ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಏಕದಿನ ಪಂದ್ಯಗಳ ಯಶಸ್ಸಿನ ಪಯಣ ರೋಚಕವಾದದ್ದು. ಕಪಿಲ್ ದೇವ್ ಸಾರಥ್ಯದ 1983ರ ವರ್ಲ್ಡ್ ಕಪ್ ಗೆಲುವಿನಿಂದ ಹಿಡಿದು, ಧೋನಿ ಯುಗದ 2011ರ ವಿಶ್ವಕಪ್ ವಿಜಯ ಹಾಗೂ ಇತ್ತೀಚಿನ ರನ್ ಮಷಿನ್ ವಿರಾಟ್ ಕೊಹ್ಲಿ ಸಾಮ್ರಾಜ್ಯದವರೆಗೆ ಭಾರತ ಹಲವು ದಿಗ್ಗಜ ಆಟಗಾರರನ್ನು ಕಂಡಿದೆ. ಇಂತಹ ಬಳಗದಿಂದ ಸಾರ್ವಕಾಲಿಕ 11 ಆಟಗಾರರನ್ನು ಆಯ್ಕೆ ಮಾಡುವುದು ಸವಾಲೇ ಸರಿ. ಇದಾಗ್ಯೂ ಟೀಮ್ ಇಂಡಿಯಾದ ಮಾಜಿ ಆಟಗಾರ ರಾಬಿನ್ ಉತ್ತಪ್ಪ, ಆಲ್ ಟೈಮ್ ಒಡಿಐ ಇಲೆವೆನ್ ಅನ್ನು ಹೆಸರಿಸಿದ್ದಾರೆ. ಈ ಸಾರ್ವಕಾಲಿಕ ಇಲವೆನ್ನಲ್ಲಿ ಕಾಣಿಸಿಕೊಂಡಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ…
ಟಾಪ್-3 ಬ್ಯಾಟರ್ಗಳು:
ಸಚಿನ್ ತೆಂಡೂಲ್ಕರ್: ವಿಶ್ವ ಕ್ರಿಕೆಟ್ನ ‘ದೇವರೆಂದೇ’ ಖ್ಯಾತರಾದ ಸಚಿನ್ ಇಲ್ಲದೆ ಯಾವುದೇ ಸಾರ್ವಕಾಲಿಕ ತಂಡ ಅಪೂರ್ಣ. ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಹಾಗೂ ಶತಕ ಸಿಡಿಸಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ಅವರನ್ನು ಉತ್ತಪ್ಪ ಆರಂಭಿಕ ಆಟಗಾರನಾಗಿ ಆಯ್ಕೆ ಮಾಡಿದ್ದಾರೆ.
ಸೌರವ್ ಗಂಗೂಲಿ: ‘ದಾದಾ’ ಖ್ಯಾತಿಯ ಗಂಗೂಲಿ ಮತ್ತು ಸಚಿನ್ ಜೋಡಿ ಏಕದಿನ ಕ್ರಿಕೆಟ್ನ ಅತ್ಯಂತ ಯಶಸ್ವಿ ಆರಂಭಿಕ ಜೋಡಿಯಾಗಿದೆ. ಎಡಗೈ ಆಟಗಾರನಾಗಿ ಗಂಗೂಲಿ ಅವರ ಆಕ್ರಮಣಕಾರಿ ಆಟ ತಂಡಕ್ಕೆ ದೊಡ್ಡ ಪ್ಲಸ್ ಪಾಯಿಂಟ್. ಹೀಗಾಗಿ ಉತ್ತಪ್ಪ ಗಂಗೂಲಿ ಅವರನ್ನು ಓಪನರ್ ಸ್ಥಾನದಲ್ಲಿ ಹೆಸರಿಸಿದ್ದಾರೆ.
ವಿರಾಟ್ ಕೊಹ್ಲಿ: ಮೂರನೇ ಕ್ರಮಾಂಕಕ್ಕೆ ಆಧುನಿಕ ಕ್ರಿಕೆಟ್ನ ರನ್ ಮಷಿನ್, ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿಗಿಂತ ಸೂಕ್ತ ಆಟಗಾರ ಮತ್ತೊಬ್ಬರಿಲ್ಲ. ಏಕದಿನದಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆ ಹೊಂದಿರುವ ಕೊಹ್ಲಿಯನ್ನು ಮೂರನೇ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ.
ಮಧ್ಯಮ ಕ್ರಮಾಂಕ:
ಯುವರಾಜ್ ಸಿಂಗ್: 2011ರ ವಿಶ್ವಕಪ್ ಸರಣಿ ಶ್ರೇಷ್ಠ ಆಟಗಾರ. ಮಧ್ಯಮ ಕ್ರಮಾಂಕದಲ್ಲಿ ಸಿಕ್ಸರ್ಗಳ ಸುರಿಮಳೆಗೈಯುವ ಹಾಗೂ ಬೌಲಿಂಗ್ನಲ್ಲೂ ಪ್ರಮುಖ ವಿಕೆಟ್ ಪಡೆಯುವ ಅದ್ಭುತ ಆಲ್ರೌಂಡರ್ ಯುವರಾಜ್ ಸಿಂಗ್ ಅವರನ್ನು ಉತ್ತಪ್ಪ 4ನೇ ಕ್ರಮಾಂಕಕ್ಕೆ ಆಯ್ಕೆ ಮಾಡಿದ್ದಾರೆ.
ಎಂ.ಎಸ್. ಧೋನಿ (ನಾಯಕ / ವಿಕೆಟ್ ಕೀಪರ್): ಸಾರ್ವಕಾಲಿಕ ತಂಡದ ನಾಯಕತ್ವವನ್ನು ಉತ್ತಪ್ಪ ಅವರು ‘ಕ್ಯಾಪ್ಟನ್ ಕೂಲ್’ ಮಹೇಂದ್ರ ಸಿಂಗ್ ಧೋನಿ ಹೆಗಲಿಗೆ ಹೊರಿಸಿದ್ದಾರೆ. ಅಲ್ಲದೆ ವಿಕೆಟ್ ಕೀಪರ್ ಆಗಿಯೂ ಅವರನ್ನೇ ಹೆಸರಿಸಿದ್ದಾರೆ.
ಆಲ್ರೌಂಡರ್ ಮತ್ತು ಫಿನಿಶರ್ಸ್:
ಸುರೇಶ್ ರೈನಾ: ಏಕದಿನ ಮಾದರಿಯಲ್ಲಿ ನಂಬಿಕಸ್ಥ ಎಡಗೈ ಬ್ಯಾಟರ್. ಲೋವರ್-ಮಿಡಲ್ ಆರ್ಡರ್ನಲ್ಲಿ ವೇಗವಾಗಿ ರನ್ ಗಳಿಸುವ, ಅದ್ಭುತ ಫೀಲ್ಡಿಂಗ್ ಹಾಗೂ ಪಾರ್ಟ್-ಟೈಮ್ ಸ್ಪಿನ್ ಮಾಡುವ ಚತುರತೆ ಹೊಂದಿರುವ ಸುರೇಶ್ ರೈನಾ ಅವರನ್ನು ಉತ್ತಪ್ಪ ತಮ್ಮ ಸಾರ್ವಕಾಲಿಕ ಇಲೆವೆನ್ನಲ್ಲಿ ಹೆಸರಿಸಿದ್ದಾರೆ.
ಕಪಿಲ್ ದೇವ್: 1983ರ ವಿಶ್ವಕಪ್ ಹೀರೊ, ಭಾರತ ಕಂಡ ಸಾರ್ವಕಾಲಿಕ ಶ್ರೇಷ್ಠ ಫಾಸ್ಟ್ ಬೌಲಿಂಗ್ ಆಲ್ರೌಂಡರ್ ಕಪಿಲ್ ದೇವ್ ಕೂಡ ರಾಬಿನ್ ಉತ್ತಪ್ಪ ಹೆಸರಿಸಿದ ಸಾರ್ವಕಾಲಿಕ ಇಲೆವೆನ್ನಲ್ಲಿ ಸ್ಥಾನ ಪಡೆದಿದ್ದಾರೆ.
ರವೀಂದ್ರ ಜಡೇಜಾ: ಎಂಟನೇ ಕ್ರಮಾಂಕದವರೆಗೆ ಬ್ಯಾಟಿಂಗ್ ಲೈನಪ್ ವಿಸ್ತರಿಸಿ ಆಲ್ಟೈಮ್ ಇಲೆವೆನ್ ಹೆಸರಿಸಿರುವ ಉತ್ತಪ್ಪ, ರವೀಂದ್ರ ಜಡೇಜಾ ಅವರನ್ನು ಕೆಳ ಕ್ರಮಾಂಕದ ಆಲ್ರೌಂಡರ್ ಆಗಿ ಆಯ್ಕೆ ಮಾಡಿದ್ದಾರೆ.
ಬೌಲರ್ಗಳು:
ಅನಿಲ್ ಕುಂಬ್ಳೆ: ಭಾರತದ ಪರ ಏಕದಿನದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರನ್ನು ಈ ತಂಡದ ಮುಖ್ಯ ಸ್ಪಿನ್ನರ್ ಉತ್ತಪ್ಪ ಹೆಸರಿಸಿದ್ದಾರೆ.
ಝಹೀರ್ ಖಾನ್: ಭಾರತದ ಶ್ರೇಷ್ಠ ಎಡಗೈ ವೇಗಿ, ಹೊಸ ಚೆಂಡಿನಲ್ಲಿ ಸ್ವಿಂಗ್ ಹಾಗೂ ಹಳೆಯ ಚೆಂಡಿನಲ್ಲಿ ರಿವರ್ಸ್ ಸ್ವಿಂಗ್ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದ ಝಹೀರ್ ಖಾನ್ ಅವರನ್ನು ಕೂಡ ರಾಬಿನ್ ಉತ್ತಪ್ಪ ತಮ್ಮ ಸಾರ್ವಕಾಲಿಕ ಏಕದಿನ ಇಲೆವೆನ್ಗೆ ಆಯ್ಕೆ ಮಾಡಿದ್ದಾರೆ.
ಜಸ್ಪ್ರೀತ್ ಬುಮ್ರಾ: ಯಾರ್ಕರ್ ಸ್ಪೆಷಲಿಸ್ಟ್ ಹಾಗೂ ಆಧುನಿಕ ಕ್ರಿಕೆಟ್ನ ಯಶಸ್ವಿ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ಕೂಡ ರಾಬಿನ್ ಉತ್ತಪ್ಪ ಅವರ ಸಾರ್ವಕಾಲಿಕ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆದಿದ್ದಾರೆ.
ಭಾರತದ ಸಾರ್ವಕಾಲಿಕ ಏಕದಿನ ಇಲೆವೆನ್: ಸಚಿನ್ ತೆಂಡೂಲ್ಕರ್ , ಸೌರವ್ ಗಂಗೂಲಿ, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಮಹೇಂದ್ರ ಸಿಂಗ್ ಧೋನಿ (ನಾಯಕ), ಸುರೇಶ್ ರೈನಾ, ಕಪಿಲ್ ದೇವ್, ರವೀಂದ್ರ ಜಡೇಜಾ, ಅನಿಲ್ ಕುಂಬ್ಳೆ, ಝಹೀರ್ ಖಾನ್, ಜಸ್ಪ್ರೀತ್ ಬುಮ್ರಾ.
ಇದನ್ನೂ ಓದಿ: 13 ಸಿಕ್ಸ್, 5 ಫೋರ್: ದಾಖಲೆಯ ಸೆಂಚುರಿ ಸಿಡಿಸಿದ ನಿಕೋಲಸ್ ಪೂರನ್
ಒಟ್ಟಾರೆಯಾಗಿ, ರಾಬಿನ್ ಉತ್ತಪ್ಪ ಆರಿಸಿರುವ ಈ ತಂಡವು ಮೈದಾನಕ್ಕಿಳಿದರೆ ವಿಶ್ವದ ಯಾವುದೇ ಬಲಿಷ್ಠ ತಂಡವನ್ನಾದರೂ ಸುಲಭವಾಗಿ ಮಣಿಸುವ ಎಲ್ಲ ಸಾಮರ್ಥ್ಯ ಹೊಂದಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ!
Published On – 12:16 pm, Thu, 16 July 26
