ಮನೆ ಮೇಲೆ ಬಿದ್ದ ಬೃಹದಾಕಾರದ ಅಶ್ವತ್ಥ ಮರImage Credit source: tv9
ಮಂಗಳೂರು, ಏಪ್ರಿಲ್ 22: ಕರಾವಳಿಯಲ್ಲಿ (Coastal Karnataka) ಮಂಗಳವಾರ ತಡರಾತ್ರಿ ಭಾರಿ ಗಾಳಿ-ಮಳೆ (Rain) ಸುರಿದಿದೆ. ಗಾಳಿ-ಮಳೆಗೆ ಮಂಗಳೂರಿನ (Mangalore) ಕುದ್ರೋಳಿಯ ಬಸವನಗುಡಿ ರಸ್ತೆಯಲ್ಲಿ ಭೀಕರ ಅವಘಡವೊಂದು ಸಂಭವಿಸಿದೆ. ಇಲ್ಲಿನ ಮನೆಯೊಂದರ ಮೇಲೆ ಬೃಹದಾಕಾರದ ಅಶ್ವತ್ಥ ಮರವೊಂದು ಉರುಳಿ ಬಿದ್ದಿದ್ದು, ಮನೆಯಲ್ಲಿದ್ದವರು ಪವಾಡಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವರದರಾಜ್ ಶೇಟ್ ಎಂಬುವವರ ಮನೆ ಮೇಲೆ ನಸುಕಿನ ಜಾವ 3:30ರ ಸುಮಾರಿಗೆ ಈ ಮರ ಬಿದ್ದಿದೆ.
ಸಾಮಾನ್ಯವಾಗಿ ಮನೆಯ ಸದಸ್ಯರು ಪ್ರತಿದಿನ ಮಹಡಿಯ ಮೇಲಿರುವ ಬೆಡ್ರೂಂನಲ್ಲಿ ಮಲಗುತ್ತಿದ್ದರು. ಆದರೆ, ಮಂಗಳವಾರ ರಾತ್ರಿ ಅಚಾನಕ್ಕಾಗಿ ‘ಇವತ್ತು ಕೆಳಗಡೆ ಅಡ್ಜಸ್ಟ್ ಮಾಡಿಕೊಂಡು ಮಲಗೋಣ’ ಎಂದು ನಿರ್ಧರಿಸಿ ಕೆಳಮಹಡಿಯಲ್ಲಿ ಮಲಗಿದ್ದರು. ನಸುಕಿನ ಜಾವ ಮರ ಬಿದ್ದ ರಭಸಕ್ಕೆ ಮಹಡಿಯ ಭಾಗ ಜಖಂಗೊಂಡಿದ್ದು, ಒಂದು ವೇಳೆ ಮೇಲೆ ಮಲಗಿದ್ದರೆ ಭಾರೀ ಅಪಾಯ ಸಂಭವಿಸುತ್ತಿತ್ತು ಎಂದು ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿ 4 ತಿಂಗಳ ಮಗು ಹಾಗೂ 80 ವರ್ಷದ ಇಬ್ಬರು ವೃದ್ಧರಿದ್ದರು.
ಪಾಲಿಕೆ ವಿರುದ್ಧ ಆಕ್ರೋಶ
ಈ ಮರ ಅಪಾಯಕಾರಿಯಾಗಿದೆ ಎಂದು ಈ ಹಿಂದೆಯೇ ಮಹಾನಗರ ಪಾಲಿಕೆಗೆ ದೂರು ನೀಡಲಾಗಿತ್ತು. ಆದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಪಾಲಿಕೆಯ ನಿರ್ಲಕ್ಷ್ಯದಿಂದಲೇ ಈ ಅವಘಡ ಸಂಭವಿಸಿದೆ ಎಂದು ವರದರಾಜ್ ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ. ಜನಪ್ರತಿನಿಧಿಗಳು ಸ್ಥಳಕ್ಕೆ ಬರುವವರೆಗೂ ಮರ ತೆರವು ಮಾಡಲು ಬಿಡುವುದಿಲ್ಲ ಎಂದು ಅವರು ಪಟ್ಟು ಹಿಡಿದಿದ್ದಾರೆ.
ಅತ್ತಾವರದಲ್ಲಿ ಕಾಂಪೌಂಡ್ ಕುಸಿತ
ಅತ್ತಾವರದಲ್ಲಿ ಕಾಂಪೌಂಡ್ ಕುಸಿದು ಕಾರುಗಳು ಸಂಪೂರ್ಣ ಜಖಂ
ಮತ್ತೊಂದೆಡೆ, ಮಂಗಳೂರಿನ ಅತ್ತಾವರದಲ್ಲಿ ಕಾಂಪೌಂಡ್ ಗೋಡೆಯೊಂದು ಕುಸಿದು ಬಿದ್ದ ಪರಿಣಾಮ ಅದರ ಪಕ್ಕದಲ್ಲಿ ನಿಲ್ಲಿಸಿದ್ದ ಕಾರುಗಳು ಸಂಪೂರ್ಣ ಜಖಂಗೊಂಡಿವೆ. ಧಾರ್ಮಿಕ ಕಾರ್ಯಕ್ರಮವಿದ್ದ ಕಾರಣ ಪಾರ್ಕಿಂಗ್ ಜಾಗವಿಲ್ಲದೆ ಕಾರನ್ನು ಅಲ್ಲಿ ನಿಲ್ಲಿಸಲಾಗಿತ್ತು. ‘ವರ್ಷದ ಹಿಂದೆಯಷ್ಟೇ ನಿರ್ಮಿಸಿದ ಗೋಡೆ ಮಳೆಗೆ ಕುಸಿದಿದೆ, ಈಗ ನಮಗೆ ಪರಿಹಾರ ನೀಡುವವರು ಯಾರು?’ ಎಂದು ಕಾರು ಮಾಲೀಕರು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಮುಂದಿನ 7 ದಿನ ಕರ್ನಾಟಕ ಕೂಲ್ ಕೂಲ್: ಈ ಜಿಲ್ಲೆಗಳಿಗೆ ಬರಲಿದ್ದಾನೆ ವರುಣ; ಬಿಸಿಲ ಧಗೆಯಿಂದ ಸಿಗಲಿದೆ ಮುಕ್ತಿ!
ಏತನ್ಮಧ್ಯೆ, ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಲ್ಲಿ ಏಪ್ರಿಲ್ 22 ಮತ್ತು 23 ರಂದು ಸಹ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಗಂಟೆಗೆ 30-40 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ. ಸಂಜೆ ಅಥವಾ ರಾತ್ರಿ ವೇಳೆ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
