ಭಾರತದ ಧಾರ್ಮಿಕ ಸ್ವಾತಂತ್ರ್ಯದ ಕುರಿತ USCIRF ವರದಿಗೆ 275 ನಿವೃತ್ತ ನ್ಯಾಯಾಧೀಶರು, ಅಧಿಕಾರಿಗಳಿಂದ ವಿರೋಧ

ಭಾರತದ ಧಾರ್ಮಿಕ ಸ್ವಾತಂತ್ರ್ಯದ ಕುರಿತ USCIRF ವರದಿಗೆ 275 ನಿವೃತ್ತ ನ್ಯಾಯಾಧೀಶರು, ಅಧಿಕಾರಿಗಳಿಂದ ವಿರೋಧ

ಬೆಂಗಳೂರು, ಮಾರ್ಚ್ 21: ಭಾರತದ ಬಗ್ಗೆ ಅಮೆರಿಕದ ಸ್ವತಂತ್ರ ಸಂಸ್ಥೆಯಾದ USCIRF (ಯುನೈಟೆಡ್ ಸ್ಟೇಟ್ಸ್ ಕಮಿಷನ್ ಫಾರ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಮ್) ನೀಡಿದ ವರದಿಯನ್ನು ಭಾರತದ ನಿವೃತ್ತ ನ್ಯಾಯಮೂರ್ತಿಗಳು, ಅಧಿಕಾರಿಗಳು, ಮಿಲಿಟರಿ ಸಿಬ್ಬಂದಿ ಸೇರಿದಂತೆ ಒಟ್ಟು 275 ಜನರು ತೀವ್ರವಾಗಿ ವಿರೋಧಿಸಿದ್ದಾರೆ. ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕುಸಿತವಾಗಿದೆ ಎಂದು USCIRF ಹೇಳಿತ್ತು. ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಒತ್ತಡ ಹೆಚ್ಚಾಗಿದೆ. ಅದರಲ್ಲೂ ವಿಶೇಷವಾಗಿ ಮುಸ್ಲಿಮರು ಮತ್ತು ಕ್ರೈಸ್ತರ ಮೇಲೆ ಒತ್ತಡ ಹೆಚ್ಚಾಗುತ್ತಿದೆ ಎಂದು USCIRF ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಹಾಗೇ, USCIRF ಭಾರತದ ಕೆಲವು ಕಾನೂನುಗಳ ಬಗ್ಗೆಯೂ ಪ್ರಶ್ನೆ ಎತ್ತಿತ್ತು. ಮತಾಂತರ ವಿರೋಧಿ ಕಾನೂನುಗಳು (Anti-conversion laws), ಪೌರತ್ವ ತಿದ್ದುಪಡಿ ಕಾಯ್ದೆ (Citizenship Amendment Act/ CAA) ಇವುಗಳು ಕೆಲ ಸಮುದಾಯಗಳಿಗೆ ಅನ್ಯಾಯ ಮಾಡಬಹುದು ಎಂದು ಈ ವರದಿ ಹೇಳಿತ್ತು. ಭಾರತದಲ್ಲಿ ಕೆಲವು ಕಡೆ ಹಿಂಸಾಚಾರ ಮತ್ತು ದ್ವೇಷ ಭಾಷಣದ ಘಟನೆಗಳು ಹೆಚ್ಚಾಗಿವೆ. ಕೆಲವು ಸಂದರ್ಭಗಳಲ್ಲಿ ಅಧಿಕಾರಿಗಳು ಸರಿಯಾಗಿ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಟೀಕಿಸಲಾಗಿತ್ತು.

ಇದೆಲ್ಲದರ ಜೊತೆಗೆ, ಭಾರತದ ಆರ್​ಎಸ್​ಎಸ್ (RSS)​, ರಾ (RAW)ನಂತಹ ಕೆಲವು ಭಾರತೀಯ ಸಂಸ್ಥೆಗಳ ಮೇಲೆ ನಿಷೇಧ ಹೇರಬೇಕೆಂಬ ಶಿಫಾರಸನ್ನೂ USCIRF ವರದಿ ಮಾಡಿತ್ತು. ಈ USCIRF ಅಮೆರಿಕದ ಒಂದು ಸಲಹಾ ಸಂಸ್ಥೆಯಾಗಿದ್ದು, ಅದರ ವರದಿಯನ್ನು ಭಾರತ ತೀವ್ರವಾಗಿ ವಿರೋಧಿಸಿದೆ. USCIRF ಭಾರತದ ಬಗ್ಗೆ ತಪ್ಪುಚಿತ್ರಣ ನೀಡುತ್ತಿದೆ, ಭಾರತದ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಭಾರತ ಆರೋಪಿಸಿದೆ.

ಇದನ್ನೂ ಓದಿ: ಟ್ರಂಪ್​ಗೆ ಮುಖಭಂಗ; ಅಮೆರಿಕದ ಯುದ್ಧವಿಮಾನಕ್ಕೆ ನೋ ಎಂಟ್ರಿ ಎಂದ ಶ್ರೀಲಂಕಾ

ಈ ಬಗ್ಗೆ ಬಹಿರಂಗ ಪತ್ರ ಬರೆದಿರುವ ಭಾರತದ 275 ನಿವೃತ್ತ ನ್ಯಾಯಮೂರ್ತಿಗಳು, ಅಧಿಕಾರಿಗಳು ಮತ್ತು ಮಿಲಿಟರಿ ಸಿಬ್ಬಂದಿ USCIRF ವರದಿಯನ್ನು ಖಂಡಿಸಿದ್ದಾರೆ.

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರು, ಮಾಜಿ ಅಧಿಕಾರಿಗಳು ಮತ್ತು ಮಿಲಿಟರಿ ಪರಿಣತರು ಸೇರಿದಂತೆ 275 ಭಾರತೀಯರ ಗುಂಪು ಇಂದು ಯುನೈಟೆಡ್ ಸ್ಟೇಟ್ಸ್ ಕಮಿಷನ್ ಫಾರ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಮ್ (USCIRF) ನೀಡಿದ ಭಾರತದ ಕುರಿತ “ಆಫ್-ದಿ-ಮಾರ್ಕ್” ವರದಿಯನ್ನು ಟೀಕಿಸಿದೆ.

“ನಾವು ಕೆಳಗೆ ಸಹಿ ಮಾಡಿರುವವರು ಯುನೈಟೆಡ್ ಸ್ಟೇಟ್ಸ್ ಕಮಿಷನ್ ಫಾರ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಮ್ (USCIRF) ಸಿದ್ಧಪಡಿಸಿದ ಅತ್ಯಂತ ಗೊಂದಲಮಯ ಮತ್ತು ಸಂಪೂರ್ಣವಾಗಿ ಆಫ್-ದಿ-ಮಾರ್ಕ್ ವರದಿಯನ್ನು ನಿಮ್ಮ ಗಮನಕ್ಕೆ ತರುತ್ತೇವೆ” ಎಂದು ಅವರು ಬಿಡುಗಡೆ ಮಾಡಿದ ಬಹಿರಂಗ ಪತ್ರದಲ್ಲಿ ತಿಳಿಸಲಾಗಿದೆ.

ಭಾರತದ ವಿದೇಶಿ ಗುಪ್ತಚರ ಸಂಸ್ಥೆ, ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ (RA&AW) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮೇಲೆ ನಿರ್ಬಂಧಗಳನ್ನು ಶಿಫಾರಸು ಮಾಡುವ USCIRF ವರದಿಗೆ ಈ ಗುಂಪು ಆಕ್ಷೇಪಿಸಿದೆ. ಈ ತಂಡದಲ್ಲಿ ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಮತ್ತು NGT ಅಧ್ಯಕ್ಷ ಅಧ್ಯಕ್ಷ ಆದರ್ಶ್ ಕುಮಾರ್ ಗೋಯೆಲ್, ಕೇರಳದ ಮಾಜಿ DGP ಪಿ. ಚಂದ್ರಶೇಖರನ್ ಮತ್ತು ಮಾಜಿ ರಾಯಭಾರಿಗಳಾದ ಭಾಸ್ವತಿ ಮುಖರ್ಜಿ ಮತ್ತು ಶ್ಯಾಮಲಾ ಬಿ. ಕೌಸಿಕ್ ಕೂಡ ಸೇರಿದ್ದಾರೆ.

 

ತಮ್ಮ ಬಹಿರಂಗ ಪತ್ರದಲ್ಲಿ ಅಧಿಕೃತ ದತ್ತಾಂಶವನ್ನು ಉಲ್ಲೇಖಿಸಿರುವ ಅವರು, ಭಾರತದಲ್ಲಿ ಮುಸ್ಲಿಂ ಜನಸಂಖ್ಯೆಯ ಪಾಲು 1951ರಲ್ಲಿ ಶೇ. 9.8 ರಷ್ಟಿತ್ತು. 2011ರಲ್ಲಿ ಶೇ. 14.2ಕ್ಕೆ ಏರಿತು. ಕ್ರಿಶ್ಚಿಯನ್ ಜನಸಂಖ್ಯೆಯು 1951ರಲ್ಲಿ ಶೇ. 2.3ರಷ್ಟಿತ್ತು. 2011ರಲ್ಲಿ ಶೇ. 2.3 ರಷ್ಟಿತ್ತು. 1951ರಲ್ಲಿ ಶೇ. 1.79ರಷ್ಟಿದ್ದ ಸಿಖ್ ಜನಸಂಖ್ಯೆಯು 2011ರಲ್ಲಿ ಶೇ 1.72ಕ್ಕೆ ಇಳಿದಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇರಾನ್​ಗೆ ಮತ್ತೊಂದು ಹೊಡೆತ; ಅಮೆರಿಕ- ಇಸ್ರೇಲ್ ದಾಳಿಯಲ್ಲಿ ಐಆರ್‌ಜಿಸಿ ವಕ್ತಾರ ಅಲಿ ನೈನಿ ಹತ್ಯೆ

“ಈ ಡೇಟಾವನ್ನು ಅಧಿಕೃತ ಜನಗಣತಿ ದತ್ತಾಂಶದಿಂದ ತೆಗೆದುಕೊಳ್ಳಲಾಗಿದೆ. ಇದು ಭಾರತದಲ್ಲಿ 6 ದಶಕಗಳಿಗೂ ಹೆಚ್ಚು ಕಾಲ ಸ್ವತಂತ್ರ ಸಾಂವಿಧಾನಿಕ ಆಡಳಿತದಲ್ಲಿ ಪ್ರಮುಖ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಜನಸಂಖ್ಯಾ ವಿಸ್ತರಣೆ ಅಥವಾ ಸ್ಥಿರತೆಯ ವಿಶಾಲ ಮಾದರಿಯನ್ನು ಪ್ರತಿಬಿಂಬಿಸುತ್ತದೆ. ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿದೆ” ಎಂದು ಪತ್ರದಲ್ಲಿ ಹೇಳಲಾಗಿದೆ.

“USCIRFನ ಎಲ್ಲಾ 6 ಆಯುಕ್ತರನ್ನು US ಸರ್ಕಾರವು ನೇಮಿಸುತ್ತದೆ. US ಕಾಂಗ್ರೆಸ್ ಮೂಲಕ ಅಮೇರಿಕನ್ ತೆರಿಗೆದಾರರು ಅವರಿಗೆ ಹಣಕಾಸು ಒದಗಿಸುತ್ತಾರೆ. USCIRFನಲ್ಲಿ ಈ ವರದಿಗೆ ಕೊಡುಗೆ ನೀಡಿದ ಎಲ್ಲರ ಕಟ್ಟುನಿಟ್ಟಿನ ಹಿನ್ನೆಲೆಯನ್ನು ಪರಿಶೀಲನೆ ನಡೆಸುವಂತೆ ನಾವು US ಸರ್ಕಾರವನ್ನು ಒತ್ತಾಯಿಸುತ್ತೇವೆ. ಇದು USCIRF ನಿಂದ ಅತ್ಯಂತ ಪೂರ್ವಾಗ್ರಹ ಪೀಡಿತ ಮತ್ತು ಅಸಮರ್ಥನೀಯ ವರದಿಗಳನ್ನು ತಯಾರಿಸಲು ಬಳಸಲ್ಪಡುತ್ತಿರುವ US ತೆರಿಗೆದಾರರ ಕಣ್ಣು ತೆರೆಸುತ್ತದೆ ಎಂದು ನಾವು ಭಾವಿಸುತ್ತೇವೆ. ಏಕೆಂದರೆ ಅಲ್ಲಿನ ಪ್ರಜೆಗಳ ಹಣವನ್ನು ಕೆಲವು ಭಾರತ ವಿರೋಧಿ ಹಿತಾಸಕ್ತಿಗಳು ಭಾರತದ ಜನರೊಂದಿಗೆ ಅವರ ಸದ್ಭಾವನೆಯನ್ನು ಹಾಳುಮಾಡಲು ಗುಪ್ತ ಕಾರ್ಯಸೂಚಿಯನ್ನು ಉತ್ತೇಜಿಸಲು ಬಳಸುತ್ತಿವೆ” ಎಂದು ಮಾಜಿ ಐಎಎಸ್ ಅಧಿಕಾರಿಗಳಾದ ಎಂ. ಮದನ್ ಗೋಪಾಲ್, ಒ.ಪಿ. ಪಾಠಕ್ ಮತ್ತು ಸಿ.ಎಸ್. ತಲ್ವಾರ್ ಮತ್ತು ಇತರರು ಸಹಿ ಮಾಡಿದ ಪತ್ರದಲ್ಲಿ ತಿಳಿಸಲಾಗಿದೆ.

“ಇತ್ತೀಚಿನ ವರದಿಯನ್ನು ನಾವು ಗಮನಿಸಿದ್ದೇವೆ. ಭಾರತದ ಬಗ್ಗೆ ಮಾಡಲಾದ ಆರೋಪ ಸಂಪೂರ್ಣ ಸುಳ್ಳು. ಹಲವಾರು ವರ್ಷಗಳಿಂದ USCIRF ಭಾರತದ ಕುರಿತು ವಿಕೃತ ಮತ್ತು ಆಯ್ದ ಚಿತ್ರಣವನ್ನು ಪ್ರಸ್ತುತಪಡಿಸುವಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ” ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಕೂಡ ಹೇಳಿದ್ದರು.

ಭಾರತದ ಬಗ್ಗೆ ಆಯ್ದ ಟೀಕೆಗಳನ್ನು ಮುಂದುವರಿಸುವ ಬದಲು, USCIRF ಅಮೆರಿಕದಲ್ಲಿ ಹಿಂದೂ ದೇವಾಲಯಗಳ ಮೇಲಿನ ವಿಧ್ವಂಸಕ ಕೃತ್ಯಗಳು ಮತ್ತು ದಾಳಿಗಳು, ಭಾರತವನ್ನು ಟಾರ್ಗೆಟ್ ಮಾಡುವುದು ಮತ್ತು ಅಮೆರಿಕದಲ್ಲಿ ಭಾರತೀಯ ವಲಸೆಗಾರರ ​​ಸದಸ್ಯರ ಮೇಲೆ ಹೆಚ್ಚುತ್ತಿರುವ ಅಸಹಿಷ್ಣುತೆ ಮತ್ತು ಬೆದರಿಕೆಯ ಬಗ್ಗೆ ಚಿಂತಿಸುವುದು ಒಳ್ಳೆಯದು” ಎಂದು ಜೈಸ್ವಾಲ್ ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *