ರಾಜಮೌಳಿ (Rajamouli) ಪ್ರಸ್ತುತ ಭಾರತೀಯ ಚಿತ್ರರಂಗದ ಟಾಪ್ ನಿರ್ದೇಶಕ. ಇತ್ತೀಚೆಗಿನ ವರ್ಷಗಳಲ್ಲಿ ಭಾರತದ ಸಿನಿಮಾಗಳಿಗೆ ವಿಶ್ವ ಮಟ್ಟದಲ್ಲಿ ಮಾರುಕಟ್ಟೆ, ಗೌರವ, ಪ್ರೇಕ್ಷಕರನ್ನು ತಂದುಕೊಟ್ಟ ಶ್ರೇಯ ಎಸ್ಎಸ್ ರಾಜಮೌಳಿ ಅವರಿಗೆ ಸಲ್ಲಬೇಕು. ಅವರ ನಿರ್ದೇಶನದ ‘ಆರ್ಆರ್ಆರ್’ ಸಿನಿಮಾ ವಿದೇಶಗಳಲ್ಲಿ ಬ್ಲಾಕ್ ಬಸ್ಟರ್ ಆಗಿದೆ. ಹಾಲಿವುಡ್ನ ಕೆಲವು ಲಿಜೆಂಡರಿ ನಿರ್ದೇಶಕರುಗಳು ಸಹ ರಾಜಮೌಳಿಗೆ ಹಾಲಿವುಡ್ ಸಿನಿಮಾ ಮಾಡುವಂತೆ ಆಫರ್ ಮಾಡಿದ್ದರು. ಆದರೆ ನಯವಾಗಿ ಆಫರ್ ಅನ್ನು ನಿರಾಕರಿಸಿದ್ದಾರೆ ರಾಜಮೌಳಿ. ಆದರೆ ರಾಜಮೌಳಿ ಅವರಿಗೆ ಭಾರತೀಯ ಸಿನಿಮಾಗಳ ಬಗ್ಗೆ ಒಂದು ಕನಸಿದೆ. ಅದನ್ನು ಸಾಕಾರಗೊಳಿಸುವುದಕ್ಕಾಗಿ ಅವರು ಶ್ರಮಿಸುತ್ತಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ರಾಜಮೌಳಿ, ಭಾರತೀಯ ಚಿತ್ರರಂಗದ ಬಗ್ಗೆ ತಮಗಿರುವ ಕನಸಿನ ಬಗ್ಗೆ ಹೇಳಿಕೊಂಡಿದ್ದಾರೆ. ‘ನನಗೆ ಒಂದು ಆಸೆಯಿದೆ, ಭಾರತೀಯ ಸಿನಿಮಾಕ್ಕೆ ವಿಶ್ವದಾದ್ಯಂತ ಬೇಡಿಕೆ ರೂಪುಗೊಳ್ಳಬೇಕು ಎಂಬುದು ನನ್ನ ಆಸೆ. ಈಗ ಕೆ-ಪಾಪ್ಗೆ ಹೇಗೆ ವಿಶ್ವದಾದ್ಯಂತ ಬೇಡಿಕೆ ಇದೆಯೋ, ಜಪಾನಿನ ಅನಿಮೇಷನ್ಗೆ ಹೇಗೆ ವಿಶ್ವದಾದ್ಯಂತ ಅಭಿಮಾನಿಗಳು ಇದ್ದಾರೆಯೋ ಹಾಗೆಯೇ ಭಾರತೀಯ ಸಿನಿಮಾಕ್ಕೆ ವಿಶ್ವದಾದ್ಯಂತ ಅಭಿಮಾನಿಗಳು, ಬೇಡಿಕೆ ಮೂಡಬೇಕು ಎಂಬುದು ನನ್ನ ಬಯಕೆ’ ಎಂದಿದ್ದಾರೆ ರಾಜಮೌಳಿ.
ಇತ್ತೀಚೆಗೆ ಬಿಡುಗಡೆ ಆದ ‘ಡೀಮನ್ ಸ್ಲೇಯರ್’ ಸಿನಿಮಾವನ್ನು ಉದಾಹರಣೆಯಾಗಿ ನೀಡಿದ ರಾಜಮೌಳಿ, ‘ಇತ್ತೀಚೆಗೆ ‘ಡೀಮನ್ ಸ್ಲೇಯರ್’ ಅನಿಮೇಷನ್ ಸಿನಿಮಾ ಭಾರತದಲ್ಲಿ ಬಿಡುಗಡೆ ಆಯ್ತು. ಭಾರತದಲ್ಲಿಯೇ ಅನಿಮೇಷನ್ ಸಿನಿಮಾಕ್ಕೆ ಬೇಡಿಕೆ ಕಡಿಕೆ, ಅದನ್ನು ನೋಡುವವರ ಸಂಖ್ಯೆಯೂ ಕಡಿಮೆ ಆದರೆ ‘ಡೀಮನ್ ಸ್ಲೇಯರ್’ ಸಿನಿಮಾ ದೊಡ್ಡ ಹಿಟ್ ಆಯ್ತು. ಅದರಂತೆ ಭಾರತೀಯ ಸಿನಿಮಾಗಳು ತಮ್ಮ ಭಾವುಕ ಕತೆ, ಸಂಗೀತದಿಂದ ವಿಶ್ವದಾದ್ಯಂತ ಅಭಿಮಾನಕ್ಕೆ ಒಳಗಾಗಬೇಕು’ ಎಂದು ರಾಜಮೌಳಿ ಹೇಳಿದ್ದಾರೆ.
ಇದನ್ನೂ ಓದಿ:ಬ್ಲಾಕ್ ಬಸ್ಟರ್ ಸಿನಿಮಾಗಳ ನಿರ್ದೇಶಕ ರಾಜಮೌಳಿಗೆ ಇಷ್ಟವಾದ ಸಿನಿಮಾ ಯಾವುದು?
‘ಇಡೀ ವಿಶ್ವಕ್ಕೆ ಒಗ್ಗುವ ಕತೆ ಮಾಡಿ, ಅದರಲ್ಲಿ ನಿಜವಾದ ಭಾವುಕತೆಯನ್ನು ಹಿಡಿದಿಟ್ಟರೆ ಖಂಡಿತ ಎಲ್ಲ ಭಾಗದ ಜನರು ನೋಡುತ್ತಾರೆ, ಇಷ್ಟಪಡುತ್ತಾರೆ ಎಂಬುದು ನನ್ನ ನಂಬಿಕೆ. ಆದರೆ ನಂಬಿಕೆ ಬೇರೆ, ಆ ನಂಬಿಕೆ ನಿಜವಾಗುದು ಬೇರೆ. ಆದರೆ ‘ಆರ್ಆರ್ಆರ್’ ಸಿನಿಮಾನಲ್ಲಿ ಅದು ನಿಜವಾಯ್ತು. ನಾನು ಅಂದುಕೊಂಡ ಫಲವನ್ನು ಆ ಸಿನಿಮಾ ನೀಡಿತು’ ಎಂದಿದ್ದಾರೆ ರಾಜಮೌಳಿ.
ಇದೀಗ ‘ವಾರಣಾಸಿ’ ಹೆಸರಿನ ಸಿನಿಮಾವನ್ನು ರಾಜಮೌಳಿ ನಿರ್ದೇಶನ ಮಾಡುತ್ತಿದ್ದು, ಸಿನಿಮಾನಲ್ಲಿ ಮಹೇಶ್ ಬಾಬು ನಾಯಕ, ಪ್ರಿಯಾಂಕಾ ಚೋಪ್ರಾ ನಾಯಕಿ. ಈ ಸಿನಿಮಾವನ್ನು ಹಾಲಿವುಡ್ ಲೆವೆಲ್ನಲ್ಲಿ ರಾಜಮೌಳಿ ನಿರ್ದೇಶಿಸುತ್ತಿದ್ದಾರೆ. ಸಿನಿಮಾಕ್ಕೆ ಭಾರಿ ದೊಡ್ಡ ಬಜೆಟ್ ಹೂಡಿಕೆ ಮಾಡಲಾಗಿದೆ. ಸಿನಿಮಾದ ಬಿಡುಗಡೆ ಇನ್ನೂ ಒಂದು ವರ್ಷವಿದೆ. ಏಪ್ರಿಲ್ 07, 2027ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
