ಬೆಂಗಳೂರು ಇಂಡಿಯಾ ನ್ಯಾನೋ 2026; ಎಐ, ನ್ಯಾನೋ, ಸೆಮಿಕಂಡಕ್ಟರ್ ಕ್ಷೇತ್ರಗಳಲ್ಲಿ ಕರ್ನಾಟಕ ಸಂಚಲನ – Kannada News | Bengaluru India Nano 2026, Karnataka continues to surge ahead in various technologies

ಬೆಂಗಳೂರು ಇಂಡಿಯಾ ನ್ಯಾನೋ 2026Image Credit source: bengaluruindianano.in

ಬೆಂಗಳೂರು, ಆಗಸ್ಟ್ 5: ದೇಶದ ಪ್ರಮುಖ ನ್ಯಾನೋ ತಂತ್ರಜ್ಞಾನ ಸಮಾವೇಶವಾದ ‘ಬೆಂಗಳೂರು ಇಂಡಿಯಾ ನ್ಯಾನೋ 2026’ (14ನೇ ಆವೃತ್ತಿ) ನಗರದ ‘ದಿ ಲಲಿತ್’ ಹೋಟೆಲ್‌ನಲ್ಲಿ ನಿನ್ನೆ ಮಂಗಳವಾರ ಉದ್ಘಾಟನೆಗೊಂಡಿತು. “Nanotech’s Next Frontier: AI & Beyond, Conceive, Converge, Commercialize” ಎಂಬ ಶೀರ್ಷಿಕೆಯಡಿಯಲ್ಲಿ ಈ ಮೂರು ದಿನಗಳ ಪ್ರಮುಖ ಸಮಾವೇಶ ನಡೆಯುತ್ತಿದೆ. ಆಗಸ್ಟ್ 3ರಂದೇ ಆರಂಭಗೊಂಡ ಈ ಸಮಾವೇಶ ಇವತ್ತು ಸಮಾಪನಗೊಳ್ಳುತ್ತಿದೆ. ಕರ್ನಾಟಕದ ತಂತ್ರಜ್ಞಾನ ಪ್ರೋತ್ಸಾಹದ ಮುಂದುವರಿದ ಭಾಗವಾಗಿ 2007ರಿಂದ ಎರಡು ವರ್ಷಕ್ಕೊಮ್ಮೆ ಈ ಬೆಂಗಳೂರು ನ್ಯಾನೋ ಸಮಾವೇಶ ನಡೆಯುತ್ತಾ ಬಂದಿದೆ.

ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (KSTePS) ಹಾಗೂ ಜವಾಹರಲಾಲ್ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರ (JNCASR) ಜಂಟಿಯಾಗಿ ಈ ಬಾರಿಯ ಕಾರ್ಯಕ್ರಮವನ್ನು ಆಯೋಜಿಸಿವೆ. ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಂಶೋಧನೆಗಳನ್ನು ಕೇವಲ ಪ್ರಯೋಗಾಲಯಗಳಿಗೆ ಸೀಮಿತಗೊಳಿಸದೆ, ಅವುಗಳನ್ನು ನಿಜವಾದ ಉತ್ಪನ್ನಗಳಾಗಿ ಪರಿವರ್ತಿಸಿ ವಾಣಿಜ್ಯೀಕರಣಗೊಳಿಸುವುದರ ಅಗತ್ಯವನ್ನು ಪ್ರತಿಪಾದಿಸಿದರು.

ವಿವಿಧ ತಂತ್ರಜ್ಞಾನಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿ: ಡಿಕೆಶಿ

“ಕರ್ನಾಟಕವು ಈಗಾಗಲೇ ತಂತ್ರಜ್ಞಾನ ರಾಜಧಾನಿಯಾಗಿ ಹೊರಹೊಮ್ಮಿದೆ. ಮುಂಬರುವ ದಿನಗಳಲ್ಲಿ ಡಿಜಿಟಲ್ ತಂತ್ರಜ್ಞಾನ ಮಾತ್ರವಲ್ಲದೆ ನ್ಯಾನೋ ತಂತ್ರಜ್ಞಾನ, ಸೆಮಿಕಂಡಕ್ಟರ್‌ಗಳು ಹಾಗೂ ಆಳವಾದ ತಂತ್ರಜ್ಞಾನ (Deep-tech) ಆವಿಷ್ಕಾರಗಳಲ್ಲಿಯೂ ರಾಜ್ಯವು ಮುಂಚೂಣಿಯಲ್ಲಿರಲಿದೆ” ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

ಇದನ್ನೂ ಓದಿ: ರೆಪೋ ದರ ಯಥಾಸ್ಥಿತಿ, ತಟಸ್ಥ ನೀತಿ; ಜಿಡಿಪಿ ಶೇ. 6.7, ಹಣದುಬ್ಬರ ಶೇ. 5; ಇದು ಆರ್​ಬಿಐ ಎಂಪಿಸಿ ಸಭೆ ಮುಖ್ಯಾಂಶಗಳು

ಐಟಿ-ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, “ಕೃತಕ ಬುದ್ಧಿಮತ್ತೆ (AI), ನ್ಯಾನೋ ತಂತ್ರಜ್ಞಾನ, ಬಯೋ ತಂತ್ರಜ್ಞಾನ ಮತ್ತು ಸೆಮಿಕಂಡಕ್ಟರ್‌ಗಳ ಸಮ್ಮಿಲನವು ಮುಂದಿನ ಆವಿಷ್ಕಾರದ ಅಲೆಯಾಗಿದ್ದು, ಕರ್ನಾಟಕವು ಇದಕ್ಕೆ ಸೂಕ್ತ ಇಕೋಸಿಸ್ಟಂ ಹೊಂದಿದೆ” ಎಂದರು.

ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಸನ್ಮಾನ

ಅದೇ ವೇಳೆ, ಭಾರತದ ನ್ಯಾನೋ ತಂತ್ರಜ್ಞಾನ ಕ್ಷೇತ್ರಕ್ಕೆ ನೀಡಿದ ಮಹೋನ್ನತ ಕೊಡುಗೆಗಾಗಿ ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರನ್ನು ಗೌರವಿಸಲಾಯಿತು. ಈ ಬಾರಿಯ ‘ಪ್ರೊ. ಸಿ.ಎನ್.ಆರ್. ರಾವ್ ಬೆಂಗಳೂರು ಇಂಡಿಯಾ ನ್ಯಾನೋ ಸೈನ್ಸ್ ಅವಾರ್ಡ್’ ಅನ್ನು ಬೆಂಗಳೂರಿನ ಸೆಂಟರ್ ಫಾರ್ ನ್ಯಾನೋ ಅಂಡ್ ಸಾಫ್ಟ್ ಮ್ಯಾಟರ್ ಸೈನ್ಸಸ್ (CeNS) ನಿರ್ದೇಶಕರಾದ ಪ್ರೊ. ಬಿ.ಎಲ್.ವಿ. ಪ್ರಸಾದ್ ಅವರಿಗೆ ಪ್ರದಾನ ಮಾಡಲಾಯಿತು.

ಸಮಾವೇಶದ ಪ್ರಮುಖ ಆಕರ್ಷಣೆಗಳು

ಬೆಂಗಳೂರು ಇಂಡಿಯಾ ನ್ಯಾನೋ ಸಮಾವೇಶವು ಭಾರತದ ಅತಿದೊಡ್ಡ ನ್ಯಾನೋ ಸಮಾವೇಶವಾಗಿದೆ. 10ಕ್ಕೂ ಹೆಚ್ಚು ದೇಶಗಳಿಂದ 800ಕ್ಕೂ ಅಧಿಕ ಪ್ರತಿನಿಧಿಗಳು ಸೇರಿದಂತೆ ನಾಲ್ಕು ಸಾವಿರಕ್ಕೂ ಅಧಿಕ ಜನರು ಪಾಲ್ಗೊಳ್ಳುತ್ತಿದ್ದಾರೆ. 80ಕ್ಕೂ ಅಧಿಕ ಭಾಷಣಗಳು ಈ ವೇಳೆ ನಡೆಯುತ್ತಿವೆ.

ಜರ್ಮನಿ, ಫ್ರಾನ್ಸ್ ಮತ್ತು ನೆದರ್ಲ್ಯಾಂಡ್ಸ್ ದೇಶಗಳ ಸಹಯೋಗದೊಂದಿಗೆ ‘ಗ್ಲೋಬಲ್ ಇನ್ನೋವೇಶನ್ ಅಲೈಯನ್ಸ್’ (GIA) ಅಡಿಯಲ್ಲಿ ವಿಶೇಷ ಸಂಶೋಧನಾ ಗೋಷ್ಠಿಗಳು ಹಾಗೂ ಅಂತಾರಾಷ್ಟ್ರೀಯ ಪ್ರದರ್ಶನವೂ ಕಾರ್ಯಕ್ರಮದ ಭಾಗವಾಗಿ ನಡೆಯಲಿದೆ. ಅಪ್ಲೈಡ್ ಮೆಟೀರಿಯಲ್ಸ್, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ, ಇಂಡಿಯನ್ ಆಯಿಲ್, ಡೆಟ್ರಾಯ್ಟ್ ಎಂಜಿನಿಯರ್ಡ್ ಪ್ರಾಡಕ್ಟ್ಸ್, ಅಪ್ಲೈಡ್ ಸೈನ್ಸ್ ರಾಮಯ್ಯ ವಿವಿ, ಎಸಿಟಿ ಎಂಟರ್​ಪ್ರೈಸ್ ಮತ್ತಿತರ ಸಂಘ ಸಂಸ್ಥೆಗಳು ಕಾರ್ಯಕ್ರಮದ ಪಾರ್ಟ್ನರ್ಸ್ ಆಗಿವೆ.

ಇದನ್ನೂ ಓದಿ: ಕಂಪನಿ ಎಂಡಿ ಮತ್ತು ನಿರ್ದೇಶಕರಾಗಲು 21 ಅಲ್ಲ, 18 ವರ್ಷ ವಯಸ್ಸಾಗಿದ್ದರೂ ಸಾಕು; ಸರ್ಕಾರದ ಮುಂದಿದೆ ಪ್ರಸ್ತಾಪ

ಅಡ್ವಾನ್ಸ್ಡ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ತಂತ್ರಜ್ಞಾನದ ಬಗ್ಗೆ ತರಗತಿಗಳು ನಡೆದಿವೆ. ವಿಜ್ಞಾನ ಮತ್ತು ಎಂಜಿನಿಯರಿಂಗ್​ನಲ್ಲಿ ಎಐ ಮತ್ತು ಎಂಎಲ್​ನ ಸಮರ್ಪಕ ಬಳಕೆ ಹೇಗೆ, ನ್ಯಾನೋ ತಂತ್ರಜ್ಞಾನದಲ್ಲಿ ಹೊಸ ಸುಧಾರಣೆ ಏನು ಇವುಗಳ ಬಗ್ಗೆಯೂ ಟುಟೋರಿಯನ್ಸ್ ಇವೆ.

ಸೆಮಿಕಂಡಕ್ಟರ್, ಕೃಷಿ, ಆರೋಗ್ಯ, ಇಂಧನ, ಪರಿಸರ ಕ್ಷೇತ್ರಗಳಲ್ಲಿ ನ್ಯಾನೋ ಟೆಕ್ನಾಲಜಿ ಬಳಕೆ ಬಗ್ಗೆ ತರಬೇತಿಗಳು ಇವೆ. ಡೀಪ್ ಟೆಕ್ ಬಗ್ಗೆಯೂ ವಿಚಾರ ಸಂಕಿರಣ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *