ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ಹೋರಾಟಗಾರ ಸೋನಮ್ ವಾಂಗ್ಚುಕ್ (Sonam Wangchuk) ಅವರ ಆರೋಗ್ಯ ಹದಗೆಡುತ್ತಿದ್ದು, ಆಸ್ಪತ್ರೆಯಲ್ಲಿ ಉಪವಾಸ ಸತ್ಯಾಗ್ರಹ ಮುಂದುವರಿಸಿದ್ದಾರೆ. ಈ ನಡುವೆ, ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರು ವಾಂಗ್ಚುಕ್ ಅವರಿಗೆ ತಮ್ಮ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸುವಂತೆ ವಿನಂತಿಸಿದ್ದು, ‘ನಿಮಗೆ ಬೇಕಿದ್ದರೆ ಮನೆಯಿಂದ ಊಟ ತರಿಸಿಕೊಡುತ್ತೇನೆ’ ಎಂದು ಹೇಳಿದ್ದಾರೆ. ದೇಶದ ಉತ್ತಮ ಶಿಕ್ಷಣ ವ್ಯವಸ್ಥೆಗಾಗಿ ನಡೆಯುತ್ತಿರುವ ವಿದ್ಯಾರ್ಥಿಗಳ ಹೋರಾಟವನ್ನು ಶ್ಲಾಘಿಸಿದ್ದ ಸಲ್ಮಾನ್ ಖಾನ್, ಇದೀಗ ಪ್ರತಿಭಟನೆ ನಿಲ್ಲಿಸಿ ತಮ್ಮ ಮನೆಗಳಿಗೆ ಹಿಂತಿರುಗುವಂತೆ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದ್ದಾರೆ.
ಗುರುವಾರ (ಜುಲೈ 23) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡ ಸಲ್ಮಾನ್ ಖಾನ್, ‘ವಿದ್ಯಾರ್ಥಿಗಳ ಶಿಕ್ಷಣ ಮತ್ತು ಭದ್ರತೆ ನಮಗೆ ಮೊದಲ ಆದ್ಯತೆಯಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಆತಂಕ ಪಡುವ ಅಗತ್ಯವಿಲ್ಲ. ಮಾನ್ಯ ಪ್ರಧಾನ ಮಂತ್ರಿಯವರೇ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಗೆ ಕಾರಣರಾದವರ ವಿರುದ್ಧ ಅವರು ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂಬ ಭರವಸೆ ನನಗಿದೆ. ಹಾಗಾಗಿ ವಿದ್ಯಾರ್ಥಿಗಳು ದಯವಿಟ್ಟು ನಿಮ್ಮ ಮನೆಗಳಿಗೆ ಹಾಗೂ ಪೋಷಕರ ಬಳಿಗೆ ಹಿಂತಿರುಗಿ’ ಎಂದು ಕೋರಿದ್ದಾರೆ.
ಉಪವಾಸ ಮುಂದುವರಿಸಬೇಡಿ: ಸಲ್ಮಾನ್ ಖಾನ್
ಇದೇ ವೇಳೆ ಸೋನಮ್ ವಾಂಗ್ಚುಕ್ ಅವರ ಸತ್ಯಾಗ್ರಹದ ಬಗ್ಗೆ ಪ್ರಸ್ತಾಪಿಸಿದ ಸಲ್ಮಾನ್, ‘ಸೋನಮ್, ಇದು ಸಾಕು ಸಹೋದರ. ಇದನ್ನು ಇನ್ನಷ್ಟು ಮುಂದುವರಿಸಬೇಡಿ. ಮುಂದೆಂದಾದರೂ ಅಗತ್ಯ ಬಿದ್ದರೆ (ಅಗತ್ಯ ಬರಲಾರದು ಎಂಬ ನಂಬಿಕೆ ನನಗಿದೆ) ಹೋರಾಟಕ್ಕೆ ಈ ಶಕ್ತಿಯನ್ನು ಕಾಯ್ದಿರಿಸಿಕೊಳ್ಳಿ. ಮೊದಲು ಏನನ್ನಾದರೂ ಸೇವಿಸಿ. ನಿಮಗೆ ಬೇಕಿದ್ದರೆ ನನ್ನ ಮನೆಯಿಂದಲೇ ಊಟ ಕಳುಹಿಸಿಕೊಡುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಜುಲೈ 18ರಂದು ದೆಹಲಿ ಪೊಲೀಸರು ಅವರನ್ನು ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ತದನಂತರ ದೆಹಲಿ ಹೈಕೋರ್ಟ್ ಆದೇಶದಂತೆ ಗುರುಗ್ರಾಮದ ಮೆದಾಂತ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಆಸ್ಪತ್ರೆಯಲ್ಲೂ ಅವರು ಸತ್ಯಾಗ್ರಹ ಮುಂದುವರಿಸಿದ್ದಾರೆ.
ವಿದ್ಯಾರ್ಥಿಗಳ ಹೋರಾಟ ಬೆಂಬಲಿಸಿದ್ದ ಸಲ್ಮಾನ್:
ಈ ಮೊದಲು ದೀರ್ಘ ಪೋಸ್ಟ್ ಬರೆದಿದ್ದ ಸಲ್ಮಾನ್ ಖಾನ್, ‘ಇಷ್ಟೊಂದು ಶಾಂತಿಯುತವಾಗಿದ್ದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡದ್ದು ಬೇಸರ ತಂದಿದೆ. ಗಾಯಗೊಂಡ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳ ಪರ ನಾನಿದ್ದೇನೆ. ಪ್ರಶ್ನೆಪತ್ರಿಕೆ ಸೋರಿಕೆ ಅತ್ಯಂತ ಗಂಭೀರ ವಿಚಾರ. ಉತ್ತಮ ಶಿಕ್ಷಣ ವ್ಯವಸ್ಥೆಗಾಗಿ ದೇಶದ ಮಕ್ಕಳು ಒಂದಾಗಿರುವುದು ಹಾಗೂ ಪೋಷಕರು ಬೆಂಬಲ ನೀಡುತ್ತಿರುವುದು ಸಂತಸ ತಂದಿದೆ’ ಎಂದಿದ್ದರು.
ಇದನ್ನೂ ಓದಿ: ನೀಟ್ ಪೇಪರ್ ಲೀಕ್ ಪ್ರತಿಭಟನೆಗೆ ಸಲ್ಮಾನ್ ಖಾನ್ ಬೆಂಬಲ; ಹಿಂಸಾಚಾರಕ್ಕೆ ಸಲ್ಲು ಬೇಸರ
‘ಸಮರ್ಪಣಾ ಭಾವ ಮತ್ತು ದೃಢಸಂಕಲ್ಪದಿಂದ ವಿದ್ಯಾಭ್ಯಾಸ ಮಾಡಿ, ದೇಶಕ್ಕೆ ಉತ್ತಮ ಭವಿಷ್ಯ ರೂಪಿಸಲು ಹೋರಾಡುತ್ತಿರುವ ವಿದ್ಯಾರ್ಥಿಗಳ ನಿಲುವನ್ನು ನಾನು ಹೃತ್ಪೂರ್ವಕವಾಗಿ ಮೆಚ್ಚುತ್ತೇನೆ. ಈ ಆಂದೋಲನವನ್ನು ವಿದ್ಯಾರ್ಥಿಗಳು ಶಾಂತಿಯುತವಾಗಿ ನಡೆಸಿದ್ದಾರೆ. ಈ ಪೀಳಿಗೆಯ ಧೈರ್ಯ ಮತ್ತು ಶ್ರದ್ಧೆ ಭಾರತಕ್ಕೆ ಹೆಮ್ಮೆ ತರಲಿದೆ. ಇದೊಂದು ಶಿಕ್ಷಣ ವ್ಯವಸ್ಥೆ ಮತ್ತು ವಿದ್ಯಾರ್ಥಿಗಳ ನಡುವಿನ ವಿಷಯ. ಇದನ್ನು ಯಾರೂ ರಾಜಕೀಯವಾಗಿ ಬಳಸಿಕೊಳ್ಳಬಾರದು. ಸರ್ಕಾರದ ಬೆಂಬಲದೊಂದಿಗೆ ಇದೊಂದು ಗೆಲುವಿನ ಹಾದಿಯಾಗಲಿ’ ಎಂದು ಸಲ್ಮಾನ್ ಹಾರೈಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.