ಬೆಳಗಾವಿ, ಜುಲೈ 04: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಳೆರಾಯ ಅಕ್ಷರಶಃ ರೌದ್ರಾವತಾರ ತಾಳಿದೆ. ಒಂದು ಕಡೆ ವರುಣಾರ್ಭಟಕ್ಕೆ ಮನೆ ಒಳಗೆ ನೀರು ನುಗ್ಗಿದ್ದರೆ, ಮತ್ತೊಂದು ಕಡೆ ಮನೆ ಗೋಡೆ ಕುಸಿದು ಬಿದ್ದಿದೆ. ಚಿಕ್ಕೋಡಿ ತಾಲೂಕಿನ ಜೋಡರಕುರುಳಿ ಗ್ರಾಮದಲ್ಲಿ ಗಂಗವ್ವ ವರಾಳೆ ಎಂಬುವವರಿಗೆ ಸೇರಿದ ಮನೆಯ ಗೋಡೆ ಕುಸಿದು ಬಿದ್ದಿದೆ. ಗೋಡೆ ಕುಸಿಯುವ ಭೀಕರ ಶಬ್ದ ಕೇಳಿ ಮನೆಯಲ್ಲಿದ್ದ 7 ಜನರು ತಕ್ಷಣ ಹೊರಗೆ ಓಡಿ ಬಂದಿದ್ದರಿಂದ ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ಸದ್ಯ ಮನೆ ಕಳೆದುಕೊಂಡು ಇಡೀ ಕುಟುಂಬ ಬೀದಿಗೆ ಬಿದ್ದಿದೆ. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅವಘಡ ಸಂಭವಿಸಿದೆ. ಬೆಳಗಾವಿ ನಗರದ ವೀರಭದ್ರ ನಗರದಲ್ಲೂ ಮಳೆ ಅವಾಂತರ ಸೃಷ್ಟಿಸಿದ್ದು, ಮೊಹಮ್ಮದ್ ಅಲಿ ಎಂಬುವವರ ಮನೆ ಸೇರಿದಂತೆ ಮೂರ್ನಾಲ್ಕು ಮನೆಗಳಿಗೆ ಮಳೆನೀರು ನುಗ್ಗಿದೆ. ಇದರಿಂದ ದವಸ ಧಾನ್ಯ, ಗೃಹೋಪಯೋಗಿ ಸಾಮಗ್ರಿಗಳು ನೀರಿನಲ್ಲಿ ಮುಳುಗಡೆಯಾಗಿದ್ದು, ನಿವಾಸಿಗಳು ಪರದಾಡುವಂತಾಗಿದೆ. ಮಹಾನಗರ ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಆಕ್ರೋಶ ಹೊರಹಾಕಿರುವ ಜನ, ಕೂಡಲೇ ಚರಂಡಿ ಸ್ವಚ್ಛಗೊಳಿಸುವಂತೆ ಒತ್ತಾಯಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
