
ಬೆಂಗಳೂರು, ಮಾರ್ಚ್ 31: ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವಕ್ಕೆ ಕೌಂಟ್ಡೌನ್ ಆರಂಭವಾಗಿದೆ. ಇದರ ಮೊದಲ ಭಾಗವಾಗಿ ಇಂದು ಬೆಳಗ್ಗೆ ಸಂಪಂಗಿ ರಾಮನಗರದಲ್ಲಿರುವ ಸಂಪಂಗಿಕೆರೆಯ ಶಕ್ತಿಪೀಠದಲ್ಲಿ ಹಸಿ ಕರಗ ಶಕ್ತ್ಯೋತ್ಸವ ಅದ್ಧೂರಿಯಾಗಿ ಜರುಗಿದೆ. ಎ. ಜ್ಞಾನೇಂದ್ರ ಸ್ವಾಮಿಯವರು 16ನೇ ಬಾರಿಗೆ ಯಶಸ್ವಿಯಾಗಿ ಹಸಿ ಕರಗವನ್ನು ಹೊತ್ತಿದ್ದು, ರಾಜಬೀದಿಗಳಲ್ಲಿ ಸಂಚರಿಸಿ ಜಿಬಿಎ ಮುಖ್ಯ ಕಚೇರಿ ತಲುಪಿದರು. ಅಲ್ಲಿ ಪೂಜೆ ಸಲ್ಲಿಸಿ, ಕೆ.ಆರ್. ಮಾರುಕಟ್ಟೆ ರಸ್ತೆಯ ಮೂಲಕ ತಿಗಳರಪೇಟೆಯಲ್ಲಿರುವ ಶ್ರೀ ಧರ್ಮರಾಯಸ್ವಾಮಿ ದೇವಾಲಯಕ್ಕೆ ತೆರಳಿದ್ದಾರೆ. ನಾಳೆ ಮಧ್ಯರಾತ್ರಿ ಚೈತ್ರ ಪೌರ್ಣಮಿಯಂದು ಹೂವಿನ ಕರಗದ ರೂಪದಲ್ಲಿ ಹೊರಬಂದು ಕೆಂಪೇಗೌಡರು ನಿರ್ಮಿಸಿರುವ 25 ಪೇಟೆಗಳಲ್ಲಿ ಲಕ್ಷಾಂತರ ಜನರಿಗೆ ದರ್ಶನ ನೀಡುತ್ತಾರೆ. ನಂತರ ನಾಡಿದ್ದು ಬೆಳಗ್ಗೆ 6 ಗಂಟೆಯ ಒಳಗಾಗಿ ಧರ್ಮರಾಯಸ್ವಾಮಿ ದೇವಾಲಯವನ್ನು ತಲುಪುತ್ತಾರೆ. ಈ ಮೂಲಕ ಮೂರು ದಿನಗಳ ಕರಗ ಮಹೋತ್ಸವ ಸಂಪನ್ನಗೊಳ್ಳಲಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.