ಚುನಾವಣಾ ಆಯೋಗವು (Election Commission) ಮತದಾರರ ಪಟ್ಟಿಯನ್ನು ಪರಿಷ್ಕರಿಸಲು ಕರ್ನಾಟಕದಲ್ಲಿ ಎಸ್ಐಆರ್ ಪ್ರಕ್ರಿಯೆಯನ್ನು ನಡೆಸುತ್ತಿದೆ. ರಾಜ್ಯದಾದ್ಯಂತ ಪ್ರಕ್ರಿಯೆ ಜಾರಿಯಲ್ಲಿದ್ದು, ಅಕ್ರಮ, ಗೊಂದಲಭರಿತ ಮತದಾರರ ಹೆಸರನ್ನು ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ. ಬೆಂಗಳೂರಿನಲ್ಲಿ ಸುಮಾರು 65 ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಡಿಲೀಟ್ ಆಗಿದೆ. ನಟ ಪ್ರಕಾಶ್ ರಾಜ್ (Prakash Raj) ನಿನ್ನೆ (ಆಗಸ್ಟ್ 11) ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ತಮ್ಮ ಹೆಸರನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ ಎಂದು ಆಕ್ಷೇಪಿಸಿದ್ದರು.
‘ನಾನು ಹುಟ್ಟಿ ಬೆಳೆದ, ಶಿಕ್ಷಣ ಪಡೆದ ಮತ್ತು ಈ ಹಿಂದೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಕ್ಷೇತ್ರದಲ್ಲಿಯೇ ನನ್ನ ಹೆಸರು ಹೇಗೆ ಡಿಲೀಟ್ ಆಗಲು ಸಾಧ್ಯ?” ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನು ಅವರು “ಒಂದು ಜೋಕ್” ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೆ, ತಮ್ಮ ಮತದಾನದ ಹಕ್ಕನ್ನು ಮರಳಿ ಪಡೆಯಲು ಅಗತ್ಯವಿರುವ ಎಲ್ಲಾ ಕಾನೂನು ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದ್ದರು. ಜೊತೆಗೆ ಆಯೋಗದ ಕ್ರಮದ ಬಗ್ಗೆ ಆಕ್ಷೇಪವನ್ನೂ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೆ ಇದೀಗ ಚುನಾವಣಾ ಆಯೋಗದ ಅಧಿಕಾರಿಗಳು ಪ್ರಕಾಶ್ ರಾಜ್ ಆಕ್ಷೇಪಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಚುನಾವಣಾ ಅಧಿಕಾರಿ, ‘ಪ್ರಕಾಶ್ ರಾಜ್ ಅವರು ಶಾಂತಿನಗರದ ಮತದಾರರಾಗಿದ್ದರು. ಆದರೆ ಮನೆ-ಮನೆ ಪರಿಶೀಲನೆ ವೇಳೆ, ಪ್ರಕಾಶ್ ರಾಜ್ ಅವರು ತಮ್ಮ ನಿವಾಸವಾದ ನಂಬರ್ 266, ಗಾರ್ಡನ್ ಅಪಾರ್ಟ್ನಿಂದ ಬೇರೆಡೆ ಸ್ಥಳಾಂತರವಾಗಿರುವುದು ಗೊತ್ತಾಗಿದೆ. ಬಿಎಲ್ಓ ಸ್ಥಳೀಯವಾಗಿ ವಿಚಾರಿಸಿದಾಗ, ಪ್ರಕಾಶ್ ರಾಜ್ ಅವರು ಕಳೆದ ನಾಲ್ಕು ವರ್ಷಗಳಿಂದ ಅಲ್ಲಿಲ್ಲ, ಬದಲಿಗೆ ಬಾಡಿಗೆದಾರರು ವಾಸಿಸುತ್ತಿದ್ದಾರೆ ಎಂಬುದು ತಿಳಿದು ಬಂದಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಮಲಯಾಳಂ ಸಿನಿಮಾನಲ್ಲಿ ನಟಿಸಲಿರುವ ರುಕ್ಮಿಣಿ, ನಾಯಕ ಯಾರು?
ಬಿಎಲ್ಓ ನೀಡಿರುವ ಮಾಹಿತಿಯ ಅನ್ವಯ ಸ್ಥಳ ಪರಿಶೀಲನೆ ಮಾಡಲಾಯ್ತು. ಪ್ರಕಾಶ್ ರಾಜ್ ಅವರು ನಿಗದಿತ ವಿಳಾಸದಲ್ಲಿ ಸಾಕಷ್ಟು ಸಮಯದಿಂದ ಇಲ್ಲದೇ ಇರುವ ಕಾರಣಕ್ಕೆ ಅವರನ್ನು ಶಾಶ್ವತ ಸ್ಥಳಾಂತರ ಪಟ್ಟಿಗೆ (ಎಎಸ್ಡಿಡಿಓ) ಸೇರಿಸಲಾಗಿದೆ ಎಂದಿದ್ದಾರೆ. ಅಲ್ಲದೆ, ಈ ವಿಷಯವಾಗಿ ತಾವು ದೂರವಾಣಿ ಮೂಲಕ ಪ್ರಕಾಶ್ ರಾಜ್ ಅವರೊಟ್ಟಿಗೆ ಮಾತನಾಡಿದ್ದು, ಅವರು ಶಾಂತಿನಗರದಲ್ಲೇ ಬೇರೆ ಸ್ಥಳದಲ್ಲಿ ವಾಸವಿರುವುದಾಗಿ ಹೇಳಿದ್ದಾರೆ. ಹಾಗಿದ್ದರೆ ಅವರು ಸ್ಥಳೀಯ ಬಿಎಲ್ಓ ಅವರನ್ನು ಸಂಪರ್ಕಿಸಿ ಫಾರ್ಮ್ 6 ಅನ್ನು ಸಲ್ಲಿಸಿದಲ್ಲಿ ಅವರ ಹೆಸರು ಶಾಂತಿನಗರದಲ್ಲೇ ಮತದಾರರ ಪಟ್ಟಿಗೆ ಸೇರಲಿದೆ ಎಂದಿದ್ದಾರೆ.
ಮತದಾರರ ಪಟ್ಟಿಯಿಂದ ತಮ್ಮ ಹೆಸರು ಡಿಲೀಟ್ ಆಗಿದ್ದರ ಬಗ್ಗೆ ವಿಡಿಯೋ ಹಂಚಿಕೊಂಡಿದ್ದ ಪ್ರಕಾಶ್ ರಾಜ್, ‘ತಮಗೆ ಮತ ಹಾಕದವರಿಗೆ ಮತ ಹಾಕುವ ಹಕ್ಕಿನಿಂದಲೇ ವಂಚಿತರನ್ನಾಗಿ ಮಾಡಲಾಗುತ್ತಿದೆ’ ಎಂದು ಆರೋಪಿಸಿದ್ದರು. ಆದರೆ ಈಗ ಚುನಾವಣಾಧಿಕಾರಿಗಳು ಸ್ಪಷ್ಟನೆ ನೀಡುವ ಮೂಲಕ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
