ಮುಂಬೈನಲ್ಲಿ ವರುಣನ ಅಬ್ಬರ: ಮಹುಮಹಡಿ ಕಟ್ಟಡ ಕುಸಿದು ಆರು ಮಂದಿ ಸಾವು, ಶಾಲಾ-ಕಾಲೇಜುಗಳಿಗೆ ರಜೆ, ರೈಲು ಸೇವೆ ಸ್ಥಗಿತ – Kannada News | Mumbai Rains Fury: Building Collapse Kills 6, Schools Shut, Transport Halted

ಮುಂಬೈ, ಜುಲೈ 06: ವಾಣಿಜ್ಯ ನಗರಿ ಮುಂಬೈನಲ್ಲಿ ಭಾನುವಾರ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆ(Rain)ಗೆ ಇಡೀ ಜನಜೀವನ ತತ್ತರಗೊಂಡಿದೆ. ಮಂಖುರ್ಡ್ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ನಾಲ್ಕು ಅಂತಸ್ತಿನ ಕಟ್ಟಡವೊಂದರ ಭಾಗ ಕುಸಿದು ಬಿದ್ದು ಆರು ಜನರು ಸಾವನ್ನಪ್ಪಿದ್ದಾರೆ. ನಗರದಾದ್ಯಂತ ರಸ್ತೆಗಳು ಜಲಾವೃತಗೊಂಡಿದ್ದು, ಮರಗಳು ಉರುಳಿಬಿದ್ದು ಅಪಾರ ಹಾನಿ ಸಂಭವಿಸಿದೆ. ಹವಾಮಾನ ಇಲಾಖೆ ತೀವ್ರ ಮಳೆಯ ಮುನ್ನೆಚ್ಚರಿಕೆ ನೀಡಿರುವುದರಿಂದ ಮುಂಬೈ, ಥಾಣೆ, ಪಾಲ್ಘಢ ಮತ್ತು ಪುಣೆ ಜಿಲ್ಲೆಗಳಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಕಟ್ಟಡ ಕುಸಿತಕ್ಕೆ ಆರು ಬಲಿ
ಭಾನುವಾರ ರಾತ್ರಿ 8.30 ರ ಸುಮಾರಿಗೆ ಮಂಖುರ್ಡ್‌ನ ಜನತಾ ನಗರದಲ್ಲಿರುವ ನಾಲ್ಕು ಅಂತಸ್ತಿನ ಚಾಲ್ ಕಟ್ಟಡದ ಒಂದು ಭಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಪರಿಣಾಮವಾಗಿ ಹಲವು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡರು. ಮುಂಬೈ ಅಗ್ನಿಶಾಮಕ ದಳ (MFB), ಮುಂಬೈ ಪೊಲೀಸ್ ಮತ್ತು ಬಿಎಂಸಿ (BMC) ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ ಭಾರಿ ರಕ್ಷಣಾ ಕಾರ್ಯಾಚರಣೆ ನಡೆಸಿದರಾದರೂ, ಆರು ಜನರು ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ.

ಉರುಳಿಬಿದ್ದ ಮರಗಳು, ವಿಮಾನ ಸೇವೆಗೂ ಅಡ್ಡಿ
ಮುಂಬೈನಾದ್ಯಂತ ಹಲವೆಡೆ ಮರಗಳು ಬುಡಸಮೇತ ಉರುಳಿಬಿದ್ದಿವೆ. ಕುರ್ಲಾ ಪ್ರದೇಶದಲ್ಲಿ ಅಂಗಡಿಯೊಂದರ ಮೇಲೆ ಮರ ಬಿದ್ದು 63 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಬಾಂದ್ರಾ ಮತ್ತು ವರ್ಲಿ ಭಾಗಗಳಲ್ಲೂ ಕಾರು ಹಾಗೂ ರಸ್ತೆಗಳ ಮೇಲೆ ಮರಗಳು ಬಿದ್ದಿದ್ದು, ಕೆಲವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಇನ್ನು ಮುಂಬೈ ವಿಮಾನ ನಿಲ್ದಾಣದಲ್ಲೂ ಭಾರೀ ಮಳೆಯಿಂದಾಗಿ ಸುಮಾರು ಒಂದು ಗಂಟೆಗಳ ಕಾಲ ವಿಮಾನಗಳ ಹಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು.

ಮುಂಬೈ-ಪುಣೆ ರೈಲು ಕಾರಿಡಾರ್‌ನಲ್ಲಿ ಭೂಕುಸಿತ
ಮಹಾರಾಷ್ಟ್ರದ ಅತ್ಯಂತ ಜನನಿಬಿಡ ರೈಲ್ವೆ ಮಾರ್ಗಗಳಲ್ಲಿ ಒಂದಾದ ಮುಂಬೈ-ಪುಣೆ ರೈಲು ಕಾರಿಡಾರ್ ಸೋಮವಾರ ಮುಂಜಾನೆ ಸಂಪೂರ್ಣ ಬಂದ್ ಆಗಿದೆ. ಕರ್ಜತ್-ಲೋನಾವಾಲ ಭೋರ್ ಘಾಟ್ ವಿಭಾಗದ ಠಾಕೂರ್ವಾಡಿ ಮತ್ತು ಮಂಕಿ ಹಿಲ್ ಬಳಿ ನಿರಂತರ ಮಳೆಯಿಂದಾಗಿ ಭಾರಿ ಭೂಕುಸಿತ ಸಂಭವಿಸಿದೆ.

ಬೆಟ್ಟದ ಮಣ್ಣು ಮತ್ತು ಬಂಡೆಗಳು ರೈಲ್ವೆ ಹಳಿಗಳ ಮೇಲೆ ಬಿದ್ದಿದ್ದರಿಂದ ಘಾಟ್ ವಿಭಾಗದ ಮೂರೂ ರೈಲ್ವೆ ಮಾರ್ಗಗಳು ಬಂದ್ ಆಗಿವೆ. ಇದರಿಂದಾಗಿ ಕೇಂದ್ರ ರೈಲ್ವೆ ಇಲಾಖೆಯು ಹಲವಾರು ಪ್ರಯಾಣಿಕ ಹಾಗೂ ದೂರದ ರೈಲುಗಳನ್ನು ರದ್ದುಗೊಳಿಸಿದೆ ಮತ್ತು ಮಾರ್ಗ ಬದಲಾವಣೆ ಮಾಡಿದೆ. ಹಳಿಗಳ ಮೇಲಿನ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ಯುದ್ಧೋಪಾದಿಯಲ್ಲಿ ಸಾಗುತ್ತಿದೆ.

ಮತ್ತಷ್ಟು ಓದಿ: Karnataka Weather Forecast: ಕರಾವಳಿಯಲ್ಲಿ ಮಳೆಯ ಅಬ್ಬರ! 8 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​

ಆರೆಂಜ್ ಅಲರ್ಟ್ ಘೋಷಣೆ
ಕಳೆದ 24 ಗಂಟೆಗಳಲ್ಲಿ ಮುಂಬೈನ ಹಲವು ಭಾಗಗಳಲ್ಲಿ 200 ಮಿ.ಮೀ ನಿಂದ 300 ಮಿ.ಮೀ ನಷ್ಟು ದಾಖಲೆ ಪ್ರಮಾಣದ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಇಂದು ಮುಂಬೈಗೆ ‘ಆರೆಂಜ್ ಅಲರ್ಟ್’ ಘೋಷಿಸಿದ್ದು, ಮುಂದಿನ 24 ಗಂಟೆಗಳಲ್ಲಿ ಗಂಟೆಗೆ 60-70 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಹಾಗೂ ಅತಿ ಹೆಚ್ಚು ಮಳೆಯಾಗುವ ಮುನ್ನೆಚ್ಚರಿಕೆ ನೀಡಿದೆ. ಅಗತ್ಯವಿದ್ದರೆ ಮಾತ್ರ ಸಾರ್ವಜನಿಕರು ಹೊರಗೆ ಹೋಗುವಂತೆ ಮತ್ತು ರೈಲು ನಿಲ್ದಾಣಗಳಿಗೆ ಹೋಗುವ ಮುನ್ನ ರೈಲುಗಳ ಸ್ಥಿತಿಯನ್ನು ಪರಿಶೀಲಿಸಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 10:07 am, Mon, 6 July 26

Source link

Leave a Reply

Your email address will not be published. Required fields are marked *