ಮುಂಬೈ, ಜೂನ್ 24: ವಾಣಿಜ್ಯ ನಗರಿ ಮುಂಬೈನಲ್ಲಿ ಮುಂಗಾರು ಮಳೆ (Mumbai Rains) ಆರ್ಭಟ ಮುಂದುವರಿದಿದ್ದು, ನಗರದಾದ್ಯಂತ ರಸ್ತೆಗಳು ಜಲಾವೃತಗೊಂಡಿವೆ. ಇದರ ನಡುವೆಯೇ ಬೃಹನ್ಮುಂಬೈ ಮಹಾನಗರ ಪಾಲಿಕೆಯ (BMC) ನಿರ್ಲಕ್ಷ್ಯವನ್ನು ಎತ್ತಿಹಿಡಿಯುವ ಆಘಾತಕಾರಿ ಘಟನೆಯೊಂದು ನಡೆದಿದೆ. ಮುಂಬೈ ಮೇಯರ್ ರಿತು ತಾವ್ಡೆ ಅವರು ಜಲಾವೃತಗೊಂಡ ಪ್ರದೇಶವನ್ನು ಪರಿಶೀಲಿಸುತ್ತಿದ್ದ ಸಂದರ್ಭದಲ್ಲಿ ಅವರ ಕಣ್ಣೆದುರೇ ಪೌರಕಾರ್ಮಿಕರೊಬ್ಬರು ನೀರಿನಲ್ಲಿ ಮುಳುಗಿದ್ದ ತೆರೆದ ಮ್ಯಾನ್ಹೋಲ್ಗೆ ಬಿದ್ದಿದ್ದಾರೆ.
ಈ ಇಡೀ ಘಟನೆಯ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ಬಿಎಂಸಿ ಆಡಳಿತದ ವಿರುದ್ಧ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬೈನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ರಸ್ತೆಗಳ ಮೇಲೆ ಮೂರರಿಂದ 4 ಅಡಿ ನೀರು ನಿಂತಿತ್ತು. ಮೇಯರ್ ರಿತು ತಾವ್ಡೆ ಅವರು ಅಧಿಕಾರಿಗಳ ತಂಡ ಹಾಗೂ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮುಳುಗಡೆಯಾದ ರಸ್ತೆಗಳ ಪರಿಶೀಲನೆ ನಡೆಸುತ್ತಿದ್ದರು. ಮೇಯರ್ ಮಳೆ ನೀರಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಸ್ಥಳದಲ್ಲೇ ಕೆಲವೇ ಅಡಿಗಳ ದೂರದಲ್ಲಿ ರಸ್ತೆಯಲ್ಲಿದ್ದ ಮ್ಯಾನ್ಹೋಲ್ ಮುಚ್ಚಳವನ್ನು ತೆಗೆಯಲಾಗಿತ್ತು. ರಸ್ತೆಯ ತುಂಬಾ ನೀರು ತುಂಬಿದ್ದರಿಂದ ಆ ಮ್ಯಾನ್ಹೋಲ್ ಪಾದಚಾರಿಗಳಿಗೆ ಕಾಣಿಸುತ್ತಿರಲಿಲ್ಲ.
ಅದೇ ಸಮಯದಲ್ಲಿ ರಸ್ತೆಯಲ್ಲಿ ನಡೆದು ಬರುತ್ತಿದ್ದ ಪೌರಕಾರ್ಮಿಕ ಮ್ಯಾನ್ಹೋಲ್ ಇರುವುದನ್ನು ಗಮನಿಸದೆ ನೇರವಾಗಿ ಅದರಲ್ಲಿ ಬಿದ್ದಿದ್ದಾರೆ. ಅವರು ಮ್ಯಾನ್ಹೋಲ್ಗೆ ಬೀಳುತ್ತಿದ್ದಂತೆ ಅಲ್ಲೇ ಇದ್ದ ಮೇಯರ್ ಭದ್ರತಾ ಸಿಬ್ಬಂದಿ, ಮಾಧ್ಯಮದ ಕ್ಯಾಮೆರಾಮೆನ್ಗಳು ಮತ್ತು ಸ್ಥಳೀಯರು ತಕ್ಷಣವೇ ಆತನ ಕೈಗಳನ್ನು ಹಿಡಿದು ಮೇಲಕ್ಕೆ ಎಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸಾರ್ವಜನಿಕರ ಸಮಯಪ್ರಜ್ಞೆಯಿಂದಾಗಿ ಒಂದು ದೊಡ್ಡ ದುರಂತ ತಪ್ಪಿದಂತಾಗಿದ್ದು, ಆ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯ ಬಳಿಕ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ತಕ್ಷಣವೇ ಆ ಮ್ಯಾನ್ಹೋಲ್ ಸುತ್ತ ಬ್ಯಾರಿಕೇಡ್ಗಳನ್ನು ಅಳವಡಿಸಲು ಮುಂದಾಗಿದ್ದಾರೆ.
(Video Source: Siraj Nooranin X Page)
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
