ಬೈರತಿ ಬಸವರಾಜ್ಗೆ ಮತ್ತೊಂದು ಸಂಕಷ್ಟ!
ಬೆಂಗಳೂರು, ಮೇ 04: ಬಿಕ್ಲು ಶಿವು ಕೊಲೆ ಪ್ರಕರಣದ ತನಿಖೆ ಎದುರಿಸುತ್ತಿರುವ ಕೆ.ಆರ್. ಪುರಂ ಬಿಜೆಪಿ ಶಾಸಕ ಬೈರತಿ ಬಸವರಾಜ್ (Byrathi Basavaraj) ಅವರಿಗೆ ಈಗ ಮತ್ತೊಂದು ಹೊಸ ಸಂಕಷ್ಟ ಎದುರಾಗಿದೆ. ಈ ಹಿಂದೆ ಅವರು ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಜೈಲು ರುಚಿ ನೋಡಿದ ಬಳಿಕ ಇದೀಗ ಅವರ ಬೆಂಬಲಿಗರು ತನ್ನ ಮೇಲೆ ಹಲ್ಲೆ ಮಾಡಿದ್ದಾರೆಂದು ಆಪ್ ನಾಯಕಿ ದೂರು ದಾಖಲಿಸಿದ್ದಾರೆ.
ನನಗೆ ಬೆದರಿಕೆ ಹಾಕಿದ್ದಾರೆ: ಆಪ್ ನಾಯಕಿ
ಬಿಕ್ಲು ಶಿವ ಕೊಲೆ ಕೇಸ್ನಲ್ಲಿ ಆರೋಪಿಯಾಗಿರುವ ಬೈರತಿ ಬಸವರಾಜ್ ನ್ಯಾಯಾಂಗ ಬಂಧನದಿಂದ ಜಾಮೀನಿನಲ್ಲಿ ಹೊರಬಂತ ನಂತರ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಸವರಾಜ್ ಬೆಂಬಲಿಗರು ತನ್ನ ಮನೆ ಮುಂದೆ ನಿಲ್ಲಿಸಿದ್ದ ಕಾರನ್ನು ಧ್ವಂಸಗೊಳಿಸಿದ್ದಲ್ಲದೆ, ತನಗೆ ಬೆದರಿಕೆ ಹಾಕಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ (AAP) ವಿಜ್ಞಾನ ನಗರ ವಾರ್ಡ್ ಅಧ್ಯಕ್ಷೆ ಸತ್ಯವಾಣಿ ದೂರಿದ್ದಾರೆ.
ಕಳೆದ ತಿಂಗಳು ಕೂಡ ಶಾಸಕರು ತನ್ನ ಚಾರಿತ್ರ್ಯಕ್ಕೆ ಧಕ್ಕೆ ತರುವಂತಹ ಸುಮಾರು 50 ಬೃಹತ್ ಫ್ಲೆಕ್ಸ್ ಬ್ಯಾನರ್ಗಳನ್ನು ವಾರ್ಡ್ನಾದ್ಯಂತ ಹಾಕಿಸಿದ್ದರು ಎಂದು ಕಿಡಿಕಾರಿದ ಆಪ್ ನಾಯಕಿ, ಆರಂಭದಲ್ಲಿ ಈ ಬಗ್ಗೆ ದೂರು ನೀಡಲು ಹೋದಾಗ ಎಚ್ಎಎಲ್ ಪೊಲೀಸರು ಶಾಸಕರ ಒತ್ತಡಕ್ಕೆ ಮಣಿದು ದೂರು ಸ್ವೀಕರಿಸಲು ನಿರಾಕರಿಸಿದ್ದರು, ನಂತರ ಲೋಕಾಯುಕ್ತರ ಮೊರೆ ಹೋದ ಮೇಲೆ ಪ್ರಕರಣ ದಾಖಲಾಗಿತ್ತು ಎಂದು ದೂರಿದ್ದಾರೆ.
ನನಗೆ ಏನಾದರು ಆದರೆ ಅವರೇ ಹೊಣೆ ಎಂದ ನಾಯಕಿ
ಮುಂಬರುವ ಜಿಬಿಎ (GBA) ಚುನಾವಣೆಗಳಿಗೆ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿರುವ ಕಾರಣಕ್ಕಾಗಿಯೇ ತನ್ನ ಮೇಲೆ ಇಂತಹ ಹಲ್ಲೆ ನಡೆಯುತ್ತಿದೆ ಮತ್ತು ನನಗೆ ಬೆದರಿಕೆಗಳು ಬರುತ್ತಿವೆ ಎಂದು ಸತ್ಯವಾಣಿ ಆರೋಪಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಕೆರೆ ಒತ್ತುವರಿ ವಿರುದ್ಧ ಹೋರಾಟ ನಡೆಸುತ್ತಿರುವ ತನಗೆ ಏನಾದರೂ ತೊಂದರೆಯಾದರೆ ಅದಕ್ಕೆ ನೇರವಾಗಿ ಶಾಸಕ ಬೈರತಿ ಬಸವರಾಜ್ ಅವರೇ ಹೊಣೆ ಎಂದು ಅವರು ಎಚ್ಚರಿಸಿದ್ದಾರೆ. ಪೊಲೀಸರು ಶಾಸಕರ ಪ್ರಭಾವಕ್ಕೆ ಒಳಗಾಗಿ ಕೆಲಸ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಮತ್ತು ಈ ಘಟನೆಯು ಕೆ.ಆರ್. ಪುರಂನಲ್ಲಿ ಮಹಿಳೆಯರು ಎಷ್ಟು ಅಸುರಕ್ಷಿತರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ ಬಿಕ್ಲು ಶಿವ ಕೊಲೆ ಕೇಸ್: ಶಾಸಕ ಬೈರತಿ ಬಸವರಾಜ್ ಫೆ.21ರವರೆಗೆ ಸಿಐಡಿ ಕಸ್ಟಡಿಗೆ
ಬಿಕ್ಲು ಶಿವ ಕೇಸ್ನಲ್ಲಿ ಏನಾಗಿತ್ತು?
2025ರ ಜುಲೈ 15ರಂದು ಬೆಂಗಳೂರಿನ ಭಾರತಿನಗರದಲ್ಲಿ ರೌಡಿ ಶೀಟರ್ ಬಿಕ್ಲು ಶಿವು ಅಲಿಯಾಸ್ ಶಿವಕುಮಾರ್ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಕಿತ್ತಗನೂರಿನ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಈ ಕೊಲೆ ಪ್ರಕರಣದಲ್ಲಿ ಬೈರತಿ ಬಸವರಾಜ್ ಅವರನ್ನು 5ನೇ ಆರೋಪಿಯನ್ನಾಗಿ (A5) ಸೇರಿಸಲಾಗಿತ್ತು. ಅವರು ಈ ಕೃತ್ಯಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು.
ನಿರೀಕ್ಷಣಾ ಜಾಮೀನು ವಜಾಗೊಂಡ ಬಳಿಕ, 2026ರ ಫೆಬ್ರವರಿಯಲ್ಲಿ ಸಿಐಡಿ ಪೊಲೀಸರು ಇವರನ್ನು ಬಂಧಿಸಿದ್ದರು. ಸುಮಾರು 28 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ಇವರಿಗೆ 2026ರ ಮಾರ್ಚ್ 12ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು. ಇದೆಲ್ಲದರ ಬಳಿಕ ಮತ್ತೊಮ್ಮೆ ಆಪ್ ನಾಯಕಿ ಮೇಲೆ ಹಲ್ಲೆ ಮತ್ತು ಬೆದರಿಕೆ ಕೇಸ್ನಲ್ಲಿ ಅವರ ಹೆಸರು ಕೇಳಿಬಂದಿರುವುದು ಶಾಸಕನಿಗೆ ಸಂಕಷ್ಟ ತಂದೊಡ್ಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
