ಮಂಡ್ಯ, ಏಪ್ರಿಲ್ 28: ಸುಡು ಬೇಸಿಗೆಯಲ್ಲಿ ತಂಪಾದ ಪಾನೀಯಗಳಿಗೆ ಡಿಮ್ಯಾಂಡ್ ಹೆಚ್ಚಾಗಿದ್ದು, ಎಳನೀರಿಗೆ ಬಾರಿ ಬೇಡಿಕೆ ಸೃಷ್ಟಿಯಾಗಿದೆ. ಏಷ್ಯಾ ಖಂಡದಲ್ಲೇ ಅತಿ ದೊಡ್ಡ ಎಳನೀರು ಮಾರುಕಟ್ಟೆ ಎಂದು ಹೆಸರಾದ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿಯೂ ಎಳನೀರಿನ ಕೊರತೆ ಎದುರಾಗಿದೆ. ಹೆಚ್ಚುತ್ತಿರುವ ತಾಪಮಾನದಿಂದಾಗಿ ಎಳನೀರು ಸಿಗದೆ ವ್ಯಾಪಾರಸ್ಥರು ಪರದಾಡುತ್ತಿದ್ದಾರೆ. ಸಾಮಾನ್ಯವಾಗಿ ದಿನಕ್ಕೆ ಐದರಿಂದ ಆರು ಲಕ್ಷ ಎಳನೀರು ಬರುತ್ತಿದ್ದ ಮಾರುಕಟ್ಟೆಗೆ ಈಗ ಒಂದೂವರೆಯಿಂದ ಎರಡು ಲಕ್ಷ ಎಳನೀರು ಸಹ ಬರುತ್ತಿಲ್ಲ.
ನುಸಿ ರೋಗ ಹಾಗೂ ಬೇಸಿಗೆಯ ತೀವ್ರತೆಗೆ ಮರಗಳಿಂದ ಎಳನೀರು ಅಕಾಲಿಕವಾಗಿ ಉದುರುತ್ತಿರುವುದು ಪೂರೈಕೆ ಕುಸಿಯಲು ಪ್ರಮುಖ ಕಾರಣವಾಗಿದೆ. ಪರಿಣಾಮವಾಗಿ, ಎಳನೀರಿನ ಬೆಲೆ ಗಗನಕ್ಕೇರಿದ್ದು, ಮಾರುಕಟ್ಟೆಯಲ್ಲಿಯೇ ಗುಣಮಟ್ಟಕ್ಕೆ ಅನುಗುಣವಾಗಿ ಒಂದು ಎಳನೀರಿಗೆ 50 ರಿಂದ 53 ರೂಪಾಯಿ ತಲುಪಿದೆ. ಇದನ್ನು ಖರೀದಿಸಿ ನಗರಗಳಿಗೆ ಸಾಗಿಸುವ ವ್ಯಾಪಾರಸ್ಥರಿಗೆ ಸಾರಿಗೆ ಮತ್ತು ಇತರ ವೆಚ್ಚಗಳಿಂದಾಗಿ ಬೆಲೆ ಮತ್ತಷ್ಟು ಹೆಚ್ಚಾಗುತ್ತಿದೆ. ಬೇಡಿಕೆಗೆ ತಕ್ಕಂತೆ ಪೂರೈಕೆ ಇಲ್ಲದೆ ಗ್ರಾಹಕರು ಮತ್ತು ವ್ಯಾಪಾರಿಗಳು ಸಂಕಷ್ಟ ಎದುರಿಸುವಂತಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
