ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಮತ್ತು ನಟ ಪವನ್ ಕಲ್ಯಾಣ್ (Pawan Kalyan)ಸಿನಿಮಾ ಶೂಟಿಂಗ್ ವೇಳೆ ಸಾಕಷ್ಟು ಗಾಯಮಾಡಿಕೊಂಡಿದ್ದರು. ಆದರೆ, ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈಗ ಅದಕ್ಕೆ ಅವರು ಸಮಯ ಮಾಡಿಕೊಂಡಿದ್ದಾರೆ. ಮುಂಬೈನಲ್ಲಿ ಇಂದು (ಜುಲೈ 11) ಬೆಳಿಗ್ಗೆ ಶಸ್ತ್ರಚಿಕಿತ್ಸೆ ನಡೆದಿದೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎನ್ನಲಾಗಿದೆ. ಇದರಿಂದ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಮೂರೂವರೆ ಗಂಟೆ ನಡೆದ ಸರ್ಜರಿ:
ಎರಡೂ ಹೆಗಲುಗಳಿಗೆ ಒಂದೇ ಬಾರಿಗೆ ಸರ್ಜರಿ ಮಾಡಿದರೆ ತಡೆಯಲಾಗದ ನೋವು ಉಂಟಾಗುತ್ತದೆ ಎಂದು ವೈದ್ಯರು ವಿವರಿಸಿದ್ದರು. ಆದ್ದರಿಂದ ಇಂದು ಕೇವಲ ಬಲಗೈ ಹೆಗಲಿನ ಸ್ನಾಯುವಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಶುಕ್ರವಾರದಂದು ಅವರಿಗೆ ಕೆಲವು ಪ್ರಾಥಮಿಕ ವೈದ್ಯಕೀಯ ಪರೀಕ್ಷೆಗಳನ್ನು ಮಾಡಲಾಗಿತ್ತು. ಈ ಸರ್ಜರಿಯು ಒಟ್ಟು ಮೂರೂವರೆ ಗಂಟೆಗಳ ಕಾಲ ನಡೆದಿದೆ. ಮತ್ತೊಂದು ಹೆಗಲಿಗೆ ಎರಡು ತಿಂಗಳ ನಂತರ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ವರದಿ ಆಗಿದೆ. ಆ ಬಳಿಕ ಅವರು ಸಿನಿಮಾ ಕೆಲಸಕ್ಕೆ ಕಂಬ್ಯಾಕ್ ಮಾಡುವ ಸಾಧ್ಯತೆ ಇದೆ.
ಒಂದು ದಶಕದಿಂದ ನೋವು ತಡೆದಿದ್ದ ನಟ:
ಪವನ್ ಕಲ್ಯಾಣ್ ಅವರಿಗೆ 2016 ರಲ್ಲಿ ಮೊದಲ ಬಾರಿಗೆ ಹೆಗಲಿಗೆ ಗಾಯವಾಗಿತ್ತು. ಆಗ ವೈದ್ಯರು ಅವರಿಗೆ ಸೂಕ್ತ ವಿಶ್ರಾಂತಿ ಪಡೆಯಲು ಹೇಳಿದ್ದರು. ಆದರೆ ಅವರು ವಿಶ್ರಾಂತಿ ಪಡೆಯದೇ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿದ್ದರು. 2018ರ ಜನಸೇನಾ ಪಕ್ಷದ ಯಾತ್ರೆಯ ಸಮಯದಲ್ಲಿ ಅಭಿಮಾನಿಗಳು ಪ್ರೀತಿಯಿಂದ ಅವರ ಕೈಗಳನ್ನು ಜೋರಾಗಿ ಜಗ್ಗುತ್ತಿದ್ದರು. ಇದರಿಂದ ಅವರಿಗೆ ತೀವ್ರ ನೋವು ಉಂಟಾಗುತ್ತಿತ್ತು. ಆದರೂ ಅವರು ಅದನ್ನು ಸಹಿಸಿಕೊಂಡರು.
ಚುನಾವಣಾ ಪ್ರಚಾರದಲ್ಲಿ ಹೆಚ್ಚಾದ ಗಾಯ:
2019ರ ಚುನಾವಣೆಯ ನಂತರ ಅವರು ರಾಯಲಸೀಮಾ ಪ್ರವಾಸ ಮಾಡಿದ್ದರು. ಅಲ್ಲಿನ ಮದನಪಲ್ಲಿಯಲ್ಲಿ ಟೊಮೆಟೊ ಬೆಳೆಗಾರರ ಕಷ್ಟಗಳನ್ನು ಕೇಳಲು ಅವರು ಹೋಗಿದ್ದರು. ಆಗ ಅಭಿಮಾನಿಗಳು ಮತ್ತು ಕಾರ್ಯಕರ್ತರು ಅವರನ್ನು ತಬ್ಬಿಕೊಳ್ಳಲು ಮುಗಿಬಿದ್ದರು. ಇದರಿಂದ ಅವರ ಹೆಗಲಿನ ಗಾಯ ಮತ್ತಷ್ಟು ಹೆಚ್ಚಾಯಿತು. 2024ರ ಸಾರ್ವತ್ರಿಕ ಚುನಾವಣೆಯ ಪ್ರಚಾರದ ಸಮಯದಲ್ಲೂ ಇದು ಮುಂದುವರೆಯಿತು.
ಇದನ್ನೂ ಓದಿ: ಹಿಂದಿಯನ್ನು ರಾಜ ಭಾಷೆ ಎಂದು ಕರೆದ ಪವನ್ ಕಲ್ಯಾಣ್; ಕೇಳಿ ಬಂತು ಟೀಕೆ
ಕಳೆದ ಏಪ್ರಿಲ್ ತಿಂಗಳಿನಲ್ಲಿ ಪವನ್ ಕಲ್ಯಾಣ್ ಅವರಿಗೆ ಮೂಗಿನ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆ ಸಮಯದಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ಎರಡೂ ಹೆಗಲುಗಳ ಸ್ನಾಯುಗಳು ತೀವ್ರವಾಗಿ ಗಾಯಗೊಂಡಿದ್ದು ಪತ್ತೆಯಾಯಿತು. ಇಷ್ಟು ದೊಡ್ಡ ಗಾಯಗಳನ್ನು ಅವರು ಹೇಗೆ ಸಹಿಸಿಕೊಂಡಿದ್ದರು ಎಂದು ವೈದ್ಯರೇ ಆಶ್ಚರ್ಯ ಪಟ್ಟಿದ್ದರು. ತಕ್ಷಣವೇ ಸರ್ಜರಿ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ್ದರು. ಸದ್ಯ ಪವನ್ ಕಲ್ಯಾಣ್ ಅವರ ಬಲ ಹೆಗಲಿನ ಸರ್ಜರಿ ಯಶಸ್ವಿಯಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.