ಬೆಳಗಾವಿಯಲ್ಲಿ ಬಹುಕೋಟಿ ವಂಚನೆ ಕೇಸ್: 6 ಜನರ ವಿರುದ್ಧ FIR; ಸಿಐಡಿಗೆ ಹಸ್ತಾಂತರಿಸಲು ಮುಂದಾದ ಪೊಲೀಸರು – Kannada News

ಆದಿತ್ಯರಾಜ್ ಕ್ಯಾಪಿಟಲ್ ಪ್ರೈ.ಲಿImage Credit source: tv9 kannada

ಬೆಳಗಾವಿ, ಜೂನ್​​ 06: ನಗರದಲ್ಲಿ ಇತ್ತೀಚೆಗಷ್ಟೇ 4500 ಕೋಟಿ ರೂ ವಂಚನೆ ಕೇಸ್​ನಲ್ಲಿ ಶಿವಾನಂದ ನೀಲಣ್ಣನವರ್ ಅಕ್ರಮ ಬಯಲಾಗಿತ್ತು. ಇದಾದ ಬೆನ್ನಲ್ಲೇ, ಮತ್ತೊಂದು ಕಂಪನಿ ಸಾವಿರಾರು ಕೋಟಿ ಹೂಡಿಕೆ (Multi-Crore Scam) ಮಾಡಿರೋದು ಪತ್ತೆಯಾಗಿದೆ. ಬೆಳಗಾವಿಯ (belagavi) ಭಾಗ್ಯ ನಗರದಲ್ಲಿರುವ ಆದಿತ್ಯರಾಜ್ ಕ್ಯಾಪಿಟಲ್ ಪ್ರೈವೆಟ್ ಲಿಮಿಟಿಡ್ ಕಂಪನಿ, 6 ಸಾವಿರ ಜನರಿಂದ ಠೇವಣಿ ರೂಪದಲ್ಲಿ ಸಾವಿರಾರು ಕೋಟಿ ಹಣ ಸಂಗ್ರಹಿಸಿರುವ ಆರೋಪ ಕೇಳಿ ಬಂದಿದೆ. ಕಂಪನಿ ಆರ್​ಬಿಐ ಸೇರಿ ಯಾರಿಂದಲೂ ಹೂಡಿಕೆ ಬಗ್ಗೆ ಅನುಮತಿ ಪಡೆದಿಲ್ಲ. ಬರ್ಡ್ಸ್ ಮತ್ತು ಕೆಪಿಐಡಿ ಕಾಯ್ದೆ ಅನ್ವಯ ಮಾಹಿತಿ ಸಂಗ್ರಹಿಸಿದ ನಗರ ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿಗಳ ಅನುಮತಿ ಮೇರೆಗೆ ದಾಳಿ ನಡೆಸಿದ್ದರು. ಹಲವು ಮಹತ್ವದ ದಾಖಲೆಗಳನ್ನ ಪರಿಶೀಲಿಸಿದ್ದರು. ಆದಿತ್ಯರಾಜ್ ಕ್ಯಾಪಿಟಲ್ ಪ್ರೈವೆಟ್ ಲಿಮಿಟಡ್ ಸೇರಿ 3 ಕಂಪನಿ ಮತ್ತು ಸಿಇಓ ಬಾಲರಾಜ್ ಮಾನೆ ಸೇರಿ 6 ಜನರ ಮೇಲೆ ಎಫ್​​ಐಆರ್​ ದಾಖಲಾಗಿದೆ.

ಮುಖ್ಯಾಂಶಗಳು

  • ಬೆಳಗಾವಿಯಲ್ಲಿ ಆದಿತ್ಯರಾಜ್ ಕ್ಯಾಪಿಟಲ್ ಪ್ರೈ.ಲಿ. ಮೇಲೆ ದಾಳಿ
  • ಆದಿತ್ಯರಾಜ್ ಕ್ಯಾಪಿಟಲ್ ಸಂಸ್ಥೆ ವಿರುದ್ಧ ಎಫ್ಐಆರ್ ದಾಖಲು
  • ತನಿಖೆ ಸಿಐಡಿಗೆ ಹಸ್ತಾಂತರ ಮಾಡಲಾಗುವುದು ಎಂದ ಜಿಲ್ಲಾಧಿಕಾರಿ

4 ಬ್ಯಾಂಕ್ ಅಕೌಂಟ್ ಸೀಜ್: 200 ಕೋಟಿಗೂ ಹೆಚ್ಚು ಹಣ ಫ್ರೀಜ್ 

ಇನ್ನೂ ಆದಿತ್ಯರಾಜ್ ಕ್ಯಾಪಿಟಲ್ ಸಂಸ್ಥೆ 6,500 ಹೆಚ್ಚು ಜನರಿಂದ ಸಾವಿರಾರು ಕೋಟಿ ಹೂಡಿಕೆ ಹಣ ಸಂಗ್ರಹಿಸಿದೆ. ಎಸಿ ದಾಳಿ ವೇಳೆಯಲ್ಲಿ ಕಚೇರಿ ಸಿಬ್ಬಂದಿ ಸರಿಯಾಗಿ ಸ್ಪಂದಿಸಿಲ್ಲ. ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್ ಗಳಲ್ಲಿನ ಡಾಟಾ ಡಿಲೀಟ್ ಮಾಡಿದ್ದಾರೆ. ದಾಳಿ ವೇಳೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಗುಂಪು ಕಟ್ಟಿಕೊಂಡು ಬಂದು ಮಾಧ್ಯಮದವರ ಮೇಲೆ ಗೂಂಡಾವರ್ತನೆ ತೋರಿದ್ದರು. ಸಿಇಒ ಬಾಲರಾಜ್ ಮಾನೆ ಬಂಧನಕ್ಕೆ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ. 4 ಬ್ಯಾಂಕ್ ಅಕೌಂಟ್ ಸೀಜ್ ಮಾಡಿ, 200 ಕೋಟಿಗೂ ಹೆಚ್ಚು ಹಣ ಫ್ರೀಜ್ ಮಾಡಿದ್ದಾರೆ.

ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದ್ದಿಷ್ಟು

ಈ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್​ ಪ್ರತಿಕ್ರಿಯಿಸಿದ್ದು, 2 ದಿನದಿಂದ ಕೆಪಿಐಡಿ, ಬರ್ಡ್ ಆ್ಯಕ್ಟ್ ಅಡಿ ದಾಳಿ ನಡೆಸಿ ಪರಿಶೀಲನೆ ಮಾಡಿದ್ದು, ಆದಿತ್ಯರಾಜ್ ಕ್ಯಾಪಿಟಲ್ ಸಂಸ್ಥೆ ವಿರುದ್ಧ ಎಫ್ಐಆರ್ ದಾಖಲಿಸಿದ್ದೇವೆ. ನನ್ನ ಆದೇಶದ ಮೇರೆಗೆ ಎಸಿ ಶ್ರವಣ್ ನಾಯಕ್ ದಾಳಿ ನಡೆಸಿದ್ದರು. ಆದಿತ್ಯರಾಜ್ ಕ್ಯಾಪಿಟಲ್ ಪ್ರೈ.ಲಿ. 2 ರೀತಿಯ ಕೆಲಸ ಮಾಡಿದೆ. ಯಾವುದೇ ಅನುಮತಿ ಪಡೆಯದೆ ಹಣ ಸಂಗ್ರಹ ಮಾಡಿದ್ದಾರೆ ಮತ್ತು ಹೂಡಿಕೆದಾರರಿಗೆ ಮಾಸಿಕ 5% ಬಡ್ಡಿ ನೀಡುವ ಆಮಿಷವೊಡ್ಡಿದ್ದಾರೆ ಎಂದರು.

ಇದನ್ನೂ ಓದಿ: ಬೆಳಗಾವಿಯಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ: ದಾಳಿ ವೇಳೆ ಕಂಪನಿಯ ಸರ್ವರ್​​ ಡೌನ್​​ ಮಾಡಿ ಕಳ್ಳಾಟ?

ಠೇವಣಿದಾರರ ಜತೆ ಎಲ್ಎಫ್ಎ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ. ಶೇಕಡಾ 5ರಷ್ಟು ಬಡ್ಡಿ, ಶೇಕಡಾ 5ರಷ್ಟು ಅಸಲು ನೀಡಲು ಒಪ್ಪಂದ ಮಾಡಿಕೊಳ್ಳುವಾಗ ರಿಸ್ಕ್ ಬಗ್ಗೆ ಎಲ್ಲೂ ಉಲ್ಲೇಖಮಾಡಿಲ್ಲ. ಈ ಪ್ರಕರಣ ಪಾಂಜಿ ಸ್ಕೀಮ್​ಗೆ ಮಾದರಿಯಾಗಿದೆ. 7 ಸಾವಿರ ಜನರು ಹೂಡಿಕೆ ಮಾಡಿ ವಂಚನೆಗೆ ಒಳಗಾಗಿದ್ದಾರೆ. ಇದು 50 ಕೋಟಿ ಮೀರಿದ ಪ್ರಕರಣವಾಗಿದ್ದರಿಂದ ಸಿಐಡಿ ತನಿಖೆ ಹಸ್ತಾಂತರ ಮಾಡಲಾಗುವುದು. ಜನರಿಂದ ಪಡೆದ ಹಣ ಎಲ್ಲಿ ಹೂಡಿಕೆ ಮಾಡುತ್ತಾರೆಂದು ಹೇಳಿಲ್ಲ. ಆದಿತ್ಯರಾಜ್ ಕ್ಯಾಪಿಟಲ್ ಸಿಬ್ಬಂದಿ ಹೂಡಿಕೆದಾರರಿಗೆ ಚೆಕ್ ನೀಡಿದ್ದಾರೆ. ಸಿಇಒ ಬಲರಾಮ್ ಮಾನೆ ವಿರುದ್ಧ ಲುಕ್​ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ದೇಶ ತೊರೆಯದಂತೆ ಕ್ರಮಕೈಗೊಳ್ಳಲಾಗಿದ್ದು, ಏರ್​ಪೋರ್ಟ್​ಗಳಿಗೆ ಮಾಹಿತಿ ರವಾನಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಬೆಳಗಾವಿಯಲ್ಲಿ 4,500 ಕೋಟಿ ರೂ. ವಂಚನೆ ಪ್ರಕರಣ: ಹೂಡಿಕೆಗಿಂತ ಹೆಚ್ಚಿನ ಲಾಭ ಪಡೆದವರಿಗೂ ಶುರುವಾಯ್ತು ನಡುಕ

ಸದ್ಯ ಬಹುಕೋಟಿ ಹೂಡಿಕೆ ಕೇಸ್, ಸಿಐಡಿಗೆ ಹಸ್ತಾಂತರಿಸಲು ಪೊಲೀಸರು ಪತ್ರ ಬರೆದಿದ್ದಾರೆ. ಇನ್ನು ಕಂಪನಿಯ ಸಿಇಒ ಪತ್ತೆಗೆ ವಿಶೇಷ ತಂಡ ಹುಡುಕಾಟ ನಡೆಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *