ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್
ಬೆಂಗಳೂರು, ಜುಲೈ 23: ವಿಶೇಷ ತೀವ್ರ ಪರಿಷ್ಕರಣೆ (Special Intensive Revision–SIR) ಮತದಾರರ ಪಟ್ಟಿ ಸಮೀಕ್ಷೆಯ ಎಣಿಕೆ ನಮೂನೆಗಳಲ್ಲಿ 2002ರ ಸ್ವಯಂ ಹಾಗೂ ಪೋಷಕರ ವಿವರಗಳನ್ನು ಕಡ್ಡಾಯವಾಗಿ ಭರ್ತಿ ಮಾಡುವ ಅಗತ್ಯವಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸ್ಪಷ್ಟಪಡಿಸಿದ್ದಾರೆ. ಆದರೆ, ಆಗಸ್ಟ್ 8, 2026ರೊಳಗೆ ನಾಗರಿಕರು ತಮ್ಮ ನಮೂನೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಅವರು ತಿಳಿಸಿದ್ದಾರೆ.
‘ಆನ್ಲೈನ್ನಲ್ಲೂ ಸಲ್ಲಿಕೆ ಸಾಧ್ಯ’
ಭೌತಿಕ ನಮೂನೆ ಪಡೆದಿದ್ದರೂ, ಅದನ್ನು ಆನ್ಲೈನ್ ಮೂಲಕವೂ ಭರ್ತಿ ಮಾಡಿ ಸಲ್ಲಿಸಬಹುದು. 2002ರ ದಾಖಲೆಗಳು ಲಭ್ಯವಿಲ್ಲದಿದ್ದರೂ ನಮೂನೆ ಸಲ್ಲಿಸಲು ಅವಕಾಶವಿದೆ. ಬಳಿಕ ಅಗತ್ಯವಿದ್ದರೆ ನಮೂನೆಯಲ್ಲಿ ಉಲ್ಲೇಖಿಸಿರುವ 12 ದಾಖಲೆಗಳಲ್ಲಿ ಒಂದನ್ನು ಸಲ್ಲಿಸುವಂತೆ ನೋಟಿಸ್ ನೀಡಲಾಗುತ್ತದೆ. ಯಾವ ದಾಖಲೆ ಬೇಕು ಎಂಬುದನ್ನು ಸಂಬಂಧಿತ ಚುನಾವಣಾ ನೋಂದಣಿ ಅಧಿಕಾರಿ (ERO) ಅಂತಿಮವಾಗಿ ನಿರ್ಧರಿಸಲಿದ್ದಾರೆ ಎಂದು ಅನ್ಬುಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಆ. 8ರೊಳಗೆ ಫಾರ್ಮ್ ಸಲ್ಲಿಸದಿದ್ದರೆ ವೋಟರ್ ಐಡಿಯಿಂದ ಹೆಸರು ಔಟ್; 17.19 ಲಕ್ಷ ಫಾರ್ಮ್ಗಳಲ್ಲಿ ಸರಿಯಾದ ಮಾಹಿತಿ ಇಲ್ಲ
ಈ ವರೆಗಿನ ಸಮೀಕ್ಷೆಯ ವಿವರ
ಜುಲೈ 22ರವರೆಗಿನ ಮಾಹಿತಿಯಂತೆ ಸಮೀಕ್ಷೆಯಲ್ಲಿ 5,87,457 (1.06%) ಮತದಾರರು ಪತ್ತೆಯಾಗಿಲ್ಲ/ ಸ್ಥಳಾಂತರಗೊಂಡಿರೋದು ಗೊತ್ತಾಗಿದೆ. 26,32,229 (4.75%) ಶಾಶ್ವತವಾಗಿ ಸ್ಥಳಾಂತರಗೊಂಡಿದ್ದರೆ, 9,81,642 (1.77%) ಮಂದಿ ಮೃತಪಟ್ಟಿದ್ದಾರೆ.2,70,659 (0.49%) ಜನರು ಈಗಾಗಲೇ ಬೇರೆಡೆ ನೋಂದಾಯಿತರಾಗಿದ್ದಾರೆ. 12,344 (0.02%) ಇತರ ವರ್ಗಕ್ಕೆ ಸೇರಿದ್ದಾರೆ. ಒಟ್ಟು 44,84,331 (8.09%) ಮತದಾರರನ್ನು ASDDO (Absent, Shifted, Dead, Duplicate & Others) ವರ್ಗದಲ್ಲಿ ಗುರುತಿಸಲಾಗಿದೆ ಎಂದವರು ಮಾಹಿತಿ ನೀಡಿದ್ದಾರೆ. ಈ ಎಲ್ಲ ಪ್ರಕರಣಗಳಲ್ಲಿ ಬೂತ್ ಮಟ್ಟದ ಅಧಿಕಾರಿಗಳು (BLO) ಸ್ಥಳ ಪರಿಶೀಲನೆ (Spot Mahazar) ನಡೆಸುತ್ತಿದ್ದು, ಬೂತ್ ಮಟ್ಟದ ಏಜೆಂಟ್ಗಳ (BLA), ನೆರೆಹೊರೆಯವರು ಹಾಗೂ ಚುನಾವಣಾ ಸಿಬ್ಬಂದಿಯ ಸಹಿಗಳನ್ನು ಪಡೆಯಲಾಗುತ್ತಿದೆ ಎಂದು ಅನ್ಬುಕುಮಾರ್ ತಿಳಿಸಿದ್ದಾರೆ.
ಮತದಾರರ ವಿವರಗಳಲ್ಲಿ ಯಾವುದೇ ವ್ಯತ್ಯಾಸಗಳಿಲ್ಲದಂತೆ ಪರಿಶೀಲಿಸಲು ರಾಜಕೀಯ ಪಕ್ಷಗಳೊಂದಿಗೆ ಸಭೆ ನಡೆಸಲಾಗಿದೆ. BLAಗಳು ಕೂಡ ನಮೂನೆಗಳನ್ನು ಸಂಗ್ರಹಿಸಿ BLOಗಳಿಗೆ ಹಸ್ತಾಂತರಿಸಬಹುದು. ಉತ್ತರಹಳ್ಳಿ ಹಾಗೂ ಬೊಮ್ಮನಹಳ್ಳಿ ಕ್ಷೇತ್ರಗಳಲ್ಲಿ ಮ್ಯಾಪಿಂಗ್ ದೋಷ ಮತ್ತು ಮಾಹಿತಿ ನಾಪತ್ತೆ ಕುರಿತು ಜುಲೈ 15ರಂದು ದೂರು ಬಂದಿತ್ತು. ಜುಲೈ 18ರಂದು ಸಮಸ್ಯೆ ಬಗೆಹರಿಸಲಾಗಿದೆ. PDF ಕಡತಗಳನ್ನು Excelಗೆ ಪರಿವರ್ತಿಸುವ ವೇಳೆ ತಾಂತ್ರಿಕ ಸಮಸ್ಯೆಯಿಂದ ಈ ದೋಷ ಉಂಟಾಗಿತ್ತು ಎಂದು ಸಿಇಒ ತಿಳಿಸಿದ್ದಾರೆ. ವರ್ತೂರು ಹಾಗೂ ಮಹದೇವಪುರ ಕ್ಷೇತ್ರಗಳಲ್ಲೂ ಇದೇ ರೀತಿಯ ದೂರುಗಳು ಬಂದಿದ್ದು, ಸಂಬಂಧಿತ ERO ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಿಂದ ವರದಿ ಕೇಳಲಾಗಿದೆ ಎಂದವರು ಹೇಳಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
