ಬೆಂಗಳೂರು, ಫೆಬ್ರವರಿ 22: ಬೇಸಿಗೆಕಾಲ ಶುರು ಆಯ್ತು. ಕಲ್ಲಂಗಡಿ ಹಣ್ಣು (watermelon), ಜ್ಯೂಸ್, ಐಸ್ ಕ್ರೀಂ ತಿಂದು ತಂಪಾಗೋಣ ಅಂತ ಏನಾದರೂ ಪ್ಲ್ಯಾನ್ ಮಾಡಿದ್ದರೆ ಎಚ್ಚರವಾಗಿರಿ. ಏಕೆಂದರೆ ನೀವು ತಿನ್ನುವ ಕಲ್ಲಂಗಡಿ ಹಣ್ಣು, ಖುಷ್ ಖುಷಿಯಿಂದ ಸವಿಯುವ ಐಸ್ ಕ್ರೀಂ, ಕೂಲ್ ಡ್ರಿಂಕ್ಸ್ ಎಷ್ಟು ಸುರಕ್ಷಿತ? ಹೀಗಂತ ನಾವಲ್ಲ, ಖುದ್ದು ಆರೋಗ್ಯ ಇಲಾಖೆ (health department) ಶಂಕೆ ವ್ಯಕ್ತಪಡಿಸಿದೆ. ಹೀಗಾಗಿ ಸದ್ಯದಲ್ಲೇ ಸ್ಯಾಂಪಲ್ ಟೆಸ್ಟ್ ಕೂಡ ನಡೆಯಲಿದೆ.
ಬೇಸಿಗೆ ಕಾಲದ ಆರಂಭದಲ್ಲಿಯೇ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಹೆಚ್ಚಳವಾಗಿದೆ. ಆದರೆ ಕಲ್ಲಂಗಡಿ ಹಣ್ಣು ನಿಜಕ್ಕೂ ಸುರಕ್ಷಿತನಾ ಎನ್ನುವ ಅನುಮಾನ ಮೂಡಿದೆ. ಕಳೆದ ಸಲ ಕಲ್ಲಂಗಡಿ ಹಣ್ಣಿಗೆ ಕೃತಕ ಬಣ್ಣ ಉಪಯೋಗಿಸುವ ಆತಂಕ ಎದುರಾದ ಬೆನ್ನಲ್ಲೇ ಈ ವರ್ಷನೂ ಆರಂಭದಲ್ಲಿಯೇ ಕಲ್ಲಂಗಡಿ ಹಣ್ಣಿನ ಸ್ಯಾಂಪಲ್ ಪಡೆಯುವುದಕ್ಕೆ ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ. ಕಲ್ಲಂಗಡಿ ಹಣ್ಣಿನ ಜೊತೆಗೆ ಐಸ್ ಕ್ರೀಂ, ಜ್ಯೂಸ್ಗಳ ಸ್ಯಾಂಪಲ್ ಪಡೆಯುವುದಕ್ಕೂ ತೀರ್ಮಾನಿಸಲಾಗಿದೆ.
ಕಲ್ಲಂಗಡಿಗೆ ಎರಿಥ್ರೋಸಿನ್ ಬಳಕೆ?
ಬೇಸಿಗೆ ದಿನದಲ್ಲಿ ಕಲ್ಲಂಗಡಿಗೆ ಭಾರೀ ಬೇಡಿಕೆ ಇದ್ದು, ಹೆಚ್ಚೆ ಮಾರಾಟ ಮಾಡಲು ಹಾಗೂ ಜನರನ್ನು ಆಕರ್ಷಿಸಲು ವ್ಯಾಪಾರಿಗಳು ಕೃತಕ ಬಣ್ಣ ಬಳಕೆ ಮಾಡುವ ಪ್ರಕರಣಗಳು ಪತ್ತೆಯಾಗಿವೆ. ಕಲ್ಲಂಗಡಿ ಹಣ್ಣಿನ ಬಳ್ಳಿಗೆ ಎರಿಥ್ರೋಸಿನ್ ಇಂಜೆಕ್ಟ್ ಮಾಡುವ ಸುಳಿವು ಸಿಕ್ಕಿದೆ. ಹೀಗಾಗಿ ಮಾರ್ಚ್ ತಿಂಗಳ ಆರಂಭದಲ್ಲಿಯೇ ಕಲ್ಲಂಗಡಿ ಹಣ್ಣಿನ ಸ್ಯಾಂಪಲ್ ಟೆಸ್ಟ್ ನಡೆಸಲು ಆಹಾರ ಮತ್ತು ಸುರಕ್ಷಿತಾ ಇಲಾಖೆಗೆ ಆರೋಗ್ಯ ಇಲಾಖೆ ಸೂಚಿಸಿದೆ. ಇಂಜೆಕ್ಷನ್ ಕೊಟ್ಟ ಕಲ್ಲಂಗಡಿ ಹಣ್ಣಿನಲ್ಲಿ ನೈಟ್ರೇಟ್ ಮತ್ತು ಕೃತಕ ಡೈ(ಕ್ರೋಮೇಟ್, ಮೆಥನಾಲ್ ಹಳದಿ, ಸುಡಾನ್ ಕೆಂಪು) ಕಾರ್ಬೈಡ್, ಆಕ್ಸಿಟಾಸಿನ್ ಇರಬಹುದು. ಇದು ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಡೇಂಜರ್.
ಇದನ್ನೂ ಓದಿ: ಶೀಘ್ರದಲ್ಲೇ ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್? ಬಿಗ್ ಅಪ್ಡೇಟ್ ಕೊಟ್ಟ ಸಿಎಂ
ಕಲ್ಲಂಗಡಿ ಹಣ್ಣು ಬೇಗನೆ ಬೆಳೆಯಲು ನಿಟ್ರೋಜನ್ ಬಳಸಲಾಗುತ್ತದೆ. ನಿಟ್ರೋಜನ್ ದೇಹದೊಳಗೆ ಹೋದರೆ ಅದು ತುಂಬಾ ಹಾನಿಕರ ಮತ್ತು ಇದರಲ್ಲಿ ವಿಷಕಾರಿ ಅಂಶಗಳಿವೆ. ಕ್ರೋಮೇಟ್, ಮೆಂಥಾಲ್ ಯಲ್ಲೋ ಮತ್ತು ಸುಡಾನ್ ರೆಡ್ ಬಣ್ಣವು ಕಲ್ಲಂಗಡಿಗೆ ಗಾಢವಾದ ಬಣ್ಣ ನೀಡಲು ಬಳಸುತ್ತಾರೆ. ಕಾರ್ಬೈಡ್ ಕಿಡ್ನಿ ಮತ್ತು ಯಕೃತ್ಗೆ ತುಂಬಾ ಅಪಾಯಕಾರಿ. ಇದರಿಂದ ಕಿಡ್ನಿಯು ತೀವ್ರವಾಗಿ ಹಾನಿಗೀಡಾಗಬಹುದು. ಮೆಂಥಾಲ್ ಯಲ್ಲೋ ಬಳಕೆಯಿಂದ ಕ್ಯಾನ್ಸರ್ ಬರುವ ಅಪಾಯವೂ ಇದೆ ಎಂದು ಆಹಾರ ತಜ್ಞೆ ಡಾ.ಕೀರ್ತಿ ಹಿರಿಸಾವೆ ಹೇಳುತ್ತಾರೆ. ಇನ್ನು ಗ್ರಾಹಕರು ಮಾತ್ರ ಇತ್ತೀಚೆಗೆ ಯಾವ ಆಹಾರ ತಿನ್ನುವುದು, ಯಾವುದು ಬಿಡುವುದು ನಮ್ಮ ಎಚ್ಚರಿಕೆಯಲ್ಲಿ ನಾವು ಇರಬೇಕು ಎನ್ನುತ್ತಾರೆ.
ಇದನ್ನೂ ಓದಿ: ಕೊನೆಗೂ ಎಚ್ಚೆತ್ತ ಆರೋಗ್ಯ ಇಲಾಖೆ: ಉಚಿತ ಸ್ಕ್ಯಾನಿಂಗ್ಗೆ ಪರ್ಯಾಯ ವ್ಯವಸ್ಥೆ
ಇಂಜೆಕ್ಷನ್ ನೀಡಿರುವ ಕಲ್ಲಂಗಡಿ ಹಣ್ಣು ತುಂಬಾ ಕೆಂಪಾಗಿರುತ್ತದೆ. ಕಲ್ಲಂಗಡಿ ಹಣ್ಣಿನ ಪರೀಕ್ಷೆಯನ್ನ ಮನೆಯಲ್ಲೇ ಮಾಡಬಹುದು. ಕಲ್ಲಂಗಡಿ ಹಣ್ಣನ್ನು ಎರಡು ಹೋಳಾಗಿ ಮಾಡಿ ಟಿಶ್ಯೂ ಅಥವಾ ಕಾಟನ್ ಪೇಪರ್ಗೆ ಕೆಂಪು ಬಣ್ಣ ಹತ್ತಿದರೆ ಅದಕ್ಕೆ ಕೃತಕ ಬಣ್ಣ ಬಳಕೆ ಮಾಡಿದ್ದಾರೆ ಎಂಬುದು ಧೃಡಪಡುತ್ತದೆ. ಒಟ್ಟಿನಲ್ಲಿ ಮತ್ತೊಮ್ಮೆ ಕಲ್ಲಂಗಡಿ, ಜ್ಯೂಸ್, ಐಸ್ ಕ್ರೀಂ ಪರೀಕ್ಷೆಗೆ ಆರೋಗ್ಯ ಇಲಾಖೆ ಮುಂದಾಗಿದೆ. ಬೇಸಿಗೆ ಮುನ್ನವೇ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
