ಮಂಗಳೂರು, (ಜುಲೈ 08): ನಿರಂತರ ಮಳೆಯಿಂದಾಗಿ ಮಂಗಳೂರು ಹೊರವಲಯದ ವಾಮಂಜೂರು ಸಮೀಪದ ಕೆತ್ತಿಕಲ್ನಲ್ಲಿ ಗುಡ್ಡ ಕುಸಿತವಾಗುತ್ತಿದೆ. ಪ್ರತಿ ಬಾರಿ ಮಳೆಗಾಲದಲ್ಲೇ ಗುಡ್ಡ ಕುಸಿಯುತ್ತಿದ್ದು, ಇದಕ್ಕೆ ಪರಿಹಾರ ಕಂಡು ಹಿಡಿಯುವ ಕೆಲಸವಾಗಿಲ್ಲ. ಇನ್ನು ಪದೇ ಪದೇ ಕೆತ್ತಿಕಲ್ನಲ್ಲಿ ಏಕೆ ಗುಡ್ಡ ಕುಸಿಯುತ್ತೆ ಎನ್ನುವುದನ್ನು ಎಳೆ ಎಳೆಯಾಗಿ ಬಿಟ್ಟಿದ್ದಾರೆ. ಈ ಬಗ್ಗೆ ಟಿವಿ9 ಜೊತೆ ಮಾತನಾಡಿರುವ ಪರಿಸರ ತಜ್ಞ ದಿನೇಶ್ ಹೊಳ್ಳ, ಲಂಬಾಕೃತಿಯಲ್ಲಿ ಅಗೆದಿರುವುದೇ ಕುಸಿತಕ್ಕೆ ಪ್ರಮುಖ ಕಾರಣ ಎಂದಿದ್ದಾರೆ.
ಇಂಜಿನಿಯರ್ ಗಳು ವಿದ್ಯೆ ಕಲಿತವರಲ್ವಾ? ಇಷ್ಟೊಂದು ಕಾಮಗಾರಿ ಮಾಡೋವಾಗ ಗೊತ್ತಾಗಲ್ವಾ? ರಾಷ್ಟ್ರೀಯ ಹೆದ್ದಾರಿ ಮಾಡೋವಾಗ ಗುಡ್ಡವನ್ನು ಲಂಬಕಾರವಾಗಿ ಅಗೆದ್ರೆ ಹೇಗೆ? ಇದು ಸಾಮಾನ್ಯ ಮನುಷ್ಯನಿಗೂ ಅರ್ಥ ಆಗುತ್ತೆ, ಇಂಜಿನಿಯರ್ ಗೆ ಅರ್ಥ ಆಗಲ್ವಾ? ಎಂದು ಪ್ರಶ್ನಿಸಿದ ದಿನೇಶ್ ಹೊಳ್ಳ,ವೈಜ್ಞಾನಿಕವಾಗಿ ಕಾಮಗಾರಿ ಮಾಡದೆ ಕೇವಲ ಬಿಲ್ ಗಳಿಗೆ ಕಾಮಗಾರಿ ಮಾಡಲಾಗಿದೆ. ಕೋಟಿ ಕೋಟಿ ದುಡ್ಡು ಮಾತ್ರ ಖರ್ಚು ಆಗೋದು. ಕೆತ್ತಿಕಲ್ ನಲ್ಲಿ ಇದಕ್ಕೆ ಪರಿಹಾರ ಇದ್ದರೂ ನಿರ್ಲಕ್ಷ್ಯ ತೋರಿದ್ದಾರೆ. ದುರಂತಗಳನ್ನು ತಡೆಯುವ ಪ್ರಯತ್ನಗಳು ಆಗುತ್ತಿಲ್ಲ.ವಯನಾಡು ದುರಂತದ ಬಳಿಕ ಪಾಠ ಕಲಿಯಬೇಕಿತ್ತು. ಆದ್ರೆ ಮುಂಜಾಗ್ರತೆ ಇಲ್ಲದೆ ಕಾಮಗಾರಿ ನಡೆಸಲಾಗುತ್ತದೆ. ಜನ ಇದರ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಜನ ಎಚ್ಚೆತ್ತುಕೊಂಡ್ರೆ ಜನ ಪ್ರತಿನಿಧಿಗಳು ಸಹ ಎಚ್ಚೆತ್ತುಕೊಳ್ಳುತ್ತಾರೆ ಎಂದರು.
