ಭಾಷಣ ಮಾಡಿದ ವೇದಿಕೆ ಸ್ಥಳದ ಶುದ್ಧೀಕರಣ: ಇದು ನನ್ನ ವಿರುದ್ಧ ತೋರಿದ ಅಸ್ಪೃಶ್ಯತೆ, ದಲಿತರಿಗೆ ಜಾಗ ಇಲ್ಲ ಎಂದು ಖರ್ಗೆ ಕಿಡಿ – Kannada News | Mallikarjuna Kharge raises Haldwani Shuddhikaran incident in parliament, accuses BJP of untouchability

ನವದೆಹಲಿ, ಆಗಸ್ಟ್ 13: ಉತ್ತರಾಖಂಡದ ಹಲ್ದ್ವಾನಿಯಲ್ಲಿ ತಾವು ಭಾಷಣ ಮಾಡಿದ್ದ ರಾಮಲೀಲಾ ಮೈದಾನದ ವೇದಿಕೆಯಲ್ಲಿ ‘ಶ್ರೀರಾಮ ಸೇನಾ’ ಸಂಘಟನೆಯು ಶುದ್ಧೀಕರಣ (ಹವನ) ನಡೆಸಿದ್ದಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಈ ರೀತಿಯ ಕೃತ್ಯವು ಹಿಂದೂ ಧರ್ಮಕ್ಕೇ ವಿರುದ್ಧವಾದದ್ದು. ಈ ದೇಶದಲ್ಲಿ ದಲಿತರಿಗೆ ಸ್ಥಾನ ಇಲ್ಲ ಎಂಬುದನ್ನು ತೋರಿಸುತ್ತದೆ” ಎಂದು ಅವರು ಕಿಡಿಕಾರಿದ್ದಾರೆ. ಆದರೆ, ಬಿಜೆಪಿ ನಾಯಕರು ಇದನ್ನು ತಳ್ಳಿಹಾಕಿದ್ದು, ಶುದ್ಧೀಕರಣ ಮಾಡಿದವರು ತಮ್ಮ ಪಕ್ಷಕ್ಕೆ ಸೇರಿದವರಲ್ಲ ಎಂದಿದ್ದಾರೆ.

ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ‘ವಿಜಯ ಶಂಖನಾದ’ ರ್ಯಾಲಿಯನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಅದಾದ ಎರಡು ದಿನಗಳ ನಂತರ ‘ಶ್ರೀರಾಮ ಸೇನಾ’ ಸಂಘಟನೆಯ ಸದಸ್ಯರು ಆ ವೇದಿಕೆಯಲ್ಲಿ ‘ಶುದ್ಧೀಕರಣ’ ಹವನ ನಡೆಸಿದ್ದರು. ವಿಪಕ್ಷ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಸಂಸತ್ತಿನ ಮುಂಗಾರು ಅಧಿವೇಶನದ ಕೊನೆಯ ದಿನವಾದ ಇಂದು ಈ ವಿಚಾರ ಪ್ರಸ್ತಾಪಿಸಿ, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಜಾಗತಿಕ ಯುವ ಜನಸಂಖ್ಯೆ ವರದಿ: ಭಾರತ ಪ್ರಥಮ; ಚೀನಾ, ಪಾಕಿಸ್ತಾನ, ಅಮೆರಿಕವನ್ನು ಹಿಂದಿಕ್ಕಿದ ಭಾರತೀಯ ಯುವಕರ ಸಂಖ್ಯೆ

“ನಾನು ದಲಿತ ಸಮುದಾಯಕ್ಕೆ ಸೇರಿದವನೆಂಬ ಕಾರಣಕ್ಕೆ ಹಾಗೂ ದೇಶದಲ್ಲಿ ದಲಿತರಿಗೆ ಸ್ಥಾನವಿಲ್ಲ ಎಂಬ ಮನಸ್ಥಿತಿಯಿಂದ ಈ ರೀತಿ ಮಾಡಲಾಗಿದೆ. ಸಾರ್ವಜನಿಕ ಮೈದಾನದಲ್ಲಿ ಶುದ್ಧೀಕರಣ ಹವನ ಮಾಡುವ ಅಗತ್ಯವೇನಿತ್ತು? ಪ್ರಜಾಪ್ರಭುತ್ವದಲ್ಲಿ ಇದು ಸರಿಯಾದ ಮಾರ್ಗವೇ?” ಎಂದು ಪ್ರಶ್ನಿಸಿದ್ದಾರೆ.

“ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಸೇರಿದ್ದರು. ನಾನು ಯಾವುದೇ ಸಮುದಾಯ ಅಥವಾ ಧರ್ಮದ ಹೆಸರನ್ನು ಪ್ರಸ್ತಾಪಿಸಲಿಲ್ಲ. ಸರ್ಕಾರದ ವೈಫಲ್ಯಗಳನ್ನು ಮಾತ್ರ ಪ್ರಶ್ನಿಸಿದ್ದೆ. ನನ್ನ ಭಾಷಣದ ಬಳಿಕ ಬಿಜೆಪಿಯ ಜನರು ವೇದಿಕೆ ಶುದ್ಧೀಕರಣಕ್ಕೆ ಹವನ ಮಾಡಿದ್ದಾರೆ. ನಾನೊಬ್ಬ ವಿಪಕ್ಷ ನಾಯಕ. ಇದು ನನ್ನ ವಿರುದ್ಧ ತೋರಿದ ಅಸ್ಪೃಶ್ಯತೆ” ಎಂದು ಖರ್ಗೆ ಕೆಂಡಕಾರಿದ್ದಾರೆ.

ಪಕ್ಷಗಳ ಆರೋಪ-ಪ್ರತ್ಯಾರೋಪ

ಬಿಜೆಪಿ ಮತ್ತು ಸರ್ಕಾರದ ಸ್ಪಷ್ಟನೆ: ರಾಜ್ಯಸಭೆಯಲ್ಲಿ ಈ ವಿಷಯಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಈ ಘಟನೆ ದುರದೃಷ್ಟಕರ ಆದರೆ ಇದರಲ್ಲಿ ಬಿಜೆಪಿಯ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ಶೀಘ್ರವೇ ಸಿಇಒ ನೇಮಕ: ಕಠಿಣ ಸಂದರ್ಶನ ಪೂರ್ಣಗೊಳಿಸಿದ ಉನ್ನತ ಮಟ್ಟದ ಶೋಧ ಸಮಿತಿ

ಮತ್ತೊಂದೆಡೆ ಬಿಜೆಪಿ ವಕ್ತಾರ ಖಜಾನ್ ದಾಸ್ ಮಾತನಾಡಿ, ರ್ಯಾಲಿಯ ಸಮಯದಲ್ಲಿ ಸನಾತನ ಧರ್ಮ ಹಾಗೂ ಇತರ ಧರ್ಮಗಳಿಗೆ ಸಂಬಂಧಿಸಿದಂತೆ ಕೂಗಲಾದ ಘೋಷಣೆಗಳಿಂದ ಸ್ಥಳೀಯರ ಭಾವನೆಗೆ ಧಕ್ಕೆಯಾಗಿತ್ತು, ಆದ್ದರಿಂದ ಈ ಹವನ ನಡೆದಿದೆಯೇ ಹೊರತು ಜಾತಿಯ ಕಾರಣಕ್ಕಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಆರೋಪ: ಈ ಘಟನೆ ವಿರುದ್ಧ ಹಲವು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶುದ್ಧೀಕರಣ ಮಾಡಿದ್ದು ಬಿಜೆಪಿ ಸದಸ್ಯರಲ್ಲ ಎನ್ನುವ ನಡ್ಡಾ ಹೇಳಿಕೆಯನ್ನು ಉತ್ತರಾಖಂಡ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಗೊಡಿಯಾಲ್ ಅವರು ತಳ್ಳಿಹಾಕಿದ್ದಾರೆ. ಶುದ್ಧೀಕರಣ ನಡೆಸಿದ ಶ್ರೀರಾಮ ಸೇನೆ ಸಂಘಟನೆಗೆ ಬಿಜೆಪಿ ಬೆಂಬಲವಿದೆ ಮತ್ತು ಖರ್ಗೆ ದಲಿತರಾಗಿರುವುದರಿಂದ ಈ ರೀತಿ ಜಾತಿ ಆಧಾರಿತ ತಾರತಮ್ಯ ಎಸಗಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *