ಮಳೆ ಅಬ್ಬರಕ್ಕೆ ಗುಡ್ಡ ಕುಸಿದು ದುರಂತImage Credit source: Tv9 Kannada
ಶಿವಮೊಗ್ಗ, ಆಗಸ್ಟ್ 02: ಮಲೆನಾಡು ಭಾಗದಲ್ಲಿ ಮಳೆ ಅವಾಂತರಕ್ಕೆ ಸಾಲು ಸಾಲು ಅನಾಹುತಗಳು ನಡೆಯುತ್ತಿದ್ದು, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಇಂದಿರಾ ನಗರದಲ್ಲಿ ಗುಡ್ಡ ಕುಸಿದ ಪರಿಣಾಮ ಒಂದೇ ಕುಟುಂಬದ ಮೂವರು ದುರ್ಮರಣ ಹೊಂದಿರುವ ಘಟನೆ ನಡೆದಿದೆ. ತಡರಾತ್ರಿ 2:30 ವೇಳೆಯಲ್ಲಿ ಮಳೆಯ ಅಬ್ಬರ ಹೆಚ್ಚಾಗಿರುವುದರಿಂದ ಗುಡ್ಡ ಕುಸಿದಿದೆ ಎನ್ನಲಾಗಿದ್ದು, ಗುಡ್ಡದ ಕೆಳಭಾಗದಲ್ಲಿ ಶಡ್ ನಿರ್ಮಾಣ ಮಾಡಿಕೊಂಡು ಕುಟುಂಬ ವಾಸವಿತ್ತು ಎನ್ನಲಾಗಿದೆ. ಘಟನೆಯಲ್ಲಿ ಪಕ್ಕದ ಶೆಡ್ನಲ್ಲಿದ್ದವರಿಗೂ ಗಂಭೀರ ಗಾಯಗಳಾಗಿವೆ.
ಶವಗಳನ್ನು ಹೊರ ತೆಗೆಯಲು ಹರಸಾಹಸ
ಮೃತರನ್ನು ಮಲ್ಲಿಕಾರ್ಜುನ (35), ನಾಗವೇಣಿ (28), ಸಂತೋಷ (3) ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕೊಕ್ಕರೆಗಾರು ಗ್ರಾಮದ ನಿವಾಸಿಗಳು ಎಂಬುದು ತಿಳಿದುಬಂದಿದೆ. ಮಣ್ಣಿನಡಿ ಸಿಲುಕಿ ಮೂವರೂ ಪ್ರಾಣ ಕಳೆದುಕೊಂಡಿದ್ದು, ಶವಗಳನ್ನು ಹೊರ ತೆಗೆಯಲು ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವವರನ್ನು ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಮಳೆ ಅವಾಂತರ: ಬಂಟ್ವಾಳದ ಹಲವು ಗ್ರಾಮಗಳು ಜಲಾವೃತ, ಕಬಿನಿ ನದಿ ಪಾತ್ರದಲ್ಲಿಯೂ ಪ್ರವಾಹದ ಭೀತಿ
ಕೊಡಗಿನ ಹಲವೆಡೆ ಸೇತುವೆ ಮುಳುಗಡೆ
ಕೊಡಗು ಜಿಲ್ಲೆಯಾದ್ಯಂತ ವರುಣ ಆರ್ಭಟಿಸುತ್ತಿದ್ದು, ಮಳೆ ಅಬ್ಬರಕ್ಕೆ ಹಲವೆಡೆ ಸೇತುವೆಗಳು ಮುಳುಗಡೆಯಾಗಿವೆ. ಭಾಗಮಂಡಲ ಸ್ನಾನಘಟ್ಟ, ತ್ರಿವೇಣಿ ಸಂಗಮ, ಉದ್ಯಾನವನ ಸಂಪೂರ್ಣ ಮುಳುಗಿದೆ. ಭಾಗಮಂಡಲ-ತಲಕಾವೇರಿ ರಸ್ತೆಯೂ ಜಲಾವೃತವಾಗಿರುವ ಕಾರಣ ಫ್ಲೈ ಓವರ್ ಮೂಲಕ ಜನ ಓಡಾಟ ನಡೆಸುತ್ತಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 8:04 am, Sun, 2 August 26
