ಮಧುಮೇಹ (Diabetes) ರೋಗಿಗಳಿಗೆ ದಿನನಿತ್ಯ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಲು ಸೂಜಿ ಚುಚ್ಚುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಆದರೆ ಇದು ನೋವು ಹಾಗೂ ಕಿರಿಕಿರಿ ಉಂಟುಮಾಡುತ್ತದೆ. ಇದೀಗ ಈ ಸಮಸ್ಯೆಗೆ ಪರಿಹಾರವಾಗಿ ನಾಗ್ಪುರದ ರಾಷ್ಟ್ರಸಂತ ತುಕಡೋಜಿ ಮಹಾರಾಜ್ ನಾಗ್ಪುರ ವಿಶ್ವವಿದ್ಯಾಲಯದ (RTMNU) ಸಂಶೋಧಕರು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಸಾಧನದ ಮೂಲಕ ಕೇವಲ ಉಸಿರಿನ ಸಹಾಯದಿಂದಲೇ ಶುಗರ್ ಮಟ್ಟವನ್ನು ಪರೀಕ್ಷಿಸಬಹುದಾಗಿದೆ. ಹೌದು, ಕೇಳುವಾಗ ಆಶ್ಚರ್ಯ ಹುಟ್ಟಿಸಿದರೂ ಕೂಡ ಇದರಿಂದ ಅನೇಕರಿಗೆ ಅನುಕೂಲವಾಗುವುದರಲ್ಲಿ ಸಂಶಯವಿಲ್ಲ. ಹಾಗಾದರೆ ಈ ಹೊಸ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ ಎಂಬಿತ್ಯಾದಿ ಮಾಹಿತಿಗಳನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಹೊಸ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ?
ಈ ಸಾಧನವು ‘ನಾನ್- ಇನ್ವೇಸಿವ್’ ತಂತ್ರಜ್ಞಾನವನ್ನು ಆಧರಿಸಿದೆ. ಅಂದರೆ ದೇಹಕ್ಕೆ ಯಾವುದೇ ರೀತಿಯ ಹಾನಿ ಮಾಡದೇ ಪರೀಕ್ಷೆ ನಡೆಸಬಹುದು. ವ್ಯಕ್ತಿಯ ಉಸಿರಿನಲ್ಲಿರುವ ರಾಸಾಯನಿಕ ಅಂಶಗಳನ್ನು ವಿಶ್ಲೇಷಿಸಿ, ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ಅಂದಾಜು ಮಾಡುತ್ತದೆ. ಈ ತಂತ್ರಜ್ಞಾನವು ಶುದ್ಧ, ವೇಗವಾದ ಮತ್ತು ನೋವಿಲ್ಲದ ಪರೀಕ್ಷೆಗೆ ಸಹಾಯ ಮಾಡುತ್ತದೆ. ಈ ಆವಿಷ್ಕಾರಕ್ಕೆ ಯುಕೆ ಡಿಸೈನ್ ಪ್ರಮಾಣಪತ್ರ ದೊರೆತಿದ್ದು, ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಸಂಶೋಧನೆಯ ಮಹತ್ವವನ್ನು ತೋರಿಸುತ್ತದೆ. ಈ ಸಾಧನ ಅಭಿವೃದ್ಧಿಯಲ್ಲಿ ಡಾ. ವರ್ಷಾ ಧುರ್ವೆ, ಹರ್ಷ ತಿವಾರಿ, ಸಬ್ರೀನ್ ಬಾನು ಸೇರಿದಂತೆ ಹಲವು ತಜ್ಞರು ಪ್ರಮುಖ ಪಾತ್ರವಹಿಸಿದ್ದಾರೆ. ಇತರ ದೇಶಗಳ ವಿಜ್ಞಾನಿಗಳ ಸಹಕಾರವೂ ಇದರಲ್ಲಿ ಇದೆ ಎಂಬುದು ತಿಳಿದು ಬಂದಿದೆ.
ಇದನ್ನೂ ಓದಿ: ಪದೇ ಪದೇ ಹಸಿವಾಗುವುದು ಮಧುಮೇಹದ ಆರಂಭಿಕ ಲಕ್ಷಣವೇ? ಇಲ್ಲಿದೆ ತಜ್ಞರ ಉತ್ತರ
ಭವಿಷ್ಯದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ;
ಈ ಸಾಧನವು ಯಶಸ್ವಿಯಾಗಿ ಮಾರುಕಟ್ಟೆಗೆ ಬಂದರೆ, ಮಧುಮೇಹಿಗಳಿಗೆ ದಿನನಿತ್ಯದ ಪರೀಕ್ಷೆ ಸುಲಭವಾಗುತ್ತದೆ. ಮನೆಲ್ಲಿಯೇ ಸರಳವಾಗಿ ಪರೀಕ್ಷೆ ನಡೆಸಬಹುದು ಮತ್ತು ಆಸ್ಪತ್ರೆಗೆ ಹೋಗುವ ಅಗತ್ಯ ಕಡಿಮೆಯಾಗುತ್ತದೆ. ಇದರಿಂದ ಚಿಕಿತ್ಸೆ ಪ್ರಕ್ರಿಯೆ ಹೆಚ್ಚು ಸುಗಮವಾಗುವ ಸಾಧ್ಯತೆ ಇದೆ. ಪ್ರಸ್ತುತ ಈ ಸಾಧನದ ಶುದ್ಧತೆ ಮತ್ತು ನಿಖರತೆಯನ್ನು ಖಚಿತಪಡಿಸಲು ವಿವಿಧ ಪರೀಕ್ಷೆಗಳು ನಡೆಯುತ್ತಿವೆ. ಎಲ್ಲಾ ಹಂತಗಳನ್ನು ಪೂರ್ಣಗೊಳಿಸಿದ ನಂತರ ಇದು ಸಾರ್ವಜನಿಕರಿಗೆ ಲಭ್ಯವಾಗಲಿದೆ. ಒಟ್ಟಿನಲ್ಲಿ, ಈ ಹೊಸ ತಂತ್ರಜ್ಞಾನ ಮಧುಮೇಹಿಗಳ ಜೀವನವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಯಾಗಲಿದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
