ಭಾರತವನ್ನು ಜಗತ್ತಿನ 3ನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಮಾಡಿದ ಮೋದಿ ಒಬ್ಬ ‘ನೈಜ ಯೋಗಿ’: ಶ್ರೀ ಶ್ರೀ ರವಿಶಂಕರ್ ಗುರೂಜಿ – Kannada News | Sri Sri Ravi Shankar Guruji’s 70th Birthday: Guruji Shares Message of Peace and Service in Presence of PM Modi

ಶ್ರೀ ಶ್ರೀ ರವಿಶಂಕರ್ ಗುರೂಜಿ ಭಾಷಣ

ಬೆಂಗಳೂರು, ಮೇ 10: ಬೆಂಗಳೂರಿನಲ್ಲಿ ನಡೆದ ಆರ್ಟ್ ಆಫ್ ಲಿವಿಂಗ್‌ನ 45ನೇ ವರ್ಷದ ಸಂಭ್ರಮಾಚರಣೆ ಹಾಗೂ ಹೊಸ ಧ್ಯಾನ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸ್ವತಃ ಪ್ರಧಾನಿಗಳೇ ಒಬ್ಬ ಯೋಗಿಯಾಗಿದ್ದು, ಅವರ 10 ವರ್ಷಗಳ ಆಡಳಿತದಲ್ಲಿ ಭಾರತವು ವಿಶ್ವಮಟ್ಟದಲ್ಲಿ ಹೊಸ ಎತ್ತರಕ್ಕೆ ಏರಿದೆ ಎಂದು ಅವರು ಬಣ್ಣಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿಶ್ವದ ನಾನಾ ಭಾಗಗಳಿಂದ ಭಕ್ತರು ಭಾಗಿಯಾಗಿದ್ದರು.

ಮುಖ್ಯಾಂಶಗಳು

  • ಭಾರತವನ್ನು ಆರ್ಥಿಕವಾಗಿ 3ನೇ ಸ್ಥಾನಕ್ಕೆ ತಂದ ಮೋದಿ ಒಬ್ಬ ನೈಜ ಯೋಗಿ ಎಂದ ಗುರೂಜಿ
  • ರಾಮಮಂದಿರ ನಿರ್ಮಾಣಕ್ಕೆ ಕರ್ನಾಟಕದ ಶಿಲೆ ಮತ್ತು ಶಿಲ್ಪಿಯ ಕೊಡುಗೆಯ ಬಗ್ಗೆ ಗುರೂಜಿ ಮಾತು
  • ಸ್ವಚ್ಛ ಭಾರತ ಮತ್ತು ಸುರಕ್ಷಿತ ದೇಶ ನಿರ್ಮಿಸಿದ ಪ್ರಧಾನಿ ಕಾರ್ಯವೈಖರಿಗೆ ಶ್ಲಾಘನೆ

ಸೇವಾ ಕಾರ್ಯಗಳಿಗೆ ಚಾಲನೆ

ತಮ್ಮ 70ನೇ ಜನ್ಮೋತ್ಸವದ ನಿಮಿತ್ತ ಆಶ್ರಮವು ಹಮ್ಮಿಕೊಂಡಿರುವ ನದಿ ಪುನಶ್ಚೇತನ, ನೈಸರ್ಗಿಕ ಕೃಷಿ ಮತ್ತು ಗ್ರಾಮೀಣ ಶಿಕ್ಷಣ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ನಮ್ಮ ಸಂಭ್ರಮವು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿದಾಗ ಮಾತ್ರ ಅದು ಸಾರ್ಥಕವಾಗುತ್ತದೆ. ಭಾರತದ ಹಳ್ಳಿಗಳು ಸಮೃದ್ಧವಾದರೆ ಇಡೀ ದೇಶ ಸುಭಿಕ್ಷವಾಗುತ್ತದೆ ಎಂದು ಅವರು ಹೇಳಿದರು.

ಮೋದಿಯವರ ಕಾರ್ಯವೈಖರಿಗೆ ಪ್ರಶಂಸೆ

ವೇದಿಕೆಯಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಮಾತನಾಡಿದ ಗುರೂಜಿಯವರು, ಗಲೀಜು, ಬಡತನ ಮತ್ತು ಅವ್ಯವಸ್ಥೆಯಿಂದ ಕೂಡಿದ್ದ ದೇಶಕ್ಕೆ ಮೋದಿ ಅವರು ‘ಸ್ವಚ್ಛ ಭಾರತ’ ಅಭಿಯಾನದ ಮೂಲಕ ಹೊಸ ರೂಪ ನೀಡಿದ್ದಾರೆ. ಈ ಹಿಂದೆ ದೇಶದಲ್ಲಿದ್ದ ಭಯೋತ್ಪಾದನೆಯ ಆತಂಕ ದೂರವಾಗಿ, ದೇಶ ಸುರಕ್ಷಿತವಾಗಿದೆ ಎಂದು ಗುರೂಜಿ ಹೇಳಿದರು.

ಅಯೋಧ್ಯೆಯ ಭವ್ಯ ರಾಮ ಮಂದಿರದ ನಿರ್ಮಾಣವನ್ನು ಶ್ಲಾಘಿಸಿದ ಅವರು, ರಾಮಲಲ್ಲಾನ ಮೂರ್ತಿಯ ಕೆತ್ತನೆಗೆ ಬಳಸಿದ ಶಿಲೆ ಹಾಗೂ ಅದನ್ನು ಕೆತ್ತಿದ ಶಿಲ್ಪಿ (ಅರುಣ್ ಯೋಗಿರಾಜ್) ಇಬ್ಬರೂ ಕರ್ನಾಟಕದವರು ಎಂಬುದು ಹೆಮ್ಮೆಯ ವಿಷಯ ಎಂದರು. ಭಾರತವು ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದು, ಈ ಹಿಂದೆ 14ನೇ ಸ್ಥಾನದಲ್ಲಿದ್ದ ದೇಶ ಇಂದು 3ನೇ ಸ್ಥಾನಕ್ಕೆ ಏರಿದೆ ಎಂದು ಅವರು ಮೆಚ್ಚುಗೆ ಸೂಚಿಸಿದರು.

ಇದನ್ನೂ ಓದಿ PM Modi at Art of Living Live: ಆರ್ಟ್ ಆಫ್ ಲಿವಿಂಗ್​ನಲ್ಲಿ ಪ್ರಧಾನಿ ಮೋದಿ ಭಾಷಣ, ನೇರ ಪ್ರಸಾರ

ಯೋಗ ಮತ್ತು ಆಯುರ್ವೇದಕ್ಕೆ ಜಾಗತಿಕ ಮನ್ನಣೆ ದೊರಕಿಸಿಕೊಟ್ಟ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ. ಆಯುಷ್ ಸಚಿವಾಲಯದ ಸ್ಥಾಪನೆಯು ಆಯುರ್ವೇದದ ಪುನರುತ್ಥಾನಕ್ಕೆ ಕಾರಣವಾಗಿದೆ. ಈ ಹಿಂದೆ ದೇಶವನ್ನು ಕಾಡುತ್ತಿದ್ದ ಭಯೋತ್ಪಾದನೆಯ ಕರಿನೆರಳು ದೂರವಾಗಿದ್ದು, ಇಂದು ಜನತೆ ಸುರಕ್ಷಿತ ಭಾವನೆಯಲ್ಲಿದ್ದಾರೆ. ಕಾಶಿಯ ಅಭಿವೃದ್ಧಿಯು ಅದ್ಭುತವಾಗಿದ್ದು, ಕರ್ನಾಟಕದ ದಂಪತಿಗಳು ತಮ್ಮ ಕುಟುಂಬದೊಂದಿಗೆ ಅಲ್ಲಿಗೆ ಭೇಟಿ ನೀಡಬೇಕು ಎಂದು ಕರೆ ನೀಡಿದರು. ಕೊನೆಯಲ್ಲಿ, ನಮ್ಮವರಿಗೆ ನಾವು ಧನ್ಯವಾದಗಳನ್ನು ಹೇಳುವುದಿಲ್ಲ, ಏಕೆಂದರೆ ಧನ್ಯವಾದ ಹೇಳಿದರೆ ಅವರು ಪರಕೀಯರಾಗುತ್ತಾರೆ; ಮೋದಿ ಅವರು ನಮ್ಮವರು ಎಂದು ಭಾವುಕರಾಗಿ ನುಡಿದರು.

ಆಧ್ಯಾತ್ಮಿಕತೆಯೇ ಬದುಕಿನ ದಾರಿ

ತಮ್ಮ ಆಶೀರ್ವಚನದಲ್ಲಿ ಗುರೂಜಿಯವರು, ಮನುಷ್ಯನು ಬಾಹ್ಯ ಸುಖಗಳಿಗಿಂತ ಒಳಗಿನ ಶಾಂತಿಯನ್ನು ಕಂಡುಕೊಳ್ಳಬೇಕು ಎಂದು ತಿಳಿಸಿದರು. ಧ್ಯಾನ ಎಂಬುದು ಕೇವಲ ಕಣ್ಣು ಮುಚ್ಚಿ ಕುಳಿತುಕೊಳ್ಳುವುದಲ್ಲ, ಅದು ನಮ್ಮ ಆತ್ಮದೊಂದಿಗೆ ನಾವು ಅನುಸಂಧಾನ ಮಾಡುವ ಪ್ರಕ್ರಿಯೆ. ಜಗತ್ತು ಇಂದು ಯುದ್ಧ ಮತ್ತು ಆತಂಕಗಳ ಸುಳಿಯಲ್ಲಿದೆ, ಇಂತಹ ಸಮಯದಲ್ಲಿ ಪ್ರೀತಿ ಮತ್ತು ಕರುಣೆ ಮಾತ್ರ ನಮ್ಮನ್ನು ರಕ್ಷಿಸಬಲ್ಲವು ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *