ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿImage Credit source: tv9
ಉಡುಪಿ, ಮೇ 27: ಕರ್ನಾಟಕ (Karnataka) ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ಮತ್ತೊಂದು ಹೊಸ ವಿವಾದದ ಸುಳಿಗೆ ಸಿಲುಕಿದ್ದಾರೆ. ಉಡುಪಿ ಜಿಲ್ಲಾ ಪ್ರವಾಸದ ವೇಳೆ ಅವರು ಮಾಜಿ ರೌಡಿಶೀಟರ್ ಸೋನು ಸುಧೀರ್ ಎಂಬಾತನಿಗೆ ಕಾರಿನಲ್ಲಿ ಕುಳಿತು ತಲೆ ಮುಟ್ಟಿ ಆಶೀರ್ವದಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಹಾಗೂ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಸಾಂವಿಧಾನಿಕ ಮತ್ತು ಜವಾಬ್ದಾರಿಯುತ ಹುದ್ದೆಯಲ್ಲಿರುವ ಮಹಿಳಾ ಆಯೋಗದ ಅಧ್ಯಕ್ಷರೇ ಈ ರೀತಿ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳೊಂದಿಗೆ ಕಾಣಿಸಿಕೊಳ್ಳುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.
ಮುಖ್ಯಾಂಶಗಳು
- ಉಡುಪಿ ಪ್ರವಾಸದ ವೇಳೆ ಕಾರಿನಲ್ಲಿ ಕುಳಿತೇ ಮಾಜಿ ರೌಡಿಶೀಟರ್ ಸೋನು ಸುಧೀರ್ ತಲೆ ಸವರಿ ಆಶೀರ್ವದಿಸಿದ ಡಾ. ನಾಗಲಕ್ಷ್ಮೀ ಚೌಧರಿ.
- ಎರಡು ಪ್ರಮುಖ ಕ್ರಿಮಿನಲ್ ಪ್ರಕರಣಗಳ ಆರೋಪಿಯಾಗಿರುವ ಸೋನು ಸುಧೀರ್.
- 2021ರಿಂದ 2023ರವರೆಗೆ ಕಾಪು ಠಾಣೆಯ ರೌಡಿಶೀಟರ್ ಪಟ್ಟಿಯಲ್ಲಿದ್ದ ಸೋನು ಸುಧೀರ್.
ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರಿಗೆ ಇಂತಹ ವಿವಾದಗಳು ಎದುರಾಗುತ್ತಿರುವುದು ಇದೇ ಮೊದಲೇನಲ್ಲ. ಇತ್ತೀಚೆಗಷ್ಟೇ, ಕೋಮು ಸಂಬಂಧಿತ ಪ್ರಕರಣಗಳಲ್ಲಿ ಹಾಗೂ ಹತ್ತಾರು ಕ್ರಿಮಿನಲ್ ಪ್ರಕರಣಗಳ ಆರೋಪಿಯಾಗಿರುವ ಬಲಪಂಥೀಯ ಕಾರ್ಯಕರ್ತ ಹಾಗೂ ಗೋರಕ್ಷಕ ಪುನೀತ್ ಕೆರೆಹಳ್ಳಿಗೆ ಇವರು ಇದೇ ಮಾದರಿಯಲ್ಲಿ ಶುಭ ಹಾರೈಸಿ ಆಶೀರ್ವದಿಸಿದ್ದ ವಿಡಿಯೋ ಭಾರಿ ವೈರಲ್ ಆಗಿತ್ತು. ಆ ಸಂದರ್ಭದಲ್ಲಿಯೂ ಸಾಂವಿಧಾನಿಕ ಹುದ್ದೆಯಲ್ಲಿದ್ದುಕೊಂಡು ಆರೋಪಿಗಳ ಪರ ನಿಲ್ಲುತ್ತಿದ್ದಾರೆ ಎಂಬ ಆರೋಪದಡಿ ಸಾರ್ವಜನಿಕರು ಹಾಗೂ ಸಂಘಟನೆಗಳು ಆಯೋಗದ ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು.
ವಿಡಿಯೋ ಇಲ್ಲಿ ನೋಡಿ
ಇದೀಗ, ಹಳೇ ವಿವಾದದ ಬೆಂಕಿ ಆರುವ ಮುನ್ನವೇ ಉಡುಪಿಯಲ್ಲಿ ಸರಣಿ ಸರಕಾರಿ ಮತ್ತು ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತೆರಳಿದ್ದ ಅಧ್ಯಕ್ಷೆ, ಅಲ್ಲಿ ಮತ್ತೆ ಇಂತಹದ್ದೇ ಹೆಜ್ಜೆ ಇಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ.
ಸೋನು ಸುಧೀರ್ ಎರಡು ಪ್ರಮುಖ ಕ್ರಿಮಿನಲ್ ಪ್ರಕರಣಗಳಲ್ಲಿ ಶಾಮೀಲಾಗಿದ್ದು, ಉಡುಪಿ ಜಿಲ್ಲೆಯ ಕಾಪು ಪೊಲೀಸ್ ಠಾಣೆಯ ರೌಡಿಶೀಟರ್ ಲಿಸ್ಟ್ನಲ್ಲಿದ್ದ ವ್ಯಕ್ತಿ. ಮಹಿಳೆಯರ ರಕ್ಷಣೆ ಮತ್ತು ಹಕ್ಕುಗಳಿಗಾಗಿ ಶ್ರಮಿಸಬೇಕಾದ ಆಯೋಗದ ಮುಖ್ಯಸ್ಥರೇ ರೌಡಿಶೀಟರ್ಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವಂತೆ ಬಿಂಬಿತವಾಗುತ್ತಿರುವುದು ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
