ನೆಲ್ಲಿಕಾಯಿ (Amla) ಆರೋಗ್ಯಕ್ಕೆ ಅತ್ಯಂತ ಉಪಯುಕ್ತವಾದ ನೈಸರ್ಗಿಕ ಸೂಪರ್ಫುಡ್ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಅದರಲ್ಲಿಯೂ ವಿಶೇಷವಾಗಿ ಮಧುಮೇಹ (ಡಯಾಬಿಟಿಸ್) ಇರುವವರಿಗೆ ಇದು ವರದಾನವೆಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹೌದು, ಊಟಕ್ಕೆ 20- 30 ನಿಮಿಷಗಳ ಮೊದಲು ನೆಲ್ಲಿಕಾಯಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯವಾಗಬಹುದು. ಅಷ್ಟೇ ಅಲ್ಲ, ಈ ಒಂದು ಅಭ್ಯಾಸದಿಂದ ಅನೇಕ ರೀತಿಯ ಲಾಭಗಳಿವೆ. ಹಾಗಾದರೆ ಯಾವ ರೀತಿಯಲ್ಲಿ ಪ್ರಯೋಜನಕಾರಿ, ನೆಲ್ಲಿಕಾಯಿ ಸೇವನೆ ಹೇಗೆ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ರಕ್ತದ ಸಕ್ಕರೆ ನಿಯಂತ್ರಣಕ್ಕೆ ಸಹಕಾರಿ:
ಕೆಲವು ಅಧ್ಯಯನಗಳ ಪ್ರಕಾರ, ನೆಲ್ಲಿಕಾಯಿಯಲ್ಲಿ ಕ್ರೋಮಿಯಂ (Chromium) ಎಂಬ ಖನಿಜಾಂಶವಿದೆ. ಇದು ದೇಹದಲ್ಲಿ ಇನ್ಸುಲಿನ್ ಕಾರ್ಯಕ್ಷಮತೆಯನ್ನು ಸುಧಾರಿಸಲು ನೆರವಾಗುತ್ತದೆ. ಊಟಕ್ಕೂ ಮುನ್ನ ನೆಲ್ಲಿಕಾಯಿ ತಿಂದರೆ ಆಹಾರದಲ್ಲಿನ ಕಾರ್ಬೋಹೈಡ್ರೇಟ್ಗಳು ನಿಧಾನವಾಗಿ ಜೀರ್ಣವಾಗಿ ಗ್ಲೂಕೋಸ್ ಆಗಿ ಪರಿವರ್ತನೆಯಾಗುತ್ತವೆ. ಇದರಿಂದ ಊಟದ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟ ಹಠಾತ್ ಏರಿಕೆಯಾಗುವ ಸಾಧ್ಯತೆ ಕಡಿಮೆಯಾಗುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:
ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿ, ಜ್ವರ, ಶೀತ ಹಾಗೂ ಸೋಂಕುಗಳ ವಿರುದ್ಧ ರಕ್ಷಣೆ ನೀಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಪ್ರತಿದಿನ ಒಂದು ಗ್ಲಾಸ್ ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿ ಎಷ್ಟೆಲ್ಲಾ ಬದಲಾವಣೆಯಾಗುತ್ತೆ ಗೊತ್ತಾ?
ಹೃದಯದ ಆರೋಗ್ಯಕ್ಕೂ ಉತ್ತಮ:
ನೆಲ್ಲಿಕಾಯಿಯಲ್ಲಿರುವ ಆಂಟಿಆಕ್ಸಿಡೆಂಟ್ಗಳು ಕೆಟ್ಟ ಕೊಲೆಸ್ಟ್ರಾಲ್ (LDL) ಮಟ್ಟವನ್ನು ಕಡಿಮೆ ಮಾಡಲು ನೆರವಾಗುತ್ತವೆ. ಇದರಿಂದ ರಕ್ತನಾಳಗಳ ಆರೋಗ್ಯ ಸುಧಾರಿಸಿ, ಹೃದಯ ಸಂಬಂಧಿತ ಸಮಸ್ಯೆಗಳ ಅಪಾಯ ಕಡಿಮೆಯಾಗಬಹುದು.
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ:
ನೆಲ್ಲಿಕಾಯಿಯಲ್ಲಿರುವ ನಾರಿನಾಂಶ (Fiber) ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ. ಗ್ಯಾಸ್ಟ್ರಿಕ್, ಅಜೀರ್ಣ ಹಾಗೂ ಮಲಬದ್ಧತೆ ಸಮಸ್ಯೆಗಳಿಂದ ಬಳಲುವವರಿಗೆ ಇದು ಸಹಕಾರಿ.
ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಒಳ್ಳೆಯದು:
ನೆಲ್ಲಿಕಾಯಿ ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಇದರಿಂದ ಚರ್ಮ ಕಾಂತಿಯುತವಾಗಲು ನೆರವಾಗುತ್ತದೆ. ಜೊತೆಗೆ ಕೂದಲು ಉದುರುವಿಕೆಯನ್ನು ಕಡಿಮೆ ಮಾಡಿ, ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಹೇಗೆ ಸೇವಿಸಬೇಕು?
ಮಧುಮೇಹ ಇರುವವರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ಊಟಕ್ಕೂ ಮುನ್ನ ತಾಜಾ ನೆಲ್ಲಿಕಾಯಿ ತುಂಡುಗಳನ್ನು ಸೇವಿಸಬಹುದು. ಹಾಗೆಯೇ ತಿನ್ನಲು ಸಾಧ್ಯವಾಗದಿದ್ದರೆ, ನೆಲ್ಲಿಕಾಯಿ ರಸಕ್ಕೆ ಸಲ್ಪ ಸಕ್ಕರೆ ಸೇರಿಸಿ ಉಗುರುಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯಬಹುದು. ಆದರೆ ಸಕ್ಕರೆ ಸೇರಿಸಿದ ನೆಲ್ಲಿಕಾಯಿ ಮಿಠಾಯಿ, ಕ್ಯಾಂಡಿಯನ್ನು ತಪ್ಪಿಸುವುದು ಉತ್ತಮ.
ಆದರೆ ಮಧುಮೇಹದ ಔಷಧಿಗಳನ್ನು ತೆಗೆದುಕೊಳ್ಳುತ್ತಿರುವವರು ಆಹಾರದಲ್ಲಿ ದೊಡ್ಡ ಬದಲಾವಣೆ ಮಾಡುವ ಮೊದಲು ವೈದ್ಯರ ಸಲಹೆ ಪಡೆಯುವುದು ಒಳಿತು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
