Headlines

ಮದುವೆ ಬೇಡ ಅಂದ್ರೂ ಕೇತನ್ ಕೇಳಲಿಲ್ಲ, ಓಡ್ಹೋಗ್ತೀಯಾ ಹೋಗು ನೀನೆಲ್ಲಿದ್ರೂ ಹುಡುಕ್ತೀವಿ ಅಂದಿದ್ರು: ಸಿಯಾ – Kannada News | Lohagad Fort Case: Siya Claims She Opposed the Marriage, New Details Surface During Probe

ಪುಣೆ, ಜೂನ್ 26: ಪುಣೆಯ ಲೋಹಗಡ್ ಕೋಟೆಯಲ್ಲಿ ಉದ್ಯಮಿ ಕೇತನ್ ಅಗರ್ವಾಲ್(Ketan Agarwal) ಅವರನ್ನು ಕಂದಕಕ್ಕೆ ತಳ್ಳಿ ಕೊಂದ ಪ್ರಕರಣ ದಿನಕ್ಕೊಂದು ಆಘಾತಕಾರಿ ತಿರುವು ಪಡೆಯುತ್ತಿದೆ. ಇಷ್ಟು ದಿನ ಕೌಟುಂಬಿಕ ಒತ್ತಡದಿಂದ ಕೊಲೆ ಮಾಡಿದ್ದಾಗಿ ಹೇಳಿದ್ದ ಹಂತಕಿ ಸಿಯಾ ಗೋಯಲ್, ಈಗ ಪೊಲೀಸರ ಮುಂದೆ ಹೊಸ ವಾದ ಮಂಡಿಸಿದ್ದಾಳೆ. ನನಗೆ ಈ ಮದುವೆ ಇಷ್ಟವಿಲ್ಲ ಎಂದು ಕೇತನ್ ಬಳಿ ಹೇಳಿದ್ದೆ.

ಆದರೆ, ನಮ್ಮದು ಪ್ರಭಾವಿ ಮತ್ತು ಶ್ರೀಮಂತ ಕುಟುಂಬ, ನೀನು ನನ್ನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಓಡಿ ಹೋಗ್ತೀಯಾ ಹೋಗು ನೀನೆಲ್ಲಿದ್ರೂ ಹುಡುಕ್ತೀವಿ ಎಂದು ಕೇತನ್ ಹೇಳಿದ್ದಾಗಿ ಸಿಯಾ ತನಿಖಾಧಿಕಾರಿಗಳಿಗೆ ತಿಳಿಸಿದ್ದಾಳೆ. ಆದಾಗ್ಯೂ, ಆಕೆಯ ಈ ಹೇಳಿಕೆಯನ್ನು ಪೊಲೀಸರು ನ್ಯಾಯಾಂಗ ಪರಿಶೀಲನೆಗೆ ಒಳಪಡಿಸಿದ್ದಾರೆ.

ಕೊಲೆಗೆ ಮುನ್ನ ಓಡಿಹೋಗಲು ಪ್ಲಾನ್ ಮಾಡಿದ್ದ ಪ್ರೇಮಿಗಳು

ಪೊಲೀಸ್ ಮೂಲಗಳ ಪ್ರಕಾರ, ಸಿಯಾ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ಆರಂಭದಲ್ಲಿ ಮದುವೆ ತಪ್ಪಿಸಲು ಓಡಿಹೋಗಿ ಮದುವೆಯಾಗಲು ನಿರ್ಧರಿಸಿದ್ದರು. ಆದರೆ, ತನ್ನ ಹೆತ್ತವರ ಸಾಮಾಜಿಕ ಪ್ರತಿಷ್ಠೆಗೆ ಧಕ್ಕೆ ಬರಬಹುದೆಂಬ ಕಾರಣಕ್ಕೆ ಸಿಯಾ ಹಿಂದೆ ಸರಿದಿದ್ದಳು. ಮದುವೆ ಮುರಿಯಲು ಹಲವು ದಾರಿಗಳನ್ನು ಹುಡುಕಿ ಸುಸ್ತಾದ ಇಬ್ಬರೂ ಸೇರಿ ಕೇತನ್‌ನನ್ನು ಜಗತ್ತಿನಿಂದಲೇ ಮುಗಿಸುವ ಕರಾಳ ನಿರ್ಧಾರಕ್ಕೆ ಬಂದಿದ್ದರು.

ಬಯಲಾಯ್ತು 2,004 ಕರೆಗಳ ಕಳ್ಳಪ್ರೇಮದ ಇತಿಹಾಸ

ಸಿಯಾ ಮತ್ತು ಚೇತನ್ ನಡುವಿನ ಅಕ್ರಮ ಸಂಬಂಧ ನವೆಂಬರ್ 2025 ರಲ್ಲಿ ದೀಪಾವಳಿ ಪಾರ್ಟಿಯೊಂದರಲ್ಲಿ ಆರಂಭವಾಗಿತ್ತು. ಒಂದೆಡೆ ಕುಟುಂಬಸ್ಥರು ನವೆಂಬರ್‌ನಲ್ಲಿ ನಡೆಯಬೇಕಿದ್ದ 17 ಕೋಟಿ ರೂಪಾಯಿ ವೆಚ್ಚದ ಅದ್ದೂರಿ ಮದುವೆಗೆ ಜೈಪುರದಲ್ಲಿ ಅರಮನೆ ಹಾಗೂ ಪ್ರತ್ಯೇಕ ಖಾಸಗಿ ಜೆಟ್‌ಗಳನ್ನು ಬುಕ್ ಮಾಡುತ್ತಿದ್ದರೆ, ಇತ್ತ ಪ್ರೇಮಿಗಳಿಬ್ಬರು ಫೋನ್‌ನಲ್ಲಿ ಮಗ್ನರಾಗಿದ್ದರು.

ಕಳೆದ ಕೇವಲ ಏಳು ತಿಂಗಳಲ್ಲಿ ಸಿಯಾ ಮತ್ತು ಚೇತನ್ ಪರಸ್ಪರ 2,004 ಬಾರಿ ಫೋನ್ ಕರೆ ಮಾಡಿಕೊಂಡಿದ್ದು, ಬರೋಬ್ಬರಿ 238 ಗಂಟೆಗಳ ಕಾಲ ಕೊಲೆಯ ಸಂಚಿನ ಬಗ್ಗೆಯೇ ಮಾತನಾಡಿದ್ದಾರೆ ಎಂದು ಪೊಲೀಸರ ತಾಂತ್ರಿಕ ತನಿಖೆಯಲ್ಲಿ ಬಹಿರಂಗವಾಗಿದೆ.

ಮತ್ತಷ್ಟು ಓದಿ: ತಪ್ಪಿತಸ್ಥಳೆಂದು ಸಾಬೀತಾದರೆ ಮಗಳನ್ನು ಕೂಡ ಅದೇ ಕೋಟೆಯಿಂದ ತಳ್ಳಿ, ಸಿಯಾ ಬಗ್ಗೆ ತಂದೆಯ ಭಾವುಕ ಮಾತು

‘ಪ್ಲಾನ್ ಬಿ’ ಇಂದ ‘ಪ್ಲಾನ್ ಸಿ’ ವರೆಗಿನ ಕರಾಳ ಹೆಜ್ಜೆಗಳು

ಜೂನ್ 14 ರಂದು ಲೋಹಗಡ್ ಕೋಟೆಯಲ್ಲಿ ಸಿಯಾ, ಕೇತನ್‌ನನ್ನು ಮೊದಲ ಬಾರಿ ಬಂಡೆಯಿಂದ ಕೆಳಗೆ ತಳ್ಳಿದ್ದಳು. ಆದರೆ ಆತ ಪೊದೆ ಹಿಡಿದು ಬದುಕುಳಿದಾಗ, ಹಾವು ಬಂತು ಎಂದು ಸುಳ್ಳು ಹೇಳಿ ಅಪ್ಪಿಕೊಂಡು ನಾಟಕವಾಡಿದ್ದಳು . ಈ ಪ್ರಯತ್ನ ವಿಫಲವಾದಾಗ ಪ್ರೇಮಿಗಳಿಬ್ಬರು ಮತ್ತೊಂದು ಯೋಜನೆ ರೂಪಿಸಿದ್ದರು. ಇದರಂತೆ ಜೂನ್ 18 ರಂದು ಸಿಯಾ ಮತ್ತೆ ಕೇತನ್‌ನನ್ನು ಅದೇ ಕೋಟೆಗೆ ಕರೆತಂದಿದ್ದಾಳೆ. ಈ ಬಾರಿ ಚೇತನ್‌ನನ್ನೂ ಜೊತೆಗೆ ಕರೆಯಿಸಿಕೊಂಡು, ಇಬ್ಬರೂ ಸೇರಿ ಕೇತನ್‌ನನ್ನು ಹಿಂದಿನಿಂದ 400 ಅಡಿ ಆಳದ ಕಂದಕಕ್ಕೆ ತಳ್ಳಿ ಮುಗಿಸಿದ್ದಾರೆ.

ಕೊಲೆ ಮಾಡಿ ಅದನ್ನು ಅಪಘಾತ ಎಂದು ಬಿಂಬಿಸಲು ಇಬ್ಬರೂ ಯಶಸ್ವಿಯಾಗಿದ್ದರು. ಆದರೆ ಸಿಯಾ ಮುಖದಲ್ಲಿ ದುಃಖವಿಲ್ಲದ್ದನ್ನು ಕಂಡು ಪೊಲೀಸರು ಬಂಧಿಸಿದ ತಕ್ಷಣ, ಇಬ್ಬರ ಕಳ್ಳಪ್ರೇಮದ ನಾಟಕ ಮುಗಿದಿದೆ. ಈಗ ಜೈಲಿನಲ್ಲಿ ಇಬ್ಬರೂ ಒಬ್ಬರ ಮೇಲೊಬ್ಬರು ತಪ್ಪು ಹೊರಿಸಲು ಆರಂಭಿಸಿದ್ದಾರೆ. ನನಗೆ ಸಿಯಾಳನ್ನು ಕರ್ಕೊಂಡು ಓಡಿಹೋಗುವುದಷ್ಟೇ ಗುರಿಯಾಗಿತ್ತು. ಆದರೆ ಕೇತನ್‌ನನ್ನು ಕೊಲ್ಲುವಂತೆ ನನ್ನನ್ನು ಸಂಪೂರ್ಣವಾಗಿ ಪ್ರೇರೇಪಿಸಿದ್ದೇ ಸಿಯಾ ಎಂದು ಚೇತನ್ ಹೇಳಿದ್ದಾನೆ. ಕೊಲೆ ಮಾಡುವುದು ಚೇತನ್ ಐಡಿಯಾ ಆಗಿತ್ತು. ಜೂನ್ 14 ರಂದು ಮೊದಲ ಕೊಲೆ ಯತ್ನ ವಿಫಲವಾದಾಗ ಚೇತನ್ ನನ್ನ ಮುಂದೆ ಮಗುವಿನಂತೆ ಕಣ್ಣೀರು ಹಾಕಿದ್ದ, ಹಾಗಾಗಿ ನಾನು ಒಪ್ಪಬೇಕಾಯಿತು ಎಂದಿದ್ದಾಳೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *