ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಅಂತ್ಯ; ಮುಖ್ಯಮಂತ್ರಿಯಾಗಿ ಖೇಮ್‌ಚಂದ್ ಪ್ರಮಾಣವಚನ ಸ್ವೀಕಾರ – Kannada News | BJP leader Yumnam Khemchand Singh takes oath as Manipur Chief Minister after Presidents rule ends

ನವದೆಹಲಿ, ಫೆಬ್ರವರಿ 4: ಮಣಿಪುರದಲ್ಲಿ ಕೊನೆಗೂ ರಾಷ್ಟ್ರಪತಿ ಆಡಳಿತ ಅಂತ್ಯಗೊಂಡಿದೆ. 62 ವರ್ಷದ ಯುಮ್ನಮ್ ಖೇಮ್‌ಚಂದ್ ಸಿಂಗ್ ಅವರು ಜನಾಂಗೀಯ ಸಂಘರ್ಷ ಪೀಡಿತ ಈಶಾನ್ಯ ರಾಜ್ಯದ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದರು. ಯುಮ್ನಮ್ ಖೇಮ್‌ಚಂದ್ ಅವರನ್ನು ಮಣಿಪುರದಲ್ಲಿ (Manipur) ಬಿಜೆಪಿ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ಮೈಟೈ ಸಮುದಾಯಕ್ಕೆ ಸೇರಿದ ಖೇಮ್‌ಚಂದ್ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ರದ್ದುಗೊಳಿಸಿದ ನಂತರ ಪ್ರಮಾಣವಚನ ಸ್ವೀಕರಿಸಿದರು.

ಯುಮ್ನಮ್ ಖೇಮ್‌ಚಂದ್ ಅವರ ಜೊತೆ ಇಬ್ಬರು ಉಪಮುಖ್ಯಮಂತ್ರಿಗಳು ಪ್ರಮಾಣವಚನ ಸ್ವೀಕರಿಸಿದ್ದಾರೆ. ಒಬ್ಬರು ಕುಕಿ-ಜೋ ಸಮುದಾಯದ ಕುಕಿ-ಝೋ ಮತ್ತು ಇನ್ನೊಬ್ಬರು ನಾಗಾ ಸಮುದಾಯದ ಲೋಸಿ ದಿಖೋ.

ಇದಕ್ಕೂ ಮೊದಲು, ಕೇಂದ್ರ ಗೃಹ ಸಚಿವಾಲಯವು ರಾಷ್ಟ್ರಪತಿ ದ್ರೌಪದಿ ಮುರ್ಮು ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿದ್ದಾರೆ ಎಂದು ಘೋಷಿಸುವ ಅಧಿಸೂಚನೆಯನ್ನು ಹೊರಡಿಸಿತು. ಇದು ಮಣಿಪುರ ರಾಜ್ಯದಲ್ಲಿ ಹೊಸ ಚುನಾಯಿತ ಸರ್ಕಾರ ರಚನೆಗೆ ದಾರಿ ಮಾಡಿಕೊಟ್ಟಿತು. 2025ರ ಫೆಬ್ರವರಿ 9ರಂದು ಎನ್. ಬಿರೇನ್ ಸಿಂಗ್ ರಾಜೀನಾಮೆ ನೀಡಿದಾಗಿನಿಂದ ಸಿಎಂ ಹುದ್ದೆ ಖಾಲಿಯಾಗಿತ್ತು. ಮಣಿಪುರ ದೀರ್ಘಕಾಲದ ಜನಾಂಗೀಯ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದರಿಂದ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಯಿತು. 1 ವರ್ಷದ ಬಳಿಕ ಇದೀಗ ನೂತನ ಸರ್ಕಾರ ರಚನೆಯಾಗಿದೆ.

ಇದನ್ನೂ ಓದಿ: ಮಣಿಪುರದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ಯುಮ್ನಮ್ ಖೇಮ್ಚಂದ್ ಸಿಂಗ್ ಆಯ್ಕೆ

60 ಸದಸ್ಯರ ಮಣಿಪುರ ವಿಧಾನಸಭೆಯಲ್ಲಿ, ಬಿಜೆಪಿ ಪ್ರಸ್ತುತ 37 ಶಾಸಕರನ್ನು ಹೊಂದಿದೆ. 2022ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ 32 ಅಭ್ಯರ್ಥಿಗಳು ಗೆದ್ದರು, ಜೆಡಿಯು 6 ಸ್ಥಾನಗಳನ್ನು ಗೆದ್ದಿತ್ತು. ಅವರಲ್ಲಿ 5 ಮಂದಿ ನಂತರ ಬಿಜೆಪಿಗೆ ಪಕ್ಷಾಂತರಗೊಂಡರು. ಇದಲ್ಲದೆ, ಸೇವೆ ಸಲ್ಲಿಸುತ್ತಿರುವ ಶಾಸಕರೊಬ್ಬರು ನಿಧನರಾದ ನಂತರ ಒಂದು ಸ್ಥಾನ ಖಾಲಿಯಾಯಿತು.

ಖೇಮ್‌ಚಂದ್ ಸಿಂಗ್ ಎರಡು ಬಾರಿ ಶಾಸಕರಾಗಿದ್ದು, 2017 ಮತ್ತು 2022ರಲ್ಲಿ ಸಿಂಗ್ಜಮೇಯಿ ವಿಧಾನಸಭಾ ಸ್ಥಾನದಿಂದ ಆಯ್ಕೆಯಾಗಿದ್ದಾರೆ. ಮಾರ್ಚ್ 2017ರಲ್ಲಿ ಅವರು ಮಣಿಪುರ ವಿಧಾನಸಭೆಯ ಸ್ಪೀಕರ್ ಆಗಿ ಆಯ್ಕೆಯಾದರು. ಅವರು 5 ವರ್ಷಗಳ ಅವಧಿಗೆ ಆ ಹುದ್ದೆಯಲ್ಲಿ ಸೇವೆ ಸಲ್ಲಿಸಿದರು. 2022ರ ವಿಧಾನಸಭಾ ಚುನಾವಣೆಯ ನಂತರ ಅವರು ಬಿರೇನ್ ಸಿಂಗ್ ಸಂಪುಟದಲ್ಲಿ ಸಚಿವರಾದರು. ನಂತರ ರಾಷ್ಟ್ರಪತಿ ಆಳ್ವಿಕೆ ಹೇರುವವರೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್, ಪುರಸಭೆ ಆಡಳಿತ, ವಸತಿ ಅಭಿವೃದ್ಧಿ ಮತ್ತು ಶಿಕ್ಷಣ ಸೇರಿದಂತೆ ಹಲವಾರು ಖಾತೆಗಳನ್ನು ನಿರ್ವಹಿಸಿದರು.

ಇದನ್ನೂ ಓದಿ: ಫೆಬ್ರವರಿ 7-8ರಂದು ಮಲೇಷ್ಯಾಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ

“ಮಣಿಪುರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಯುಮ್ನಮ್ ಖೇಮ್‌ಚಂದ್ ಸಿಂಗ್ ಅವರಿಗೆ ಅಭಿನಂದನೆಗಳು. ರಾಜ್ಯದ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ನೆಮ್ಚಾ ಕಿಪ್ಗೆನ್ ಮತ್ತು ಲೋಸಿ ದಿಖೋ ಅವರನ್ನು ಮತ್ತು ಮಣಿಪುರ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೊಂಥೌಜಮ್ ಗೋವಿಂದಾಸ್ ಸಿಂಗ್ ಮತ್ತು ಖುರೈಜಮ್ ಲೋಕೆನ್ ಸಿಂಗ್ ಅವರನ್ನು ನಾನು ಅಭಿನಂದಿಸುತ್ತೇನೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:07 pm, Wed, 4 February 26

Source link

Leave a Reply

Your email address will not be published. Required fields are marked *