ಮುಂಬೈ, ಜುಲೈ 4: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಆರೋಗ್ಯದಲ್ಲಿ ಏರುಪೇರಾಗಿದ್ದು, ಶನಿವಾರ (ಜುಲೈ 4) ಥಾಣೆಯ ಜುಪಿಟರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶುಕ್ರವಾರದಿಂದಲೇ ಅವರು ಲಘು ಜ್ವರ, ಮೈಕೈ ನೋವು ಮತ್ತು ತೀವ್ರ ಸುಸ್ತಿನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ವೈದ್ಯರ ಸಲಹೆಯ ಮೇರೆಗೆ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ನಿಯಮಿತ ಆರೋಗ್ಯ ತಪಾಸಣೆ: ಆತಂಕ ಬೇಡ ಎಂದ ವೈದ್ಯರು
ಆಸ್ಪತ್ರೆಯ ಮೂಲಗಳ ಪ್ರಕಾರ, ಏಕನಾಥ್ ಶಿಂಧೆಗೆ ಸದ್ಯ ರೂಟಿನ್ ಹೆಲ್ತ್ ಚೆಕಪ್ (ನಿಯಮಿತ ಆರೋಗ್ಯ ತಪಾಸಣೆ) ಮಾಡಲಾಗುತ್ತಿದೆ. ಅವರ ಆರೋಗ್ಯ ಸ್ಥಿರವಾಗಿದ್ದು, ಸಾರ್ವಜನಿಕರು ಹಾಗೂ ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಜ್ವರ ಮತ್ತು ಸುಸ್ತಿಗೆ ನಿಖರ ಕಾರಣ ತಿಳಿಯಲು ವೈದ್ಯರ ತಂಡವು ವಿವಿಧ ರಕ್ತ ಪರೀಕ್ಷೆಗಳನ್ನು ನಡೆಸುತ್ತಿದ್ದು, ಆರೋಗ್ಯದ ಮೇಲೆ ನಿರಂತರ ನಿಗಾ ಇರಿಸಿದೆ. ಸದ್ಯಕ್ಕೆ ಆಸ್ಪತ್ರೆಯ ಕಡೆಯಿಂದಾಗಲಿ ಅಥವಾ ಉಪಮುಖ್ಯಮಂತ್ರಿಗಳ ಕಚೇರಿಯಿಂದಾಗಲಿ ಯಾವುದೇ ಅಧಿಕೃತ ವೈದ್ಯಕೀಯ ಬುಲೆಟಿನ್ ಬಿಡುಗಡೆಯಾಗಿಲ್ಲ.
ಶೀಘ್ರದಲ್ಲೇ ಕೆಲಸಕ್ಕೆ ವಾಪಸ್
ಮಹಾರಾಷ್ಟ್ರದಲ್ಲಿ ಸದ್ಯ ಮುಂಗಾರು ಚುರುಕಾಗಿದ್ದು, ಸಾಂಕ್ರಾಮಿಕ ಜ್ವರ ಮತ್ತು ವೈರಲ್ ಇನ್ಫೆಕ್ಷನ್ ಪ್ರಕರಣಗಳು ಹೆಚ್ಚಾಗುತ್ತಿವೆ. ಶಿಂಧೆ ಅವರಿಗೂ ಇದೇ ರೀತಿಯ ಹವಾಮಾನ ಬದಲಾವಣೆಯ ಜ್ವರ ಬಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಶಿವಸೇನೆಯ ಹಿರಿಯ ನಾಯಕರು ಮತ್ತು ಸರ್ಕಾರಿ ಅಧಿಕಾರಿಗಳು ಆಸ್ಪತ್ರೆಯ ವೈದ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.
ಇದನ್ನೂ ಓದಿ: ‘ಆಪರೇಷನ್ ರಾಮ ಮಂದಿರ್’; ಬಿಜೆಪಿ ವಿರುದ್ಧ ಉದ್ಧವ್ ಠಾಕ್ರೆ ಗಂಭೀರ ಆರೋಪ
ಉಪಮುಖ್ಯಮಂತ್ರಿಗಳು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ವೈದ್ಯಕೀಯ ತಪಾಸಣೆಗಳು ಪೂರ್ಣಗೊಂಡ ತಕ್ಷಣವೇ ಡಿಸ್ಚಾರ್ಜ್ ಆಗಿ ಮರಳಿ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
