ಬೆಂಗಳೂರು, ಮೇ 07: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ (Bengaluru) ಟ್ರಾಫಿಕ್ ಸಮಸ್ಯೆ ಮಾಮೂಲು. ಅದರಲ್ಲೂ ಮಳೆ ಬಂತೆಂದರಂತೂ ಮುಗಿದೇ ಹೋಯಿತು. ಕಿಲೋ ಮೀಟರ್ಗಟ್ಟಲೆ ವಾಹನಗಗಳು ಸರತಿ ಸಾಲಲ್ಲಿ ನಿಂತುಬಿಡುತ್ತವೆ. ಈ ನಡುವೆ ಬೆಳ್ಳಂದೂರಿನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಲು ಟ್ರಾಫಿಕ್ ಕಾರಣ ತನಗೆ ಬರೋಬ್ಬರಿ 3 ಗಂಟೆ ತಗುಲಿದೆ ಎಂದು ಯುವತಿ ಹೇಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯುವತಿ ಹೇಳಿದ್ದೇನು?
ಸಾಕ್ಷಿ ಎಂಬ ಯುವತಿ ಇನ್ಸ್ಟಾಗ್ರಾಂನಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದು, ನನ್ನ ಜೀವನದ ಅತ್ಯಂತ ಕೆಟ್ಟ ಏರ್ಪೋರ್ಟ್ ಪ್ರಯಾಣ ಇದಾಗಿತ್ತು. ಬೆಳ್ಳಂದೂರಿನಿಂದ ಏರ್ಪೋರ್ಟ್ ತಲುಪಲು 3.5 ಗಂಟೆ ಹಿಡಿಯಿತು. ತಲೆನೋವು, ಹಸಿವು ಎಲ್ಲವೂ ಸೇರಿ ಇದು ಪ್ರಯಾಣಕ್ಕಿಂತ ಬದುಕುಳಿಯುವ ಹೋರಾಟದಂತೆ ಅನಿಸಿತು ಎಂದು ಹೇಳಿದ್ದಾರೆ. ಸಂಜೆ 6 ಗಂಟೆಗೆ ಮನೆಯಿಂದ ಹೊರಟಿದ್ದ ತಾನು ರಾತ್ರಿ 9.30ರವರೆಗೂ ಬ್ಯಾಗೇಜ್ ಡ್ರಾಪ್ ಮುಗಿಯುವ ಮುನ್ನ ವಿಮಾನ ನಿಲ್ದಾಣ ತಲುಪಬಹುದೇ ಎಂಬ ಆತಂಕದಲ್ಲೇ ಇದ್ದುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಮಳೆ ವೇಳೆ 15 ಕಿಮೀ ಪ್ರಯಾಣಿಸಲು ಬೆಂಗಳೂರಲ್ಲಿ ಆಟೋ ದರ 1,200 ರೂ.!; ಈ ಹಣದಲ್ಲಿ ಏರ್ಪೋರ್ಟ್ಗೇ ಹೋಗಬಹುದು ಎಂದ ನೆಟ್ಟಿಗರು
ಮಾರ್ಗ ಮಧ್ಯೆ ಹಲವು ಕಡೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ಅದೃಷ್ಟವಶಾತ್ ಇಂಡಿಗೋ ವಿಮಾನ ವಿಳಂಬವಾಗಿದ್ದರಿಂದಲೇ ಸಮಯಕ್ಕೆ ತಲುಪಲು ಸಾಧ್ಯವಾಯಿತು. ಈ ಬಾರಿ ಇಂಡಿಗೋವೇ ರಕ್ಷಕನಾಯಿತು ಎಂದು ಅವರು ಬರೆದುಕೊಂಡಿದ್ದಾರೆ. ಮುಂದಿನ ಕೆಲವು ವಾರಗಳಲ್ಲಿ ಮಳೆ ಸಾಧ್ಯತೆ ಇರುವುದರಿಂದ ಕಚೇರಿ ಸಮಯದ ಬಳಿಕ ಏರ್ಪೋರ್ಟ್ಗೆ ತೆರಳುವವರು ಕನಿಷ್ಠ ಒಂದೂವರೆ ಗಂಟೆ ಹೆಚ್ಚುವರಿ ಸಮಯ ಮೀಸಲಿಡಬೇಕು ಎಂದು ಅವರು ಸಲಹೆಯನ್ನೂ ನೀಡಿದ್ದಾರೆ. ಈ ವಿಡಿಯೋಗೆ ಅನೇಕರು ಪ್ರತಿಕ್ರಿಯಿಸಿದ್ದು, ಏರ್ಪೋರ್ಟ್ಗೆ ಹೋಗಲು 3.5 ಗಂಟೆ ಬೇಕಾದರೆ ಅದು ಭಯಾನಕ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ವಿಮಾನ ವಿಳಂಬವೇ ಈಗ ಪ್ರಯಾಣಿಕರಿಗೆ ಟ್ರಾಫಿಕ್ ನಿರ್ವಹಣೆಗೆ ಹೋಲಿಸಿದರೆ ಹೆಚ್ಚು ಸಹಾಯ ಮಾಡುತ್ತಿದೆ ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 4:26 pm, Thu, 7 May 26