ಬೆಳಗ್ಗೆ 10 ಗಂಟೆಯಾದರೂ ಖಾಲಿ ಕಚೇರಿ; ಬೆಂಗಳೂರಿನ ಟ್ರಾಫಿಕ್ ವಿರುದ್ಧ ಉದ್ಯಮಿ ಆಕ್ರೋಶ | Bengaluru Traffic Crisis: Entrepreneur Says Long Commutes Are Killing Productivity, LinkedIn Post Goes viral

ಬಾಲಾ ಪನ್ನೀರ್‌ಸೆಲ್ವಂ ಲಿಂಕ್ಡ್ ಇನ್ ಪೋಸ್ಟ್ ಫೋಟೊImage Credit source: Linkedin/Bala Panneerselvam

ಬೆಂಗಳೂರು, ಆಗಸ್ಟ್ 19: ಬೆಂಗಳೂರು (Bengaluru) ಎಂದರೆ ಐಟಿ ಸಿಟಿ ಎಂದೇ ಗುರುತಿಸಿಕೊಂಡಿರುವ ನಗರ. ಅಷ್ಟೇ ಅಲ್ಲ, ಸ್ಟಾರ್ಟ್‌ಅಪ್‌ಗಳು ಹಾಗೂ ಉದ್ಯೋಗಾವಕಾಶಗಳ ನಗರಿ. ಆದರೆ ಇದೇ ನಗರದ ಸಂಚಾರ ದಟ್ಟಣೆ ಇದೀಗ ಉದ್ಯೋಗಿಗಳ ಉತ್ಪಾದಕತೆ ಮತ್ತು ಜೀವನಶೈಲಿಯ ಮೇಲೂ ಪರಿಣಾಮ ಬೀರುತ್ತಿದೆ ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಬೆಂಗಳೂರಿನ ಉದ್ಯಮಿ ಹಾಗೂ ‘Applied AI Studio’ ಮತ್ತು ‘Applied AI Club’ ಸಂಸ್ಥೆಗಳ ಸ್ಥಾಪಕ ಬಾಲಾ ಪನ್ನೀರ್‌ಸೆಲ್ವಂ ಅವರು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೆಳಗ್ಗೆ 10.15 ಆದರೂ ಕಚೇರಿ ಖಾಲಿ!

ಬಾಲಾ ಪನ್ನೀರ್‌ಸೆಲ್ವಂ ಅವರು ಬೆಳಗ್ಗೆ 10.15ಕ್ಕೆ ತಮ್ಮ ಕಚೇರಿ ಬಹುತೇಕ ಖಾಲಿಯಾಗಿದ್ದ ಫೋಟೋವನ್ನು ಹಂಚಿಕೊಂಡಿದ್ದಾರೆ. ಸಿಬ್ಬಂದಿ ಕಚೇರಿಗೆ ಸಮಯಕ್ಕೆ ಸರಿಯಾಗಿ ತಲುಪಲು ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸಾಕಷ್ಟು ಸಮಯ ಕಳೆಯಬೇಕಾಗುತ್ತಿದೆ ಎಂದು ಅವರು ಹೇಳಿದ್ದಾರೆ. ‘ಸಮಸ್ಯೆ ಜನರದ್ದಲ್ಲ. ಕಚೇರಿಗೆ ತಲುಪಲು ಅವರು ಮಾಡಬೇಕಾಗುವ ಪ್ರಯತ್ನದಲ್ಲಿದೆ’ ಎಂಬ ಅರ್ಥದಲ್ಲಿ ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅವರ ಪ್ರಕಾರ, ಕಚೇರಿಗೆ ತಲುಪುವಷ್ಟರಲ್ಲಿ ಉದ್ಯೋಗಿಗಳು ಸಾಕಷ್ಟು ದಣಿದಿರುತ್ತಾರೆ. ಹೀಗಾಗಿ ಕೆಲಸದ ಮೇಲೆ ಸಂಪೂರ್ಣ ಗಮನ ಕೇಂದ್ರೀಕರಿಸುವುದು ಕಷ್ಟವಾಗುತ್ತಿದೆ.

4 ಕಿಮೀ ಪ್ರಯಾಣಕ್ಕೂ 30 ನಿಮಿಷ!

ಎಚ್‌ಎಸ್‌ಆರ್ ಲೇಔಟ್‌ ಸುತ್ತಮುತ್ತ 4 ಕಿ.ಮೀ. ದೂರವನ್ನು ಸ್ಕೂಟರ್‌ನಲ್ಲಿ ಕ್ರಮಿಸಲು ಸುಮಾರು 20 ನಿಮಿಷ ಹಾಗೂ ಕಾರಿನಲ್ಲಿ ಸುಮಾರು 30 ನಿಮಿಷ ಬೇಕಾಗುತ್ತದೆ ಎಂದು ಪನ್ನೀರ್‌ಸೆಲ್ವಂ ಹೇಳಿದ್ದಾರೆ. ಪೀಕ್ ಅವಧಿಯಲ್ಲಿ ಇದಕ್ಕೆ ಮತ್ತಷ್ಟು 10 ನಿಮಿಷ ಸೇರ್ಪಡೆಯಾಗುತ್ತದೆ. ಟ್ರಾಫಿಕ್‌ನಲ್ಲಿ ಪದೇಪದೆ ಬ್ರೇಕ್ ಹಾಕುವುದು, ಸಿಗ್ನಲ್‌ಗಳನ್ನು ಉಲ್ಲಂಘಿಸುವ ದ್ವಿಚಕ್ರ ವಾಹನಗಳು ಹಾಗೂ ವಾಹನ ದಟ್ಟಣೆಯ ನಡುವೆ ಪ್ರಯಾಣಿಸುವುದರಿಂದ ಕಚೇರಿ ತಲುಪುವಷ್ಟರಲ್ಲಿ ತಾಜಾತನ (ಫ್ರೆಶ್​​ನೆಸ್) ಕಳೆದುಹೋಗುತ್ತದೆ ಎಂದು ಅವರು ಹೇಳಿದ್ದಾರೆ.

ಪನ್ನೀರ್‌ಸೆಲ್ವಂ ಲಿಂಕ್ಡ್ ಇನ್ ಪೋಸ್ಟ್

ಸಂಜೆ 6 ಗಂಟೆಯ ನಂತರ ಕಚೇರಿಯಿಂದ ಹೊರಟರೆ ಮನೆ ತಲುಪಲು ಸಾಮಾನ್ಯಕ್ಕಿಂತ ಎರಡು ಪಟ್ಟು ಹೆಚ್ಚು ಸಮಯ ಬೇಕಾಗುತ್ತದೆ. 5 ಗಂಟೆಗೆ ಹೊರಟರೂ ಮನೆಗೆ ತಲುಪುವಷ್ಟರಲ್ಲಿ ಸಾಕಷ್ಟು ದಣಿವು ಉಂಟಾಗುತ್ತದೆ. ಇದರ ಪರಿಣಾಮ ಮರುದಿನ ಕಚೇರಿಗೆ ತಡವಾಗಿ ಬರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಅವರು ಹೇಳಿದ್ದಾರೆ.

17 ಕಿಮೀ ಪ್ರಯಾಣಿಸಲು ಎರಡು ಗಂಟೆ

ತಮ್ಮದೇ ಅನುಭವವನ್ನು ಹಂಚಿಕೊಂಡಿರುವ ಉದ್ಯಮಿ, ಸಂಜೆ 4 ಗಂಟೆ ಸುಮಾರಿಗೆ ವೈಟ್‌ಫೀಲ್ಡ್‌ನಿಂದ ಎಚ್‌ಎಸ್‌ಆರ್ ಲೇಔಟ್‌ಗೆ 17 ಕಿ.ಮೀ. ಪ್ರಯಾಣಿಸಲು ಎರಡು ಗಂಟೆ ಬೇಕಾಯಿತು ಎಂದು ಹೇಳಿದ್ದಾರೆ. ಆ ಸಮಯವನ್ನು ಅವರು ಪೀಕ್ ಅವಧಿಯಲ್ಲದ ಸಮಯ ಎಂದು ಉಲ್ಲೇಖಿಸಿದ್ದು, ಮಳೆ ಅಥವಾ ಇತರೆ ಯಾವುದೇ ವಿಶೇಷ ಕಾರಣವೂ ಇರಲಿಲ್ಲ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿನ ಸುತ್ತಮುತ್ತಲಿನ ಗದ್ದಲ, ಸಂಚಾರ ದಟ್ಟಣೆ ಹಾಗೂ ನಿರಂತರ ಪ್ರಯಾಣದ ಒತ್ತಡದಿಂದ ಉತ್ತಮವಾಗಿ ಯೋಚಿಸುವ ಮತ್ತು ಕೆಲಸ ಮಾಡುವ ಸಾಮರ್ಥ್ಯವೇ ಕುಗ್ಗುತ್ತಿದೆ ಎಂಬುದು ಅವರ ವಾದ.

ಸಾಮಾಜಿಕ ಜಾಲತಾಣದಲ್ಲೂ ಭಾರೀ ಪ್ರತಿಕ್ರಿಯೆ

ಪನ್ನೀರ್‌ಸೆಲ್ವಂ ಅವರ ಪೋಸ್ಟ್‌ಗೆ ಸಾಮಾಜಿಕ ಜಾಲತಾಣ ಬಳಕೆದಾರರಿಂದ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಹಲವರು ತಮ್ಮ ದೈನಂದಿನ ಸಂಚಾರದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಪ್ರತಿದಿನ 1.5ರಿಂದ 2 ಗಂಟೆಗಳವರೆಗೆ ಪ್ರಯಾಣದಲ್ಲೇ ಕಳೆಯಬೇಕಾಗುತ್ತದೆ ಎಂದು ಹೇಳಿದ್ದಾರೆ. ಮತ್ತಷ್ಟು ಮಂದಿ ಗುಂಡಿ ಬಿದ್ದ ರಸ್ತೆಗಳು ಹಾಗೂ ಕೆಟ್ಟ ರಸ್ತೆಗಳಿಂದ ಪ್ರಯಾಣ ಮತ್ತಷ್ಟು ಕಷ್ಟಕರವಾಗಿದೆ ಎಂದು ದೂರಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ಕಿರಿಕಿರಿ: ಕೋಲ್ಕತ್ತಾ ತಲುಪುವ ಫ್ಲೈಟ್ ಜರ್ನಿಗಿಂತ ಏರ್‌ಪೋರ್ಟ್ ರಸ್ತೆ ಪ್ರಯಾಣವೇ ಲಾಂಗ್!

ಕಚೇರಿಗೆ ತಲುಪಲು ಬೇಕಾಗುವ ಸಮಯಕ್ಕಿಂತಲೂ, ಅಲ್ಲಿಗೆ ತಲುಪುವಷ್ಟರಲ್ಲಿ ಉಂಟಾಗುವ ದೈಹಿಕ ಮತ್ತು ಮಾನಸಿಕ ಆಯಾಸವೇ ಉತ್ಪಾದಕತೆಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *