ಶಾರುಖ್ ಖಾನ್ (Shah Rukh Khan) ಅವರನ್ನು ಕಿಂಗ್ ಖಾನ್ ಎಂದು ಕರೆಯಲಾಗುತ್ತದೆ. ಇದೀಗ ಅವರು ತಮ್ಮ ಹೆಸರಿಗೆ ತಕ್ಕಂತೆ ರಾಜರ ಹೃದಯ ವೈಶಾಲ್ಯ, ಉದಾರತೆ ಮೆರೆದಿದ್ದಾರೆ. ಸಿನಿಮಾದ ತಾಂತ್ರಿಕತೆಗೆ ಸಂಬಂಧಿಸಿದ ಉದ್ಯಮಗಳನ್ನು ಹೊಂದಿರುವ ಶಾರುಖ್ ಖಾನ್ ಇದೀಗ ಮರಾಠಿ ಸಿನಿಮಾ ಒಂದರ 42 ಲಕ್ಷ ರೂಪಾಯಿ ಬಾಕಿ ಹಣವನ್ನು ಮನ್ನಾ ಮಾಡಿದ್ದು, ತಮಗೆ ಹಣಕ್ಕಿಂತಲೂ ಸಿನಿಮಾ ಮುಖ್ಯ ಎಂದು ತೋರಿಸಿದ್ದಾರೆ. ಮರಾಠಿ ಚಿತ್ರರಂಗದ ‘ದೇವೂಲ್ ಬಂದ್ 2’ ಚಿತ್ರಕ್ಕೆ ಸಂಬಂಧಿಸಿದಂತೆ, ಶಾರುಖ್ ಅವರ ನಿರ್ಮಾಣ ಸಂಸ್ಥೆಯಾದ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಸುಮಾರು 42 ಲಕ್ಷ ರೂಪಾಯಿಗಳ ಬಾಕಿಯನ್ನು ಮನ್ನಾ ಮಾಡಿದೆ. ಶಾರುಖ್ ಅವರ ಈ ನಡೆಯನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ.
ಮರಾಠಿ ಸಿನಿಮಾ ‘ದೇವೂಲ್ ಬಂದ್ 2’ ತನ್ನ ಕಂಟೆಂಟ್ ಇಂದಾಗಿ ಸಖತ್ ಹಿಟ್ ಆಗಿದೆ. ವಿಮರ್ಶಕರು ಮತ್ತು ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡಿದೆ. ಅತಿ ಹೆಚ್ಚು ಗಳಿಕೆ ಮಾಡಿದ ಮರಾಠಿ ಸಿನಿಮಾಗಳಲ್ಲಿ ಒಂದು ಎನಿಸಿಕೊಂಡಿದೆ. ಆದರೆ ಈ ಸಿನಿಮಾದ ಚಿತ್ರಕ್ಕೆ ಸಂಬಂಧಿಸಿದ ತಾಂತ್ರಿಕ ಪ್ರಕ್ರಿಯೆಗಳು ಮತ್ತು ವಿತರಣೆಯ ವಿಷಯದಲ್ಲಿ ಶಾರುಖ್ ಖಾನ್ ಒಡೆತನದ ರೆಡ್ ಚಿಲ್ಲೀಸ್ ಸಂಸ್ಥೆಗೆ ಹಣ ಬಾಕಿ ಇತ್ತು. ಈ ಸಿನಿಮಾದ ನಿರ್ದೇಶಕ ಪ್ರವೀಣ್ ತರ್ಡೆ ಅವರ ಕಠಿಣ ಪರಿಶ್ರಮ ಮತ್ತು ಮರಾಠಿ ಚಿತ್ರರಂಗದ ಮೇಲಿನ ಗೌರವದಿಂದ ಶಾರುಖ್ ಖಾನ್ ಅವರು 42 ಲಕ್ಷ ರೂಪಾಯಿ ಬಾಕಿಯನ್ನು ಮನ್ನಾ ಮಾಡಿದ್ದಾರೆ. ಯಾವುದೇ ರೀತಿಯ ಕಾನೂನು ವಿವಾದಗಳಿಗೆ ಹೋಗದೆ, ಮರಾಠಿ ನಿರ್ಮಾಪಕರಿಗೆ ನೆರವಾಗಲು ರೆಡ್ ಚಿಲ್ಲೀಸ್ ಸಂಸ್ಥೆಯು ಈ ಬಾಕಿಯನ್ನು ರದ್ದುಗೊಳಿಸಿದೆ.
ಇದನ್ನೂ ಓದಿ:ಶಾರುಖ್ ಖಾನ್ ಅಲಭ್ಯತೆ; ‘ಜೈಲರ್ 2’ ಸಿನಿಮಾದಲ್ಲಿ ಅತಿಥಿ ಪಾತ್ರವೇ ಡಿಲೀಟ್
ಈ ಬಗ್ಗೆ ಪ್ರತಿಕ್ರಿಯಿಸಿರುವ ಚಿತ್ರತಂಡ, ಶಾರುಖ್ ಖಾನ್ ಅವರ ಈ ಸಹಾಯವು ಮರಾಠಿ ಚಿತ್ರರಂಗಕ್ಕೆ ದೊಡ್ಡ ಬೆಂಬಲ ನೀಡಿದಂತಾಗಿದೆ ಎಂದು ತಿಳಿಸಿದೆ. ಪ್ರವೀಣ್ ತರ್ಡೆ ಅವರು ಶಾರುಖ್ ಖಾನ್ ಅವರ ಈ ಉದಾರ ಗುಣಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಸ್ಟಾರ್ ನಟನೊಬ್ಬ ಸಣ್ಣ ಚಿತ್ರರಂಗದ ತಂಡಕ್ಕೆ ನೀಡಿದ ಈ ಸಹಕಾರವು ಈಗ ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.
‘ದೇವೂಲ್ ಬಂದ್ 2’ ಸಿನಿಮಾವು ದೇವರು ಮತ್ತು ಭಕ್ತರ ನಡುವಿನ ಕತೆಯನ್ನು ಒಳಗೊಂಡಿದೆ. ಜೀವನದಲ್ಲಿ ನೊಂದ ಯುವತಿಯೊಬ್ಬರು ದೇವರ ಮೇಲೆ ಸಿಟ್ಟಾಗಿ ದೇವಸ್ಥಾನದ ಕಡೆ ಕಲ್ಲು ಎಸೆಯುತ್ತಾಳೆ. ಆಗ ಖುದ್ದು ದೇವರು (ಸ್ವಾಮಿ ಸಮರ್ಥ್) ಪ್ರತ್ಯಕ್ಷವಾಗಿ ಆಕೆಗೆ ಕಾಣುತ್ತಾರೆ. ಆ ಬಳಿಕ ಆ ಇಬ್ಬರೂ ಒಟ್ಟಿಗೆ ಒಂದು ಪಯಣ ಮಾಡುತ್ತಾರೆ. ಈ ವೇಳೆ ನಡೆಯುವ ತಮಾಷೆ, ಸಂದೇಶಗಳು, ಸನ್ನಿವೇಶಗಳ ಕತೆಯನ್ನು ಸಿನಿಮಾ ಒಳಗೊಂಡಿದೆ. ಮೇ ತಿಂಗಳಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ದೊಡ್ಡ ಹಿಟ್ ಆಗಿದೆ. ಸಿನಿಮಾ ಈ ವರೆಗೆ 85 ಕೋಟಿಗೂ ಹೆಚ್ಚು ಮೊತ್ತವನ್ನು ಬಾಕ್ಸ್ ಆಫೀಸ್ನಲ್ಲಿ ಗಳಿಕೆ ಮಾಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
