ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಬಂದು ಕ್ಯಾಬ್ ಚಾಲಕನ ಕಿಡ್ನ್ಯಾಪ್, ದರೋಡೆ! – Kannada News | Bengaluru: Gang in Mercedes Benz Kidnaps and Robs Cab Driver Over Women Dispute

ಮರ್ಸಿಡೀಸ್ ಬೆಂಜ್ ಕಾರಿನಲ್ಲಿ ಬಂದು ಕ್ಯಾಬ್ ಚಾಲಕನ ಕಿಡ್ನ್ಯಾಪ್, ದರೋಡೆ!
Image Credit source: nationworldnews.com

ಬೆಂಗಳೂರು, ಮೇ 25: ನಗರದ ಹೊರವಲಯದಲ್ಲಿ ತಡರಾತ್ರಿ ಭೀಕರ ಘಟನೆಯೊಂದು ಸಂಭವಿಸಿದೆ. ವಿಮಾನ ನಿಲ್ದಾಣಕ್ಕೆ ಹೋಗಿದ್ದ ಕ್ಯಾಬ್ ಚಾಲಕ ಮತ್ತು ಆತನ ಸ್ನೇಹಿತನನ್ನು ಮರ್ಸಿಡಿಸ್ ಬೆಂಜ್ (Mercedes-Benz) ಕಾರಿನಲ್ಲಿ ಬಂದ ಗ್ಯಾಂಗ್‌ವೊಂದು ಅಪಹರಿಸಿ, ಚಾಕು ಹಾಗೂ ಕಬ್ಬಿಣದ ರಾಡ್‌ಗಳಿಂದ ಹಲ್ಲೆ ನಡೆಸಿದ್ದಲ್ಲದೆ ನಗದು ಹಾಗೂ ಮೊಬೈಲ್ ದರೋಡೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರ ವಿಚಾರಕ್ಕೆ ಸಂಬಂಧಿಸಿದ ಜಗಳವೇ ಈ ಕೃತ್ಯಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಮರ್ಸಿಡಿಸ್ ಕಾರಿನಲ್ಲಿ ಬಂದ ಗ್ಯಾಂಗ್‌ನಿಂದ ಕ್ಯಾಬ್ ಚಾಲಕನ ಅಪಹರಣ.
  • ಮಹಿಳೆಯ ವಿಚಾರದ ಜಗಳಕ್ಕಾಗಿ ಚಾಕು ತೋರಿಸಿ ಭೀಕರ ದರೋಡೆ ನಡೆಸಿದ ದುಷ್ಕರ್ಮಿಗಳು.
  • ಗಾಯಗೊಂಡ ಸ್ನೇಹಿತ ಆಸ್ಪತ್ರೆಗೆ ದಾಖಲು, ಬಾಗಲೂರು ಪೊಲೀಸರಿಂದ ಶಂಕಿತರ ತೀವ್ರ ವಿಚಾರಣೆ.

ಏನಿದು ಘಟನೆ?

ಮೊಹಮ್ಮದ್ ರಫೀಕ್ (30) ಮೂಲತಃ ಕೇರಳದವರಾಗಿದ್ದು, ಕಳೆದ ಆರು ತಿಂಗಳಿನಿಂದ ಬೆಂಗಳೂರಿನಲ್ಲಿ ಬಾಡಿಗೆ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಮೇ 21ರ ತಡರಾತ್ರಿ 1 ಗಂಟೆ ಸುಮಾರಿಗೆ ರಫೀಕ್ ತಮ್ಮ ಸ್ನೇಹಿತ ದೀಪಕ್‌ನನ್ನು ಪಿಕ್ ಅಪ್ ಮಾಡಲು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA) ಹೋಗಿದ್ದರು. ದೀಪಕ್‌ನನ್ನು ಕರೆದುಕೊಂಡು ವಾಪಸ್ ಬರುತ್ತಿದ್ದಾಗ, ಬೇಗೂರು ಸಮೀಪ ಬಿಳಿ ಬಣ್ಣದ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಬಂದ 5 ರಿಂದ 6 ಜನರ ಗ್ಯಾಂಗ್ ಇವರ ಕ್ಯಾಬ್ ಅನ್ನು ಅಡ್ಡಗಟ್ಟಿದೆ.

ಚಾಕು ತೋರಿಸಿ ಕಿಡ್ನ್ಯಾಪ್, ದರೋಡೆ

ಕಾರಿನಿಂದ ಇಳಿದ ದುಷ್ಕರ್ಮಿಗಳು ಚಾಕು ಮತ್ತು ಮಾರಕಾಸ್ತ್ರಗಳನ್ನು ತೋರಿಸಿ ರಫೀಕ್‌ನನ್ನು ಬಲವಂತವಾಗಿ ಬೆಂಜ್ ಕಾರಿಗೆ ಎಳೆದುಕೊಂಡಿದ್ದಾರೆ. ಅವರ ಬಳಿಯಿದ್ದ 21,000 ರೂ. ನಗದು ಹಾಗೂ ಮೊಬೈಲ್ ಫೋನ್ ಕಸಿದುಕೊಂಡು ನಗರದ ಕಡೆಗೆ ಚಲಿಸಿದ್ದಾರೆ. ಬಳಿಕ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ, ರಫೀಕ್‌ನಿಂದ ಆತನ ಮತ್ತೊಬ್ಬ ಸ್ನೇಹಿತ ಜಾಬಿರ್ ಎಂಬುವವನಿಗೆ ಕರೆ ಮಾಡಿಸಿದ್ದಾರೆ. ತನಗೆ ಅಪಘಾತವಾಗಿದೆ ಎಂದು ಸುಳ್ಳು ಹೇಳಿಸಿ ಜಾಬಿರ್‌ನನ್ನು ಸ್ಥಳಕ್ಕೆ ಬರುವಂತೆ ಪ್ಲಾನ್ ಮಾಡಿದ್ದರು.

ಸ್ನೇಹಿತ ಕರೆ ಮಾಡಿದ್ದಕ್ಕೆ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಜಾಬಿರ್‌ನನ್ನೂ ಸಹ ಈ ಗ್ಯಾಂಗ್ ಕಬ್ಬಿಣದ ರಾಡ್‌ಗಳಿಂದ ಬೆದರಿಸಿ, ಇಬ್ಬರನ್ನೂ ಖಾಲಿ ಸೈಟ್‌ವೊಂದಕ್ಕೆ ಕರೆದೊಯ್ದು ಮನಬಂದಂತೆ ಥಳಿಸಿದೆ. ಈ ವೇಳೆ ರಫೀಕ್ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಆಟೋರಿಕ್ಷಾ ಮೂಲಕ ಕೊಠಡಿಗೆ ಬಂದು ತಲುಪಿದ್ದಾರೆ. ನಂತರ ಮುಂಜಾನೆ 5 ಗಂಟೆ ಸುಮಾರಿಗೆ ಮತ್ತೊಬ್ಬ ಸ್ನೇಹಿತನ ಫೋನ್ ಬಳಸಿ ಪೊಲೀಸ್ ಹೆಲ್ಪ್‌ಲೈನ್ 112 ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ ಭಟ್ಕಳದಲ್ಲಿ ಮುರಿನಕಟ್ಟೆ ಧ್ವಂಸ ಬೆನ್ನಲ್ಲೇ ಹೈ ಅಲರ್ಟ್​: ಇಂದಿನಿಂದ 3 ದಿನ ಇಡೀ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ!

ಪೊಲೀಸ್ ಕಾರ್ಯಾಚರಣೆ

ಮಾಹಿತಿ ತಿಳಿಯುತ್ತಿದ್ದಂತೆ ಕಾರ್ಯಾಚರಣೆಗೆ ಇಳಿದ ಸಂಪಿಗೆಹಳ್ಳಿ ಪೊಲೀಸರು ಗಾಯಗೊಂಡಿದ್ದ ಜಾಬಿರ್‌ನನ್ನು ರಕ್ಷಿಸಿ ಯಲಹಂಕದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಲ್ಲೆಯಿಂದಾಗಿ ಜಾಬಿರ್ ಕಿಿವಿಗೆ ಬಲವಾದ ಗಾಯಗಳಾಗಿವೆ. ಸದ್ಯ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿ ಮಾಡಿದವರು ಮತ್ತು ದೂರುದಾರರಿಗೆ ಮುಂಚಿತವಾಗಿ ಪರಿಚಯ ಇರಲಿಲ್ಲ. ಆದರೆ ಮಹಿಳೆಯೊಬ್ಬರ ವಿಚಾರದಲ್ಲಿ ಇವರ ನಡುವೆ ಗಲಾಟೆಯಾಗಿದ್ದು, ಇದೇ ದ್ವೇಷದಲ್ಲಿ ಅಪಹರಣ ಮತ್ತು ದರೋಡೆ ನಡೆಸಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈಗಾಗಲೇ ಕೆಲವು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:02 pm, Mon, 25 May 26

Source link

Leave a Reply

Your email address will not be published. Required fields are marked *