ಬೆಂಗಳೂರು ಸೇರಿ ರಾಜ್ಯದಲ್ಲಿ ಮಿತಿಮೀರಿದ ಬೀದಿ ನಾಯಿ ಹಾವಳಿ: ಕೇವಲ 4 ತಿಂಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಜನರಿಗೆ ನಾಯಿ ಕಡಿತ, 25 ಸಾವು – Kannada News | Dog Bite Cases in Bengaluru, Karnataka Spikes to 2 Lakh in 4 Months: 25 Deaths Reported, Health Dept on Alert

ಬೆಂಗಳೂರು, ಮೇ 6: ರಾಜಧಾನಿ ಬೆಂಗಳೂರು (Bengaluru) ಸೇರಿದಂತೆ ಇಡೀ ರಾಜ್ಯದಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಮಿತಿಮೀರುತ್ತಿದೆ. ಬೇಸಿಗೆಯ ತಾಪಮಾನ ಏರಿಕೆಯೊಂದಿಗೆ ಶ್ವಾನಗಳ ಆಕ್ರಮಣಶೀಲತೆಯೂ ಹೆಚ್ಚಾಗಿದ್ದು, ನಾಯಿ ಕಡಿತ ಪ್ರಕರಣಗಳ ಸಂಖ್ಯೆ ಆತಂಕಕಾರಿ ರೀತಿಯಲ್ಲಿ ದುಪ್ಪಟ್ಟಾಗಿದೆ. ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿರುವ ಇತ್ತೀಚಿನ ಅಂಕಿಅಂಶಗಳು ಸಾರ್ವಜನಿಕರಲ್ಲಿ ಭೀತಿ ಮೂಡಿಸುವಂತಿವೆ.

ಮುಖ್ಯಾಂಶಗಳು

  • ಏಪ್ರಿಲ್ ಒಂದೇ ತಿಂಗಳಲ್ಲಿ 50 ಸಾವಿರಕ್ಕೂ ಹೆಚ್ಚು ಪ್ರಕರಣ; 6 ಸಾವು.
  • ರಾಜ್ಯದಲ್ಲಿ ಕಳೆದ 4 ತಿಂಗಳಲ್ಲಿ 2,05,998 ನಾಯಿ ಕಡಿತ ಪ್ರಕರಣಗಳು ದಾಖಲು.
  • ನಾಯಿ ಕಡಿತದಿಂದಾಗಿ ಜನವರಿಯಿಂದ ಈವರೆಗೆ ರಾಜ್ಯದಲ್ಲಿ 25 ಜನರು ಬಲಿ.

ತಾಪಮಾನ ಏರಿಕೆಯೇ ಕಾರಣವಂತೆ!

ಸಾಮಾನ್ಯವಾಗಿ ಕ್ಯೂಟ್ ಮತ್ತು ಹ್ಯೂಮನ್ ಫ್ರೆಂಡ್ಲಿ ಎಂದೇ ಕರೆಸಿಕೊಳ್ಳುವ ನಾಯಿಗಳು ಬೇಸಿಗೆಯಲ್ಲಿ ತಾಪಮಾನ ಏರಿಕೆಯ ಕಾರಣದಿಂದ ಹೆಚ್ಚು ಆಕ್ರಮಣಕಾರಿಯಾಗುತ್ತವೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಈ ವರ್ಷದ ತೀವ್ರವಾದ ಬೇಸಿಗೆಯು ನಾಯಿ ಕಡಿತ ಪ್ರಕರಣಗಳ ಸಂಖ್ಯೆಯನ್ನು ದಾಖಲೆ ಮಟ್ಟಕ್ಕೆ ಏರಿಸಿದೆ. ಈ ವರ್ಷದ ಆರಂಭದಿಂದ ಅಂದರೆ ಜನವರಿಯಿಂದ ಏಪ್ರಿಲ್ 26ರವರೆಗೆ ರಾಜ್ಯಾದ್ಯಂತ ಒಟ್ಟು 2,05,998 ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ. ಅಷ್ಟೇ ಅಲ್ಲದೆ, ಕಳೆದ ಕೇವಲ ಒಂದು ವಾರದಲ್ಲಿ ರಾಜ್ಯದಲ್ಲಿ 11,879 ನಾಯಿ ಕಡಿತ ಪ್ರಕರಣಗಳು ವರದಿಯಾಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸಿದೆ.

ಆರೋಗ್ಯ ಇಲಾಖೆ ಹೈ ಅಲರ್ಟ್

ನಾಯಿ ಕಡಿತ ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ ಫುಲ್ ಅಲರ್ಟ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಇಲಾಖೆಯ ಆಯುಕ್ತರಾದ ಗುರುದತ್ತ ಹೆಗಡೆ, ‘ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ನಾಯಿ ಕಡಿತಕ್ಕೆ ಅಗತ್ಯವಾದ ಆ್ಯಂಟಿ ರೇಬಿಸ್ ಲಸಿಕೆ (ARV) ಮತ್ತು ಆ್ಯಂಟಿ ಸ್ನೇಕ್ ವೆನಮ್ (ASV) ಔಷಧಿಗಳನ್ನು ಕಡ್ಡಾಯವಾಗಿ ಸಂಗ್ರಹಿಸಿಟ್ಟುಕೊಳ್ಳುವಂತೆ ಸೂಚಿಸಲಾಗಿದೆ. ಕನಿಷ್ಠ 10 ವೈಯಲ್ ಆ್ಯಂಟಿ ರೇಬಿಸ್ ಲಸಿಕೆ ದಾಸ್ತಾನು ಇರಿಸಿಕೊಳ್ಳುವುದು ಕಡ್ಡಾಯವಾಗಿದೆ’ ಎಂದು ತಿಳಿಸಿದ್ದಾರೆ.

ನಾಯಿ ಕಚ್ಚಿದರೆ ಏನು ಮಾಡಬೇಕು? ವೈದ್ಯರ ಸಲಹೆ ಏನು?

ಕೆಸಿ ಜನರಲ್ ಆಸ್ಪತ್ರೆಯ ಡೀನ್ ಡಾ. ಲಕ್ಷ್ಮಿಪತಿ ಅವರು ಮಾತನಾಡಿ, ಮನೆಯ ನಾಯಿಯೇ ಆಗಿರಲಿ ಅಥವಾ ಬೀದಿ ನಾಯಿಯೇ ಆಗಿರಲಿ, ಕಚ್ಚಿದರೆ ಅದನ್ನು ನಿರ್ಲಕ್ಷಿಸಬೇಡಿ. ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಮತ್ತು ವ್ಯಾಕ್ಸಿನೇಷನ್ ಪಡೆಯುವುದು ಅತ್ಯಗತ್ಯ. ರೇಬಿಸ್ ರೋಗವು ಮಾರಕವಾಗಿರುವುದರಿಂದ ನಿರ್ಲಕ್ಷ್ಯ ವಹಿಸುವುದು ಅಪಾಯಕಾರಿ ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಒಂದೇ ತಿಂಗಳಲ್ಲಿ ಸಾವಿರಾರು ಜನರಿಗೆ ನಾಯಿ ಕಡಿತ; ಕಾಫಿನಾಡಿನಲ್ಲಿ ರಸ್ತೆಗಿಳಿಯಲೂ ಭಯಪಡುತ್ತಿರುವ ಜನರು!

ಒಟ್ಟಾರೆಯಾಗಿ, ವರ್ಷದ ಆರಂಭದ ಕೇವಲ ನಾಲ್ಕು ತಿಂಗಳಲ್ಲಿಯೇ ಲಕ್ಷಾಂತರ ಜನರು ಶ್ವಾನಗಳ ದಾಳಿಗೆ ತುತ್ತಾಗಿರುವುದು ಕಳವಳಕಾರಿ ಸಂಗತಿಯಾಗಿದೆ. ಸಾರ್ವಜನಿಕರು ಈ ಬಗ್ಗೆ ಎಚ್ಚರವಹಿಸಿ, ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *