಾಲೀಕರಿಗೆ ಜಿಬಿಎ ಬಿಗ್ ಶಾಕ್, ಸೈಟ್ ಕ್ಲೀನ್ ಇಲ್ಲದಿದ್ರೆ ದಂಡ – Kannada News | Gba to impose penalty of up to rs 1 lakh for bengaluru plot owners not clearing garbage by august 15

ಬೆಂಗಳೂರು, (ಜುಲೈ 29): ರಾಜಧಾನಿ ಬೆಂಗಳುರಿನಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವುದು, ಖಾಲಿ ನಿವೇಶನಗಳನ್ನು ತ್ಯಾಜ್ಯ ಸುರಿಯುವ ತಾಣ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಇದಕ್ಕೆ ಬ್ರೇಕ್ ಹಾಕಲು ಈಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ. ಜಿಬಿಎ ಮುಖ್ಯ ಆಯುಕ್ತ ಮಹೇಶ್ವರರಾವ್ ಅವರ ಸೂಚನೆ ಮೇರೆಗೆ, ಆಗಸ್ಟ್ ತಿಂಗಳಿನಿಂದ ತ್ಯಾಜ್ಯದಿಂದ ಸ್ವಾತಂತ್ರ್ಯ ಎಂಬ ಬೃಹತ್ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ. ನಗರದ ರಸ್ತೆಗಳಲ್ಲಿನ ಬ್ಲಾಕ್ ಸ್ಪಾಟ್‌ಗಳು, ಕಟ್ಟಡ ತ್ಯಾಜ್ಯ, ಮರದ ಕೊಂಬೆಗಳು ಹಾಗೂ ರಸ್ತೆಬದಿ ಬಿದ್ದಿರುವ ವಿದ್ಯುತ್ ಕಂಬ, ಪೈಪ್‌ಗಳನ್ನು ಸಾಮೂಹಿಕವಾಗಿ ತೆರವುಗೊಳಿಸಲು ಪಾಲಿಕೆಗಳು ಮುಂದಾಗಿವೆ. ಇದರ ಜೊತೆಗೆ ನಗರದ ಎಲ್ಲಾ ಖಾಲಿ ನಿವೇಶನ ಮಾಲೀಕರಿಗೆ ಆಗಸ್ಟ್ 15ರ ಗಡುವು ನೀಡಲಾಗಿದೆ.

ಹೌದು… ಆಗಸ್ಟ್ 15ರೊಳಗೆ ಖಾಲಿ ನಿವೇಶನಗಳನ್ನು ಮಾಲೀಕರೇ ಸ್ವಚ್ಛಗೊಳಿಸದಿದ್ದರೆ, ಪಾಲಿಕೆ ವತಿಯಿಂದಲೇ ತ್ಯಾಜ್ಯ ತೆರವುಗೊಳಿಸಲಾಗುತ್ತದೆ. ಆದರೆ, ಅದಕ್ಕೆ ತಗುಲುವ ವೆಚ್ಚವನ್ನು ನಿವೇಶನದ ವಿಸ್ತೀರ್ಣ ಮತ್ತು ತೆರವುಗೊಳಿಸಿದ ತ್ಯಾಜ್ಯದ ಪ್ರಮಾಣಕ್ಕೆ ಅನುಗುಣವಾಗಿ ಮಾಲೀಕರಿಂದಲೇ ವಸೂಲಿ ಮಾಡಲಾಗುತ್ತದೆ. ಘನತ್ಯಾಜ್ಯ ನಿರ್ವಹಣಾ ಉಪವಿಧಿಗಳು-2020 ಹಾಗೂ ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ 2024ರ ಅಡಿಯಲ್ಲಿ ಈ ವೆಚ್ಚವನ್ನು ಆಸ್ತಿ ತೆರಿಗೆಯೊಂದಿಗೆ ವಸೂಲಿ ಮಾಡಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ಆತ್ಮಹತ್ಯೆ ಸ್ಪಾಟ್​ ಆಗುತ್ತಿದೆಯಾ ಮೆಟ್ರೋ? ಈವರೆಗೆ ಪ್ರಾಣ ಕಳೆದುಕೊಂಡವರೆಷ್ಟು?

ಖಾಲಿ ನಿವೇಶನ ಸ್ವಚ್ಛವಿಲ್ಲದಿದ್ದರೆ ದಂಡ

ಒಂದು ವೇಳೆ ತೆರಿಗೆ ಬಾಕಿ ಉಳಿಸಿಕೊಂಡರೆ, ‘ಕರ್ನಾಟಕ ಭೂಕಂದಾಯ ಕಾಯ್ದೆ 1964’ರ ಪ್ರಕಾರ ಕಠಿಣ ವಸೂಲಾತಿ ಕ್ರಮ ಜರುಗಿಸಲಾಗುತ್ತದೆ.ನಿಯಮ ಉಲ್ಲಂಘಿಸುವ ನಿವೇಶನದಾರರಿಗೆ ದಂಡದ ಬಿಸಿಯೂ ತಟ್ಟಲಿದೆ. ಮೊದಲ ಉಲ್ಲಂಘನೆಗೆ 25,000 ರೂಪಾಯಿ ದಂಡ ವಿಧಿಸಿದರೆ, ನಂತರದ ಉಲ್ಲಂಘನೆಗಳಿಗೆ 50,000 ದಿಂದ 1 ಲಕ್ಷ ರೂಪಾಯಿಯವರೆಗೆ ದಂಡ ಹಾಕಲಾಗುತ್ತದೆ. ಇನ್ನು ನಿವೇಶನಗಳನ್ನು ಸ್ವಚ್ಛಗೊಳಿಸಿದ ಬಳಿಕ, ಅಲ್ಲಿ ಮತ್ತೆ ಅನಧಿಕೃತವಾಗಿ ತ್ಯಾಜ್ಯ ವಿಲೇವಾರಿಯಾಗದಂತೆ ಸುತ್ತಲೂ ಬೇಲಿ ಅಥವಾ ಕಾಂಪೌಂಡ್ ಗೋಡೆ ನಿರ್ಮಿಸಿಕೊಳ್ಳುವುದು ಸಹ ಮಾಲೀಕರ ಜವಾಬ್ದಾರಿಯಾಗಿದೆ.

ವಾಟ್ಸ್‌ಆಪ್ ಮೂಲಕ ದೂರು ಸಲ್ಲಿಸಲು ಅವಕಾಶ

ಒಂದು ವೇಳೆ ನಿಮ್ಮ ಸುತ್ತಮುತ್ತಲಿನ ಖಾಲಿ ನಿವೇಶನಗಳನ್ನು ಮಾಲೀಕರು ಆಗಸ್ಟ್ 15ರೊಳಗೆ ಸ್ವಚ್ಛಗೊಳಿಸದಿದ್ದರೆ, ಸಾರ್ವಜನಿಕರೂ ದೂರು ನೀಡಬಹುದು. ಅಂತಹ ನಿವೇಶನಗಳ ಛಾಯಾಚಿತ್ರ ಹಾಗೂ GPS Co-ordinates ನೊಂದಿಗೆ 9448197197 ನಂಬರ್‌ಗೆ ವಾಟ್ಸ್‌ಆಪ್ ಮೂಲಕ ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ದೂರು ನೀಡುವ ಸಾರ್ವಜನಿಕರ ಮಾಹಿತಿಯನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಗೌಪ್ಯವಾಗಿಡಲಿದ್ದಾರೆ. ಒಟ್ಟಿನಲ್ಲಿ, ಖಾಲಿ ನಿವೇಶನ ಇಟ್ಟುಕೊಂಡು ಸುಮ್ಮನೆ ಕುಳಿತರೆ ಇನ್ಮುಂದೆ ಜೇಬಿಗೆ ಕತ್ತರಿ ಬೀಳುವುದು ಖಚಿತ.

ವರದಿ: ಅರುಣ್ ಕುಮಾರ್ ಟಿವಿ9 ಬೆಂಗಳೂರು

Source link

Leave a Reply

Your email address will not be published. Required fields are marked *