ಬೆಂಗಳೂರು, ಏಪ್ರಿಲ್ 29: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು (BBMP) ವಿಭಜಿಸಿ, ಸರ್ಕಾರವು ಐದು ನಗರ ಪಾಲಿಕೆಗಳುಳ್ಳ ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು (GBA) ಅಸ್ತಿತ್ವಕ್ಕೆ ತಂದಿತ್ತು. ಆದರೆ, ಈ ಹೊಸ ವ್ಯವಸ್ಥೆಯಲ್ಲಿ ಈಗ ಆರ್ಥಿಕ ಸಂಕಷ್ಟದ ಭೀತಿ ಎದುರಾಗಿದ್ದು, ಐದು ಪಾಲಿಕೆಗಳ ಸಂಖ್ಯೆಯನ್ನು ಕಡಿತಗೊಳಿಸಿ ಅಥವಾ ವಿಲೀನ ಮಾಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ತೆರೆಮರೆಯ ಚರ್ಚೆಗಳು ಆರಂಭವಾಗಿವೆ.
ವೇತನಕ್ಕೂ ಇಲ್ಲದ ಹಣ
ಬಿಬಿಎಂಪಿ ಇತಿಹಾಸದ ಪುಟ ಸೇರಿದ ಬಳಿಕ ಜನ್ಮತಾಳಿದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಅಡಿಯಲ್ಲಿರುವ ಐದು ನಗರ ಪಾಲಿಕೆಗಳ ಪೈಕಿ ಕೆಲವು ಪಾಲಿಕೆಗಳಲ್ಲಿ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ವಿಶೇಷವಾಗಿ ಪಶ್ಚಿಮ ನಗರ ಪಾಲಿಕೆ ಸೇರಿದಂತೆ ಒಂದಷ್ಟು ಪಾಲಿಕೆಗಳಲ್ಲಿ ಸಿಬ್ಬಂದಿಯ ವೇತನ ಪಾವತಿಸಲು ಕೂಡ ಆದಾಯದ ಕೊರತೆ ಎದುರಾಗಿದೆ. ಸ್ವಂತ ಆಧಾರದ ಮೇಲೆ ಆರ್ಥಿಕ ವೆಚ್ಚ ಸರಿದೂಗಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದ್ದು, ಅನುದಾನಕ್ಕಾಗಿ ಪಾಲಿಕೆಗಳು ಈಗಲೂ ಸರ್ಕಾರವನ್ನೇ ನಂಬಿ ಕುಳಿತುಕೊಳ್ಳುವಂತಾಗಿದೆ.
ಆಯುಕ್ತರು ಮತ್ತು ವಿರೋಧ ಪಕ್ಷದ ನಿಲುವು
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಾದ ಎಂ. ಮಹೇಶ್ವರ್ ರಾವ್ ಅವರ ಪ್ರಕಾರ, ಪಶ್ಚಿಮ ನಗರ ಪಾಲಿಕೆಯ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಅನುದಾನಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಪಾಲಿಕೆಗಳ ಸಂಖ್ಯೆ ಇಳಿಕೆ ಅಥವಾ ವಿಲೀನದ ಬಗ್ಗೆ ಸರ್ಕಾರವೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ. ಮತ್ತೊಂದೆಡೆ, ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್ ಅವರು, ಈ ಜಿಬಿಎ ರಚನೆಯೇ ಅವೈಜ್ಞಾನಿಕ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬಿಎಂಟಿಸಿ, ಮೆಟ್ರೋದಲ್ಲಿ ಸಂಚಾರ ಮಾಡಲು ಒಂದೇ ಸ್ಮಾರ್ಟ್ ಕಾರ್ಡ್ ಸಾಕು! ಶೀಘ್ರದಲ್ಲೇ ಹೊಸ ವ್ಯವಸ್ಥೆ
ಅಭಿವೃದ್ಧಿಯ ಹತ್ತಾರು ಭರವಸೆಗಳೊಂದಿಗೆ ಜಾರಿಗೆ ಬಂದ ಈ ಹೊಸ ವ್ಯವಸ್ಥೆಯಲ್ಲಿ ಆದಾಯದ ಕೊರತೆ ಕಂಡುಬಂದಿರುವುದು ಸರ್ಕಾರಕ್ಕೆ ಮುಜುಗರ ಉಂಟುಮಾಡಿದೆ. ಆರ್ಥಿಕ ಸ್ಥಿತಿ ಸುಧಾರಿಸಲು ಸರ್ಕಾರ ಪಾಲಿಕೆಗಳ ವಿಲೀನಕ್ಕೆ ಮುಂದಾಗುತ್ತದೆಯೇ ಎಂದು ಕಾದು ನೋಡಬೇಕಿದೆ.
ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
