‘ಹ್ಯಾಟ್ರಿಕ್ ಹೀರೋ’ ಶಿವರಾಜ್ಕುಮಾರ್ (Shiva Rajkumar) ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಹಲವು ಪ್ರಾಜೆಕ್ಟ್ಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಹೀರೋ ಆಗಿ ನಟಿಸುವುದರ ಜೊತೆಗೆ, ವಿಶೇಷ ಪಾತ್ರಗಳನ್ನು ಕೂಡ ಅವರು ಒಪ್ಪಿಕೊಳ್ಳುತ್ತಿದ್ದಾರೆ. ಈಗ ಅವರು ವಿಜಯ್ ರಾಘವೇಂದ್ರ ನಟನೆಯ ‘ಮಹಾನ್’ (Mahaan) ಸಿನಿಮಾದಲ್ಲಿ ಲಾಯರ್ ಪಾತ್ರ ಮಾಡಿದ್ದಾರೆ ಎಂಬ ವಿಷಯ ಗೊತ್ತಾಗಿದೆ. ಚಿತ್ರತಂಡವೇ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿದೆ.
‘ಮಹಾನ್’ ಸಿನಿಮಾವನ್ನು ‘ಆಕಾಶ್ ಪಿಕ್ಚರ್ಸ್’ ಲಾಂಛನದಲ್ಲಿ ಪ್ರಕಾಶ್ ಬುದ್ದೂರು ಅವರು ನಿರ್ಮಾಣ ಮಾಡುತ್ತಿದ್ದಾರೆ. ಪಿ.ಸಿ. ಶೇಖರ್ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ‘ಮಹಾನ್’ ಚಿತ್ರದ ವಿಶೇಷವಾದ ಒಂದು ಪಾತ್ರದಲ್ಲಿ ಶಿವರಾಜ್ಕುಮಾರ್ ಅವರು ನಟಿಸಿದ್ದಾರೆ ಎಂಬ ವಿಷಯ ತಿಳಿದ ಕೂಡಲೇ ಅಭಿಮಾನಿಗಳಿಗೆ ಈ ಸಿನಿಮಾದ ಮೇಲಿನ ನಿರೀಕ್ಷೆ ಜಾಸ್ತಿ ಆಗಿದೆ.
ವಿಜಯ್ ರಾಘವೇಂದ್ರ ಅವರು ‘ಮಹಾನ್’ ಸಿನಿಮಾಗೆ ಹೀರೋ. ಇದೇ ಚಿತ್ರದಲ್ಲಿ ಶಿವಣ್ಣ ಅತಿಥಿ ಪಾತ್ರ ಮಾಡುವ ಮೂಲಕ ಬಹಳ ವರ್ಷಗಳ ನಂತರ ವಿಜಯ್ ರಾಘವೇಂದ್ರ ಜೊತೆ ಅವರು ತೆರೆಹಂಚಿಕೊಂಡಂತೆ ಆಗುತ್ತಿದೆ. ಈ ಮೊದಲು ‘ಭೈರತಿ ರಣಗಲ್’ ಸಿನಿಮಾದಲ್ಲಿ ಶಿವಣ್ಣ ಅವರು ಲಾಯರ್ ಪಾತ್ರ ಮಾಡಿದ್ದರು. ಈಗ ಮತ್ತೆ ‘ಮಹಾನ್’ ಸಿನಿಮಾದಲ್ಲಿ ಅವರು ಕಪ್ಪು ಕೋಟು ಧರಿಸಿದ್ದಾರೆ.
ಇದು ರೈತರ ಕುರಿತಾದ ಕಥೆ ಇರುವ ಸಿನಿಮಾ ಎಂದು ‘ಮಹಾನ್’ ಚಿತ್ರತಂಡ ಹೇಳಿದೆ. ಈ ಬಗ್ಗೆ ನಿರ್ದೇಶಕ ಪಿ.ಸಿ. ಶೇಖರ್ ಅವರು ಮಾತನಾಡಿದ್ದಾರೆ. ‘ಈ ಚಿತ್ರದಲ್ಲಿ ಬರುವ ಪ್ರತಿಯೊಂದು ಪಾತ್ರವೂ ಮುಖ್ಯ ಪಾತ್ರಗಳಾಗಿರುತ್ತದೆ. ಮನೆಯಲ್ಲಿ ನಾವೇನಾದರೂ ತಪ್ಪು ಮಾಡಿದರೆ, ನಮಗೆ ಬುದ್ಧಿ ಹೇಳಲು ತಂದೆ-ತಾಯಿ ಇರುತ್ತಾರೆ. ಅಂಥ ಪರಿಸ್ಥಿತಿ ಸಮಾಜದಲ್ಲಿ ನಿರ್ಮಾಣವಾದಾಗ ಅಲ್ಲಿನ ತೊಂದರೆಗಳನ್ನು ತಿದ್ದಲು ಮಹಾನ್ ವ್ಯಕ್ತಿಯ ಅಗತ್ಯವಿರುತ್ತದೆ. ಅಂತಹ ವ್ಯಕ್ತಿಯ ಪಾತ್ರದಲ್ಲಿ ಶಿವರಾಜ್ಕುಮಾರ್ ಅಭಿನಯಿಸಿದ್ದಾರೆ’ ಎಂದಿದ್ದಾರೆ ಪಿ.ಸಿ. ಶೇಖರ್.
ಇದನ್ನೂ ಓದಿ: ಚೆನ್ನೈನಲ್ಲಿ ಗೀತಾ ಶಿವರಾಜ್ಕುಮಾರ್ ಹುಟ್ಟುಹಬ್ಬ ಆಚರಿಸಿದ ಶಿವಣ್ಣ ಫ್ಯಾನ್ಸ್
‘ಚಿತ್ರದಲ್ಲಿ ಈ ಪಾತ್ರ ಬಹಳ ಪ್ರಮುಖವಾದದ್ದು. ಎಲ್ಲಾ ನಿರ್ದೇಶಕರಿಗೂ ಶಿವರಾಜ್ಕುಮಾರ್ ಅವರ ಸಿನಿಮಾಗೆ ನಿರ್ದೇಶನ ಮಾಡುವ ಆಸೆ ಇರುತ್ತದೆ. ನನಗೂ ಅದು ಬಹಳ ದಿನಗಳ ಹಂಬಲ. ಆ ಆಸೆ ಈಗ ಈಡೇರಿದೆ. ಶಿವರಾಜ್ಕುಮಾರ್ ಅವರು ನಟಿಸಿರುವುದು ನಿರ್ಮಾಪಕ ಪ್ರಕಾಶ್ ಬುದ್ದೂರು ಅವರಿಗೂ ತುಂಬಾ ಸಂತೋಷ ತಂದಿದೆ. ಇಡೀ ‘ಮಹಾನ್’ ಚಿತ್ರತಂಡದಿಂದ ಶಿವಣ್ಣ ಅವರಿಗೆ ತುಂಬು ಹೃದಯದ ಧನ್ಯವಾದಗಳು’ ಎಂದು ಪಿ.ಸಿ. ಶೇಖರ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
