Headlines

ಮಾಜಿ ಸೈನಿಕನ ಮರ್ಡರ್ ಮಿಸ್ಟ್ರಿ: FSL​​ ವರದಿಯನ್ನೇ ತಿರುಚಿದ್ರು, ಸುಪನಾತಿ ಸುಮಾಳ ಅಸಲಿಯತ್ತು ಬಯಲು – Kannada News | Belagavi: Wife, Lover Kill Ex Serviceman for 2 Cr Insurance; FSL Bribed

ಬೆಳಗಾವಿ, ಜೂನ್​​ 15: ನಗರದಲ್ಲಿ ಕ್ರೈಂ, ತ್ರಿಲ್ಲರ್ ವೆಬ್ ಸೀರಿಸ್ ಮೀರಿಸುವಂತಹ ಭೀಕರ ಕೊಲೆಯೊಂದು (kill) ನಡೆದಿದೆ. ಇಲ್ಲಿ ಅಧಿಕಾರಿಗಳೇ ಎಫ್ಎಸ್ಎಲ್ ವರದಿಯನ್ನ ತಿರುಚಿ ಕೇಸ್ ಮುಚ್ಚಿ ಹಾಕುವ ಯತ್ನ ನಡೆಸಿದ್ದು, ತನಿಖೆಯಲ್ಲಿ ಬಯಲಾಗಿದೆ. ಅಷ್ಟಕ್ಕೂ 2 ಕೋಟಿ ರೂ ವಿಮೆ ಹಣಕ್ಕಾಗಿ ಪತಿಗೆ ಚಟ್ಟ ಕಟ್ಟಿದ ಪತ್ನಿ (Wife) ಹಾಗೂ ಆಕೆಯ ಪ್ರಿಯಕರ ಮಾಡಿದ ಕತರ್ನಾಕ್ ಐಡಿಯಾಗಳು ಎಂತಹದ್ದು? ಇರದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ, ಹಣಕ್ಕಾಗಿ ಹೇಗೆಲ್ಲಾ ಬಳಕೆ ಮಾಡಿಕೊಂಡರು ಎಂಬುವುದನ್ನು ತಿಳಿದರೆ ನಿಜಕ್ಕೂ ಶಾಕ್​ ಆಗುತ್ತೀರಾ.

ಮುಖ್ಯಾಂಶಗಳು

  • ವಿಮೆ ಹಣಕ್ಕಾಗಿ ಪತ್ನಿ-ಪ್ರಿಯಕರನ ಕರಾಳ ಸಂಚು
  • ಆಸ್ಪತ್ರೆಯಲ್ಲೇ ಪತಿಗೆ ವಿಷಹಾಕಿದ ಪತ್ನಿ
  • ಒಟ್ಟು 80 ಜನರ ಬಂಧನ

2 ಕೋಟಿ ರೂ ವಿಮೆ ಹಣಕ್ಕಾಗಿ ಪ್ರಿಯಕರನೊಂದಿಗೆ ಪತಿಗೆ ಪತ್ನಿ ಚಟ್ಟ ಕಟ್ಟಿದ ಪ್ರಕರಣ ಸದ್ಯ ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸಿದೆ. 35 ವರ್ಷದ ಸುಮಾ ಪತಿ ಕೊಲೆ ಪ್ರಕರಣದಲ್ಲಿ ಜೈಲು ಪಾಲು ಆಗಿದ್ದಾಳೆ. ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದ ನಿವಾಸಿಯಾಗಿರುವ ಈಕೆ 20 ವರ್ಷಗಳ ಹಿಂದೆ ಸಂದೀಪ ಮಂಜರಗಿ ಜೊತೆಗೆ ಮದುವೆಯಾಗಿತ್ತು. ಪತಿ 17 ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಮೂರು ವರ್ಷದ ಹಿಂದೆ ನಿವೃತ್ತಿಯಾಗಿ ಊರಿಗೆ ವಾಪಸ್ ಬಂದಿದ್ದರು. ಹೀಗೆ ಬಂದ ವ್ಯಕ್ತಿ ಅಲ್ಲಿ ಇಲ್ಲಿ ಓಡಾಡಿಕೊಂಡು ಇದ್ದ, ಚೆನ್ನಾಗಿ ಕುಡಿಯೋದು, ಹೋಟೆಲ್ ಸೇರಿದಂತೆ ಅಲ್ಲಿ ಇಲ್ಲಿ ತಿಂದು ಜಾಲಿಯಾಗಿದ್ದ.

ಪತಿ ಸ್ನೇಹಿತನೊಂದಿಗೆ ಪತ್ನಿ ಅನೈತಿಕ ಸಂಬಂಧ: ಕೊಲೆಗೆ ಪ್ಲ್ಯಾನ್​​

ಇದೇ ಹೊತ್ತಲ್ಲಿ ಘೋಡಗೇರಿಯಲ್ಲಿ ಎಗ್ ರೈಸ್ ಅಂಗಡಿ ನಡೆಸುತ್ತಿದ್ದ ಪುಂಡಲೀಕ ಡೊಂಗರ್ ಪರಿಚಯ ಆಗಿದ್ದ. ಈತನ ಅಂಗಡಿಗೆ ಹೋಗುತ್ತಿದ್ದ ಸಂದೀಪ್ ಅಲ್ಲಿ ಖಾಲಿ ಕುಡುವ ಬದಲು ಇಬ್ಬರು ಸೇರಿಕೊಂಡು ಹಿಡಕಲ್ ಡ್ಯಾಂ ಬಳಿಯಲ್ಲಿ ಹೋಟೆಲವೊಂದನ್ನು ಇಟ್ಟುಕೊಳ್ಳುವ ತೀರ್ಮಾನ ಮಾಡಿದ್ದರು. ಹೀಗೆ ಹೋಟೆಲ್ ಆರಂಭವಾದ ಕೆಲ ದಿನಗಳಲ್ಲಿಯೇ ನಿವೃತ್ತ ಸೈನಿಕ ಸಂದೀಪ ಪತ್ನಿ ಸುಮಾ ಹಾಗೂ ಪುಂಡಲೀಕ ನಡುವೆ ಸ್ನೇಹ ಬೆಳೆದಿತ್ತು. ಈ ಸ್ನೇಹ ಕೆಲದಿನಗಳಲ್ಲಿಯೇ ಅನೈತಿಕ ಸಂಬಂಧವಾಗಿ ಮಾರ್ಪಾಡಾಗಿತ್ತು. ಇದಕ್ಕೆ ಅಡ್ಡಿಯಾಗಿದ್ದ ಪತಿ ಸಂದೀಪ್ ಮುಗಿಸಲು ಸುಮಾ ಹಾಗೂ ಪ್ರಿಯಕರ ಪುಂಡಲೀಕ ಇಬ್ಬರು ಸೇರಿ ತೀರ್ಮಾನಿಸಿದ್ದಾರೆ. ಅದಕ್ಕಾಗಿ ಅವಕಾಶಕ್ಕಾಗಿ ಕಾಯುತ್ತಿದ್ದರು. ಆತ ಸತ್ತರೆ ಎರಡು ಕೋಟಿ ರೂ ವಿಮೆ ಹಣ ಬರುತ್ತೆ, ಅದನ್ನ ತೆಗೆದುಕೊಂಡು ಆರಾಮವಾಗಿ ಇರಬಹುದು ಎಂದು ಪ್ಲ್ಯಾನ್​​ ಮಾಡಿದ್ದರು.

ಇದನ್ನೂ ಓದಿ: ಮಾಜಿ ಸೈನಿಕನ ಸಾವಿಗೆ ಟ್ವಿಸ್ಟ್​: 2 ಕೋಟಿ ಹಣಕ್ಕಾಗಿ ಚಟ್ಟ, FSL ವರದಿಯನ್ನೇ ಬದಲಿಸಿದ್ದ ಖತರ್ನಾಕ್ ಗ್ಯಾಂಗ್

ಮಾರ್ಚ್ 13ರಂದು ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂದೀಪ್​​ ಮಂಜರಗಿಗೆ ರಸ್ತೆ ಅಪಘಾತವಾಗಿತ್ತು. ಅಪಘಾತವಾದ ಬಳಿಕ ಸ್ಥಳೀಯರು ಹುಕ್ಕೇರಿಯಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಸ್ಥಳಕ್ಕೆ ಹೋದ ಪತ್ನಿ ಸುಮಾ ತನ್ನ ಗಂಡನಿಗೆ ಹೆಚ್ಚಿನ ಚಿಕಿತ್ಸೆ ಬೇಕು ಅಂತಾ ಹುಕ್ಕೇರಿ ಅಲ್ಲಿಂದ ಘಟಪ್ರಭಾ ಜೆಜೆ ಕೋ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಿಸುತ್ತಾಳೆ. ಅಲ್ಲಿಯೇ ಪತಿಗೆ ಚಟ್ಟ ಕಟ್ಟಲು ಮಾಸ್ಟರ್ ಪ್ಲ್ಯಾನ್ ಮಾಡುತ್ತಾಳೆ. ಸಣ್ಣಪುಟ್ಟ ಗಾಯಗೊಂಡಿದ್ದ ವ್ಯಕ್ತಿಯನ್ನ ಸ್ಪೇಷಲ್ ವಾರ್ಡ್​ಗೆ ಶಿಫ್ಟ್ ಮಾಡಲಾಗುತ್ತದೆ. ಬಳಿಕ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ದ ಪುಂಡಲೀಕನ ಸಂಬಂಧಿ ರಾಹುಲ್ ಜೋಗಿ ಎಂಬಾತನ ಜೊತೆಗೆ ಚರ್ಚೆ ನಡೆಸುತ್ತಾರೆ. ಈ ವೇಳೆ ರಾಹುಲ್ ಸಲೈನ್‌ ಬಾಟಲ್​​ನಲ್ಲಿ ವಿಷ ಹಾಕಿ ಅಂತಾ ಹೇಳುತ್ತಾನೆ. ಅದರಂತೆ ಮಾರ್ಚ್ 14ರಂದು ಒಂದು ಬಾರಿ ತಿಗಣೆ ಎಣ್ಣೆ ಹಾಗೂ ಇಲಿ ಪಾಷಾಣ ಹಾಕುತ್ತಾರೆ ಆದರೆ ಅದು ವರ್ಕೌಟ್ ಆಗಲ್ಲ.

ತಿಗಣೆ ಔಷಧ ಹಾಕಿ ಕೊಲೆ

ಮಾರನೇ ದಿನ ಹೊರಗಿಂದ ಸಲೈನ್‌ ಬಾಟಲ್ ತಂದು ಅದರಲ್ಲಿ ಈ ಬಾರಿ ಬರೀ ತಿಗಣೆ ಔಷಧ ಹಾಕಿ ಕೊಲೆ ಮಾಡುತ್ತಾರೆ. ಆತ ಸಾವನ್ನಪ್ಪಿದ ಬಳಿಕ ಹಾರ್ಟ್ ಅಟ್ಯಾಕ್​​ ಆಗಿ ಸಾವನ್ನಪ್ಪಿರುವಂತೆ ಬಿಂಬಿಸುತ್ತಾರೆ. ಇದೇ ವೇಳೆ ಠಾಣೆಗೆ ಬಂದಿದ್ದ ಯಮಕನಮರಡಿ ಪೊಲೀಸರಿಗೂ ಸುಳ್ಳು ಹೇಳುತ್ತಾರೆ. ಆದರೆ ಅಂದು ಪೊಲೀಸರು ಬಿಮ್ಸ್ ಆಸ್ಪತ್ರೆಗೆ ಈತನ ಶವವನ್ನ ಮರಣೋತ್ತರ ಪರೀಕ್ಷೆ ಮಾಡುತ್ತಾರೆ. ಇನ್ನೇನು ಮರಣೋತ್ತರ ಪರೀಕ್ಷೆ ವರದಿ ಹಾಗೂ ಎಫ್​ಎಸ್​ಎಲ್​ ವರದಿ ಕೈ ಸೇರಬೇಕುನ್ನುಷ್ಟರಲ್ಲಿ ಆರೋಪಿ ಸುಮಾಗೆ ಭಯ ಶುರುವಾಗುತ್ತದೆ.

ತಾನು ಹಾಗೂ ಪುಂಡಲೀಕ ಸೇರಿ ಪತಿಯನ್ನು ಕೊಲೆ ಮಾಡಿರುವ ಬಗ್ಗೆ ತಾಯಿ ಬಳಿ ಎಲ್ಲಾ ವಿಚಾರವನ್ನು ಹೇಳಿದ್ದಾಳೆ. ತಾಯಿಗೆ ಪರಿಚಯವಿದ್ದ ಆರ್​ಎಂಪಿ ವೈದ್ಯ ಬಸವರಾಜ್ ಭಸ್ಮೆ ಎಂಬ ವ್ಯಕ್ತಿಯ ಮೂಲಕ ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಎಫ್​ಡಿಎ ಅಶೋಕ್​​ ಗುಜನಾಳ್ ಸಂಪರ್ಕ ಮಾಡುತ್ತಾರೆ. ಅಲ್ಲಿಂದ ಎಫ್​ಎಸ್​ಎಲ್​ ಕಚೇರಿಯ ಸಿಫಾಯಿ ಅಪ್ಪಸಾಬ್ ನಾಯಿಕೋಡಿ ಪರಿಚಯ ಮಾಡಿಕೊಂಡು ಬಳಿಕ ಲ್ಯಾಬ್ ಸಹಾಯಕ ಚನಯ್ಯ, ಬಳಿಕ ಸೀನಿಯರ್ ಆಫೀಸರ್ ನಾಗರಾಜ್​ಗೆ ಹಣದ ಆಮಿಷವೊಡ್ಡಿ ಕೊಲೆಯನ್ನ ಹೃದಯಾಘಾತ ಎಂದು ತಿದ್ದುಪಡಿ ಮಾಡಲು ಹೇಳಿದ್ದಾರೆ. ಇದಕ್ಕಾಗಿ ಮೂರು ಲಕ್ಷಕ್ಕಿಂತ ಅಧಿಕ ಹಣ ಕೊಡುವುದಾಗಿ ಹೇಳಿದ್ದಾರೆ. ಹಣದ ಆಸೆಗೆ ಬಿದ್ದ ಎಫ್ಎಸ್ಎಲ್ ಅಧಿಕಾರಿಗಳು ಕೊಲೆಯನ್ನ ಹಾರ್ಟ್ ಅಟ್ಯಾಕ್ ಎಂದು ವರದಿ ನೀಡುತ್ತಾರೆ. ಆಗ ಪೊಲೀಸರು ಕೂಡ ಸರಿ ಇದೆ ಎಂದುಕೊಂಡು ಶವವನ್ನ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದು, ಬಳಿಕ ಅಂತ್ಯಸಂಸ್ಕಾರ ಮಾಡುತ್ತಾರೆ.

ಸ್ಟೇಟಸ್​ನಿಂದ ಕೊಲೆ ರಹಸ್ಯ ಬಯಲು

ಕೊಲೆ ಕೇಸ್ ಮುಚ್ಚಿ ಹೋದ ಬಳಿಕ 2 ಕೋಟಿ ರೂ ವಿಮೆ ಹಣ ಹಂಚಿಕೆ ಸಂಬಂಧ ಸುಮಾ ಹಾಗೂ ಪುಂಡಲೀಕ ನಡುವೆ ಗಲಾಟೆ ಶುರುವಾಗಿದೆ. ಇಬ್ಬರ ನಡುವೆ ಪರಸ್ಪರ ವೈಮನಸ್ಸು ಉಂಟಾಗಿದೆ. ಈ ವೇಳೆ ಸಂದೀಪ್​ ಸಾವನ್ನಪ್ಪಿದ್ದು, ಹಾರ್ಟ್​ ಅಟ್ಯಾಕ್​ನಿಂದ ಅಲ್ಲಾ, ಕೊಲೆ ಅಂತಾ ಹೇಳಿ ಸ್ಟೇಟಸ್ ಹಾಕುತ್ತಾನೆ. ಇದನ್ನ ನೋಡಿದ ಪೊಲೀಸರು ಕೂಡಲೇ ಆತನನ್ನ ಕರೆದು ವಿಚಾರಣೆ ಮಾಡುತ್ತಾರೆ. ಈ ವೇಳೆ ಕೊಲೆ ರಹಸ್ಯ ಬಾಯಿ ಬಿಟ್ಟಿದ್ದಾನೆ.

80 ಜನರ ಬಂಧನ

ಆಗ ಎಫ್ಎಸ್ಎಲ್​ ವರದಿ ಪಡೆದು ಬೆಂಗಳೂರಿನ ಲ್ಯಾಬ್​​ಗೆ ಪೊಲೀಸರು ಕಳುಹಿಸಿದ್ದಾರೆ. ಅಲ್ಲಿ ವಿಷದಿಂದ ಆತ ಸಾವನ್ನಪ್ಪಿರುವುದಾಗಿ ವರದಿ ಬರುತ್ತೆ. ಇದರ ಆಧಾರದ ಮೇಲೆ ತನಿಖೆ ಶುರು ಮಾಡಿದ ಪೊಲೀಸರು ಪತ್ನಿ ಸುಮಾ, ಪ್ರಿಯಕರ ಪುಂಡಲೀಕ, ವರದಿ ತಿರುಚಿದ ಎಫ್ಎಸ್ಎಲ್ ಸೈಂಟಿಫಿಕ್ ಆಫೀಸರ್ ನಾಗರಾಜ್ ಸೇರಿ 80 ಜನರನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಒಟ್ಟಿನಲ್ಲಿ ಕೇಸ್​ನಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ಇದ್ದು ತನಿಖೆ ನಡೆಯುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *