ಮಹಿಳೆಯ ಕುತ್ತಿಗೆ ಮುಖ, ಕೈ-ಕಾಲು ಕಚ್ಚಿ ಹಾಕಿದ ಶ್ವಾನ: ಈ ಭೀಕರ ದಾಳಿಗೆ ಬೆಚ್ಚಿಬಿದ್ದ ಬೆಂಗಳೂರು – Kannada News | HSR Layout Dog Attack: Bengaluru Pet Owners Must Follow Muzzle and Leash Rules

ಬೆಂಗಳೂರು, ಜ.1: ಬೆಂಗಳೂರಿನಲ್ಲಿ(Bengaluru dog attack) ಸಾಕು ನಾಯಿಗಳ ದಾಳಿ ಮಾಡುವ ಘಟನೆಗಳು ಮತ್ತೆ ಮುನ್ನೆಲೆಗೆ ಬಂದಿದ್ದು, ಬೆಳ್ಳಂಬೆಳಿಗ್ಗೆ ವಾಯುವಿಹಾರಕ್ಕೆ ತೆರಳಿದ್ದ ಮಹಿಳೆಯೊಬ್ಬರ ಮೇಲೆ ಸಾಕು ನಾಯಿಯೊಂದು ಭೀಕರವಾಗಿ ದಾಳಿ ನಡೆಸಿದ ಘಟನೆ ಇಡೀ ನಗರವನ್ನು ಬೆಚ್ಚಿಬೀಳಿಸಿದೆ. ಜನವರಿ 26 ರಂದು ಬೆಳಿಗ್ಗೆ 6.54 ರ ಸುಮಾರಿಗೆ ಎಚ್‌ಎಸ್‌ಆರ್ ಲೇಔಟ್‌ನ ಟೀಚರ್ಸ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಮಹಿಳೆ ವಾಕಿಂಗ್‌ಗೆ ಹೋಗಿದ್ದಾಗ ಸ್ಥಳೀಯ ನಿವಾಸಿ ಅಮರೇಶ್ ರೆಡ್ಡಿ ಎಂಬವರ ನಾಯಿ ಇದ್ದಕ್ಕಿದ್ದಂತೆ ಆಕೆಯ ಮೇಲೆ ದಾಳಿ ಮಾಡಿದೆ. ನಾಯಿ ಮೊದಲು ಮಹಿಳೆಯ ಕುತ್ತಿಗೆಗೆ ಕಚ್ಚಿ, ನಂತರ ಆಕೆಯ ಮುಖ, ಕೈಗಳು ಮತ್ತು ಕಾಲುಗಳ ಮೇಲೆ ದಾಳಿ ಮಾಡಿದೆ ಎಂದು ಹೇಳಲಾಗಿದೆ. ಈ ಬಗ್ಗೆ ವಿಡಿಯೋವೊಂದು ವೈರಲ್​​ ಆಗಿದೆ. ಮುಂಜಾನೆ ಸುಮಾರು 6:30 ರಿಂದ 7:00 ಗಂಟೆಯ ಸುಮಾರಿಗೆ ಮಹಿಳೆ ವಾಕಿಂಗ್ ಮಾಡುತ್ತಿದ್ದಾಗ ಈ ದಾಳಿ ನಡೆದಿದೆ.

ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯ ಮೇಲೆ ನಾಯಿಯು ಏಕಾಏಕಿ ಹಾರಿ ಮುಖ ಮತ್ತು ಕುತ್ತಿಗೆಯ ಭಾಗವನ್ನು ಗುರಿಯಾಗಿಸಿಕೊಂಡು ಕಚ್ಚಿದೆ. ಮಹಿಳೆ ಕೆಳಗೆ ಬಿದ್ದರೂ ನಾಯಿ ಬಿಡದೆ ದಾಳಿ ನಡೆಸಿದೆ. ಈ ದಾಳಿಯಿಂದ ಮಹಿಳೆಯ ಮುಖಕ್ಕೆ ಗಂಭೀರವಾದ ಗಾಯಗಳಾಗಿದ್ದು, ವೈದ್ಯರು ಮುಖದ ಮೇಲೆ ಬರೋಬ್ಬರಿ 50 ಹೊಲಿಗೆಗಳನ್ನು ಹಾಕಿದ್ದಾರೆ. ಇದರ ಜತೆಗೆ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿಯ ಅಗತ್ಯ ಇದೆ ಎಂದು ವೈದ್ಯರು ಹೇಳಿದ್ದಾರೆ. ಘಟನೆಯ ಭೀಕರ ದೃಶ್ಯಗಳು ಸಮೀಪದ ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವಿಡಿಯೋದಲ್ಲಿ ಮಹಿಳೆ ಸಹಾಯಕ್ಕಾಗಿ ಕಿರುಚುತ್ತಿರುವುದು ಮತ್ತು ನಾಯಿಯನ್ನು ಬಿಡಿಸಲು ಸ್ಥಳೀಯರು ಹರಸಾಹಸ ಪಡುತ್ತಿರುವುದು ಕಂಡುಬಂದಿದೆ.

ಇಲ್ಲಿದೆ ನೋಡಿ ವಿಡಿಯೋ:

ನಾಯಿಯನ್ನು ಸರಿಯಾಗಿ ನಿಯಂತ್ರಿಸದ ಮತ್ತು ಸಾರ್ವಜನಿಕ ಸ್ಥಳದಲ್ಲಿ ಮುನ್ನೆಚ್ಚರಿಕೆ ವಹಿಸದ ಕಾರಣ ನಾಯಿ ಮಾಲೀಕನ ವಿರುದ್ಧ ನಿರ್ಲಕ್ಷ್ಯದ ಪ್ರಕರಣ ದಾಖಲಿಸಲಾಗಿದೆ. ಬಿಬಿಎಂಪಿ ಪಶುಪಾಲನಾ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ ನಾಯಿಯನ್ನು ವಶಕ್ಕೆ ಪಡೆದಿದ್ದು, ಅದಕ್ಕೆ ರೇಬಿಸ್ ಅಥವಾ ಇನ್ಯಾವುದೇ ಕಾಯಿಲೆ ಇದೆಯೇ ಎಂಬ ಬಗ್ಗೆ ಪರೀಕ್ಷೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಸಾಕು ನಾಯಿಗಳ ಮಾಲೀಕರು ಮಾಸ್ಕ್ (Muzzle) ಮತ್ತು ಲೀಶ್ (Leash) ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಈ ಪ್ರಕರಣದಲ್ಲಿ ಆ ನಿಯಮಗಳ ಉಲ್ಲಂಘನೆಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಇಂತಹ ಘಟನೆಗಳು ಹೆಚ್ಚುತ್ತಿವೆ. ಸಾರ್ವಜನಿಕ ಸ್ಥಳಗಳಲ್ಲಿ ಸಾಕು ನಾಯಿಗಳನ್ನು ನೋಡಿದಾಗ ಅಥವಾ ಅಂತಹ ಪರಿಸ್ಥಿತಿ ಎದುರಾದಾಗ ಜಾಗರೂಕರಾಗಿರುವುದು ಅವಶ್ಯಕ. ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: ಜಪಾನ್ ರಾಯಭಾರಿಗೂ ಇಷ್ಟ ಬೆಂಗಳೂರಿನ ಪಿಜ್ಜಾ! ಓನೋ ಕೈಇಚಿ ಪೋಸ್ಟ್​ಗೆ ತೇಜಸ್ವಿ ಸೂರ್ಯ ರಿಯಾಕ್ಷನ್

ಪ್ರಾಣಿಗಳ ಬಗ್ಗೆ ನಿರ್ಲಕ್ಷ್ಯದ ನಡವಳಿಕೆ. ಸಾಕುಪ್ರಾಣಿಯಿಂದ ಬೇರೆಯವರಿಗೆ ಅಪಾಯವಾಗಬಹುದು ಎಂದು ತಿಳಿದಿದ್ದರೂ ಸರಿಯಾದ ಮುನ್ನೆಚ್ಚರಿಕೆ ವಹಿಸದಿದ್ದರೆ, ಮಾಲೀಕನಿಗೆ 6 ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 5,000 ರೂ. ವರೆಗೆ ದಂಡ, ಎರಡನ್ನೂ ವಿಧಿಸಬಹುದು. ನಿರ್ಲಕ್ಷ್ಯದ ಮೂಲಕ ಇತರರ ಜೀವಕ್ಕೆ ಅಪಾಯ ತರುವುದು ಅಥವಾ ಗಂಭೀರ ಗಾಯಗೊಳಿಸುವುದು. ಇಲ್ಲಿ ಮಹಿಳೆಯ ಮುಖಕ್ಕೆ 50 ಹೊಲಿಗೆ ಬಿದ್ದಿರುವುದರಿಂದ ಇದು ‘ಗಂಭೀರ ಗಾಯ’ದ ವ್ಯಾಪ್ತಿಗೆ ಬರುತ್ತದೆ. ಇದರ ಅಡಿಯಲ್ಲಿ ಮಾಲೀಕನಿಗೆ 2 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶವಿದೆ. ಸಾರ್ವಜನಿಕ ಸ್ಥಳದಲ್ಲಿ ನಾಯಿಯಿಂದ ತೊಂದರೆಯಾದರೆ ಅಥವಾ ಪರವಾನಗಿ ಇಲ್ಲದೆ ನಾಯಿ ಸಾಕಿದ್ದರೆ 1,000 ರೂ. ರಿಂದ 5,000 ರೂ. ವರೆಗೆ ಆರಂಭಿಕ ದಂಡ ವಿಧಿಸಲಾಗುತ್ತದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *