ಬೆಂಗಳೂರು ಮೆಟ್ರೋ ಪ್ರಯಾಣಿಕರ ಸಂಖ್ಯೆ ನಿರೀಕ್ಷೆಗಿಂತ ಕಡಿಮೆ: CAG ವರದಿಯಲ್ಲಿ ಮಹತ್ವದ ಅಂಶಗಳು ಬಯಲು – Kannada News | Bengaluru Metro Ridership Falls Short of Projections, CAG Flags Revenue and Land Cost Issues

ಬೆಂಗಳೂರು, ಆಗಸ್ಟ್ 11: ಬೆಂಗಳೂರಿನ ಮೆಟ್ರೋ (BMRCL Bengaluru Metro) ರೈಲುಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಯಾಣಿಕರ ಸಂಖ್ಯೆ ದಾಖಲಾಗಿಲ್ಲ ಎಂದು ಭಾರತೀಯ ಮಹಾಲೆಕ್ಕಪರಿಶೋಧಕರ (CAG) ಕಾರ್ಯಕ್ಷಮತಾ ಲೆಕ್ಕಪರಿಶೋಧನಾ ವರದಿ ತಿಳಿಸಿದೆ. ಮೆಟ್ರೋ ಪ್ರಯಾಣಿಕರ ಸಂಖ್ಯೆ ಮತ್ತು ಆದಾಯದ ಗುರಿ ಸಾಧನೆಯಲ್ಲಿ ಭಾರಿ ಅಂತರ ಕಂಡುಬಂದಿದ್ದು, ಭೂಸ್ವಾಧೀನ ವೆಚ್ಚವೂ ಸಾವಿರಾರು ಕೋಟಿ ರೂಪಾಯಿ ಹೆಚ್ಚಾಗಿದೆ. ಸಿಎಜಿಯ (Implementation of Phase 1 and Phase 2 of Bangalore Metro Rail Project by Bangalore Metro Rail Corporation Limited) ವರದಿಯನ್ನು ಸೋಮವಾರ ಸಂಸತ್ತಿನಲ್ಲಿ ಮಂಡಿಸಲಾಗಿದೆ. ವರದಿಯಲ್ಲಿ ಬೆಂಗಳೂರು ಮೆಟ್ರೋ ಹಂತ-1 ಮತ್ತು ಹಂತ-2ರ ಯೋಜನೆ, ಹಣಕಾಸು ನಿರ್ವಹಣೆ, ಪ್ರಯಾಣಿಕರ ಸಂಖ್ಯೆ, ಭೂಸ್ವಾಧೀನ ಹಾಗೂ ಸಾರ್ವಜನಿಕ ಸಾರಿಗೆ ಸಂಪರ್ಕದ ಕುರಿತು ಹಲವು ಅಂಶಗಳನ್ನು ಉಲ್ಲೇಖಿಸಲಾಗಿದೆ.

ಪ್ರಯಾಣಿಕರ ಸಂಖ್ಯೆ ನಿರೀಕ್ಷೆಗಿಂತ ಭಾರಿ ಕಡಿಮೆ

2021ರಲ್ಲಿ ಮೆಟ್ರೋದ ಪೀಕ್ ಅವರ್ ಪೀಕ್ ಡೈರೆಕ್ಷನ್ ಟ್ರಾಫಿಕ್ (PHPDT) 6,429ರಿಂದ 8,852 ಪ್ರಯಾಣಿಕರಷ್ಟಿತ್ತು. ಆದರೆ ಹೆವಿ ಮೆಟ್ರೋ ವ್ಯವಸ್ಥೆ ಪ್ರಸ್ತಾಪಿಸಬೇಕಿದ್ದರೆ ನಿಗದಿಪಡಿಸಿದ್ದ ಮಾನದಂಡ 15,000 ಪ್ರಯಾಣಿಕರಾಗಿತ್ತು. 2023ರಲ್ಲೂ BMRCL 2007ಕ್ಕೆ ಮಾಡಿದ್ದ ಮೂಲ ಪ್ರಯಾಣಿಕರ ಗುರಿಯನ್ನು ಸಾಧಿಸಿರಲಿಲ್ಲ ಎಂದು ಸಿಎಜಿ ಗಮನಿಸಿದೆ.

ಮೆಟ್ರೋ ಆದಾಯದ ಮೇಲೂ ಪರಿಣಾಮ

ಪ್ರಯಾಣಿಕರ ಕೊರತೆಯಿಂದ ಮೆಟ್ರೋ ಆದಾಯದ ಮೇಲೂ ಪರಿಣಾಮ ಬೀರಿದೆ. 2016-17ರಿಂದ 2022-23ರ ಅವಧಿಯಲ್ಲಿ ₹7,736.70 ಕೋಟಿ ಆದಾಯದ ನಿರೀಕ್ಷೆ ಇತ್ತು. ಆದರೆ ವಾಸ್ತವವಾಗಿ ₹1,758.13 ಕೋಟಿ ಮಾತ್ರ ಸಂಗ್ರಹವಾಗಿದ್ದು, ಗುರಿಯ ಕೇವಲ 22.72% ಸಾಧನೆಯಾಗಿದೆ.

ಪ್ರಯಾಣಿಕರು ಕಡಿಮೆಯಾಗಲು ಕಾರಣವೇನು?

ಮೆಟ್ರೋ ನಿಲ್ದಾಣಗಳ ಸುತ್ತಮುತ್ತ ಸೂಕ್ತ ಕೊನೆಯ ಹಂತದ ಸಂಪರ್ಕ ವ್ಯವಸ್ಥೆ, ಬಿಎಂಟಿಸಿ ಜೊತೆ ಸಮರ್ಪಕ ಸಂಪರ್ಕ ಮತ್ತು ಪಾರ್ಕಿಂಗ್ ಸೌಲಭ್ಯಗಳ ಕೊರತೆಯೂ ಪ್ರಯಾಣಿಕರ ಸಂಖ್ಯೆ ಹೆಚ್ಚಳಕ್ಕೆ ಅಡ್ಡಿಯಾಗಿದೆ ಎಂದು ವರದಿ ಹೇಳಿದೆ.

ಭೂಸ್ವಾಧೀನ ವೆಚ್ಚ ₹6,603 ಕೋಟಿ ಹೆಚ್ಚಳ

ಮೆಟ್ರೋ ಯೋಜನೆಯ ಭೂಸ್ವಾಧೀನ ವೆಚ್ಚದಲ್ಲಿ ₹6,603.39 ಕೋಟಿ ಹೆಚ್ಚಳವಾಗಿರುವುದನ್ನು CAG ಗುರುತಿಸಿದೆ. ಹಂತ-1ರಲ್ಲಿ ₹835.81 ಕೋಟಿ ಹಾಗೂ ಹಂತ-2ರಲ್ಲಿ ₹5,767.58 ಕೋಟಿ ಹೆಚ್ಚುವರಿ ವೆಚ್ಚವಾಗಿದೆ. ಹಂತ-1ರಲ್ಲಿ 45.24 ಹೆಕ್ಟೇರ್ ಭೂಮಿ ಅಗತ್ಯವೆಂದು ಅಂದಾಜಿಸಲಾಗಿದ್ದರೂ 62.67 ಹೆಕ್ಟೇರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಹಂತ-2ರಲ್ಲಿ 165.09 ಹೆಕ್ಟೇರ್ ಅಗತ್ಯವೆಂದು ಅಂದಾಜಿಸಿದ್ದರೂ 145.16 ಹೆಕ್ಟೇರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಭೂಸ್ವಾಧೀನ ವಿಳಂಬದಿಂದ ಹೆಚ್ಚುವರಿ ₹186.86 ಕೋಟಿ ಬಡ್ಡಿ ವೆಚ್ಚವೂ ತೆರಬೇಕಾಗಿದೆ ಎಂದು ವರದಿ ಉಲ್ಲೇಖಿಸಿದೆ. ಅಲ್ಲದೆ, ₹294.72 ಕೋಟಿ ಹೆಚ್ಚುವರಿ ಭೂ ಪರಿಹಾರ ಪಾವತಿಯನ್ನೂ ಸಿಎಜಿ ಉಲ್ಲೇಖಿಸಿದೆ.

ನಾಗಸಂದ್ರ, ಪೀಣ್ಯ, ಪೀಣ್ಯ ಇಂಡಸ್ಟ್ರಿಯಲ್ ಏರಿಯಾ, ಜಾಲಹಳ್ಳಿ ಮತ್ತು ದಾಸರಹಳ್ಳಿ ಮೆಟ್ರೋ ನಿಲ್ದಾಣಗಳ ಬಳಿ ರಾಷ್ಟ್ರೀಯ ಹೆದ್ದಾರಿ ದಾಟಲು ಸೂಕ್ತ ಫುಟ್ ಓವರ್‌ಬ್ರಿಡ್ಜ್ ಅಥವಾ ಅಂಡರ್‌ಪಾಸ್‌ಗಳ ಕೊರತೆಯನ್ನೂ ಸಿಎಜಿ ಪ್ರಸ್ತಾಪಿಸಿದೆ.

ಹಣಕಾಸಿನ ಮೇಲೂ ಸಿಎಜಿ ಕಳವಳ

2013-14ರಿಂದ 2021-22ರವರೆಗೆ ಬಿಎಂಆರ್​ಸಿಎಲ್ ನಷ್ಟ ಅನುಭವಿಸಿದೆ. ಸ್ವಂತ ಆದಾಯದಿಂದ ಬಾಹ್ಯ ಸಾಲಗಳ ಮರುಪಾವತಿ ಹೊಣೆ ನಿಭಾಯಿಸಲು ಸಾಧ್ಯವಾಗದ ಕಾರಣ ರಾಜ್ಯ ಸರ್ಕಾರದ ಮೇಲಿನ ಅವಲಂಬನೆ ಮುಂದುವರಿದಿದೆ ಎಂದು ವರದಿ ಹೇಳಿದೆ. ಮೆಟ್ರೋ ಆಸ್ತಿ ಬಳಕೆಯಲ್ಲಿಯೂ ಕೊರತೆ ಕಂಡುಬಂದಿದ್ದು, ಸುಮಾರು 2.23 ಲಕ್ಷ ಚದರ ಅಡಿ ಮೆಟ್ರೋ ಆಸ್ತಿ ಖಾಲಿ ಉಳಿದಿತ್ತು. ಇದರಿಂದ ಅಂದಾಜು ₹38.53 ಕೋಟಿ ಗುತ್ತಿಗೆ ಆದಾಯದ ಅವಕಾಶ ಕಳೆದುಹೋಗಿದೆ ಎಂದು ಸಿಎಜಿ ಲೆಕ್ಕ ಹಾಕಿದೆ.

ಸಿಎಜಿ ವರದಿಯ ಪ್ರಮುಖ ಅಂಕಿ-ಅಂಶಗಳು

  • ನಿರೀಕ್ಷಿತ ಆದಾಯ: ₹7,736.70 ಕೋಟಿ
  • ವಾಸ್ತವ ಆದಾಯ: ₹1,758.13 ಕೋಟಿ
  • ಗುರಿ ಸಾಧನೆ: 22.72%
  • ಭೂಸ್ವಾಧೀನ ವೆಚ್ಚ ಹೆಚ್ಚಳ: ₹6,603.39 ಕೋಟಿ
  • ಹೆಚ್ಚುವರಿ ಭೂ ಪರಿಹಾರ: ₹294.72 ಕೋಟಿ
  • ಭೂಸ್ವಾಧೀನ ವಿಳಂಬದ ಹೆಚ್ಚುವರಿ ಬಡ್ಡಿ: ₹186.86 ಕೋಟಿ
  • ಖಾಲಿ ಮೆಟ್ರೋ ಆಸ್ತಿ: 2.23 ಲಕ್ಷ ಚದರ ಅಡಿ
  • ಕಳೆದುಹೋದ ಸಾಧ್ಯ ಗುತ್ತಿಗೆ ಆದಾಯ: ₹38.53 ಕೋಟಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *