‘ಮುನ್ನಾಭಾಯಿ’ ಮತ್ತು ‘ಲಗೆರಹೊ ಮುನ್ನಾಭಾಯಿ’ ಸಿನಿಮಾಗಳು ಬಾಲಿವುಡ್ನ (Bollywood) ಕಲ್ಟ್ ಕ್ಲಾಸಿಕ್ ಹಾಸ್ಯ ಪ್ರಧಾನ ಸಿನಿಮಾಗಳು. ಹಾಸ್ಯದ ಜೊತೆಗೆ ಸಂದೇಶ, ಡ್ರಾಮಾ, ಸೆಂಟಿಮೆಂಟ್ ಸರಿಯಾದ ಪ್ರಮಾಣದ ಬೆರೆತ ಸಿನಿಮಾಗಳವು. ಈ ಸಿನಿಮಾ ಸರಣಿಗೆ ದೊಡ್ಡ ಅಭಿಮಾನಿ ವರ್ಗವಿದೆ. ಸತತ ಫ್ಲಾಪ್, ಜೈಲು ವಾಸ ಇನ್ನೂ ಏನೇನೋ ಎದುರಿಸಿದ್ದ ಸಂಜಯ್ ದತ್ ಅವರಿಗೆ ಮರು ಜನ್ಮ ನೀಡಿದ ಸಿನಿಮಾಗಳಿವು. ‘ಮುನ್ನಾಭಾಯಿ’ ಸರಣಿಯ ಎರಡನೇ ಸಿನಿಮಾ ‘ಲಗೆ ರಹೊ ಮುನ್ನಾಭಾಯಿ’ ಬಿಡುಗಡೆ ಆಗಿ 20 ವರ್ಷಗಳಾಗಿವೆ. 2006 ರಲ್ಲಿ ಆ ಸಿನಿಮಾ ರಿಲೀಸ್ ಆಗಿತ್ತು. ಆಗಾಗ್ಗೆ ಈ ಸಿನಿಮಾದ ಮೂರನೇ ಸರಣಿ ಬಗ್ಗೆ ಮಾತುಗಳು ಕೇಳಿ ಬರುತ್ತಿರುತ್ತವೆ. ‘ಮುನ್ನಾಭಾಯಿ’ ಸರಣಿ ನಿಂತು ಹೋಗಿದೆ ಎಂಬ ಸುದ್ದಿಯೂ ಸಹ ಹರಿದಾಡಿತ್ತು. ಆದರೆ ಸಿನಿಮಾದ ನಿರ್ದೇಶಕ ರಾಜ್ಕುಮಾರ್ ಹಿರಾನಿ ಖುದ್ದು ಈ ಬಗ್ಗೆ ಖಾತ್ರಿ ನೀಡಿದ್ದು, ಸಿನಿಮಾ ಸರಣಿ ನಿಂತಿಲ್ಲ ಎಂದಿದ್ದಾರೆ.
ಕಳೆದ ಹಲವು ವರ್ಷಗಳಿಂದ ಪ್ರೇಕ್ಷಕರು ಒಂದೇ ಪ್ರಶ್ನೆಯನ್ನು ಕೇಳುತ್ತಿದ್ದಾರೆ, ‘ಮುನ್ನಾ ಬಾಯ್ 3 ಯಾವಾಗ ಬರುತ್ತದೆ?’ ಮೂರನೇ ಭಾಗದ ಬಗ್ಗೆ ಹಲವು ವದಂತಿಗಳು ಮತ್ತು ಊಹಾಪೋಹಗಳ ನಡುವೆಯೂ, ಬಹುನಿರೀಕ್ಷಿತ ಈ ಚಿತ್ರ ಇದುವರೆಗೆ ಕೈಗೂಡಿರಲಿಲ್ಲ. ಇದೀಗ, ಚಲನಚಿತ್ರ ನಿರ್ಮಾಪಕ ರಾಜಕುಮಾರ್ ಹಿರಾನಿ ಮತ್ತು ನಟ ಅರ್ಷದ್ ವಾರ್ಸಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ನಿರ್ದೇಶಕ ರಾಜ್ಕುಮಾರ್ ಹಿರಾನಿ, ‘ಮುನ್ನಾಭಾಯಿ 3’ ಸಿನಿಮಾಕ್ಕೆ ಹಲವು ಆವೃತ್ತಿಯ ಕತೆಗಳು ಈಗಾಗಲೇ ತಯಾರಾಗಿವೆ. ಚಿತ್ರದ ಮೊದಲ ಎರಡು ಭಾಗಗಳಷ್ಟೇ ಅದ್ಭುತವಾದ ಚಿತ್ರವನ್ನು ರೂಪಿಸಲು, ಚಿತ್ರಕತೆಯನ್ನು ಹೆಚ್ಚು ಸುಂದರವಾಗಿ ರೂಪಿಸುವುದೇ ಈಗಿರುವ ಸವಾಲು. ನಿಮಗೆ ಮುನ್ನಾ ಬಾಯ್ ಚಿತ್ರ ಕೇವಲ ಇಂಟರ್ವಲ್ ವರೆಗೆ ಮಾತ್ರ ಬೇಕೆಂದಿದ್ದರೆ, ನಾನು ಈಗಲೇ ಐದು ಚಿತ್ರಗಳನ್ನು ಮಾಡಬಲ್ಲೆ. ದ್ವಿತೀಯಾರ್ಧದ ಕತೆ ನನ್ನ ಬಳಿ ಇಲ್ಲ’ ಎಂದಿದ್ದಾರೆ.
ಇದನ್ನೂ ಓದಿ:‘ಯಶ್ ಸಿನಿಮಾ ಎಂದರೆ ಏನೋ ಒಂದು ಅದ್ಭುತ ವಿಷಯ ಇರುತ್ತೆ’; ‘ಟಾಕ್ಸಿಕ್’ ಬಗ್ಗೆ ಪ್ರಿಯಾ ಆನಂದ್ ಮಾತು
‘ನಾನು ನಿಜಕ್ಕೂ ಒಂದು ಚಿತ್ರವನ್ನು ಮಾಡಲು ಬಯಸುತ್ತೇನೆ. ಬೇರೆ ಯಾರಾದರೂ ನನ್ನ ಜಾಗದಲ್ಲಿದ್ದರೆ, ‘ಯಾವುದಾದರೂ ಸ್ಕ್ರಿಪ್ಟ್ ಬರೆಯಿರಿ, ಅದು ಭರ್ಜರಿ ಓಪನಿಂಗ್ ಪಡೆಯುತ್ತದೆ ಮತ್ತು ಹಣ ಗಳಿಸುತ್ತದೆ’ ಎಂದು ಹೇಳಿರಬಹುದು. ಆದರೆ, ನಾನು ಹಾಗೆ ಮಾಡಲು ಬಯಸುವುದಿಲ್ಲ. ನಾವು ಎರಡು ಅದ್ಭುತ ಚಿತ್ರಗಳನ್ನು ಮಾಡಿದ್ದೇವೆ; ನಾನು ಹಣದ ಬಗ್ಗೆ ಮಾತ್ರ ಯೋಚಿಸಿದ್ದರೆ, ನಾನು ಈಗಾಗಲೇ ನಾಲ್ಕೈದು ಆವೃತ್ತಿಗಳನ್ನು ಮಾಡುತ್ತಿದ್ದೆ. ಆ ಚಿತ್ರವು ನಾವು ಈಗಾಗಲೇ ಮಾಡಿರುವ ಚಿತ್ರಗಳ ಗುಣಮಟ್ಟಕ್ಕೆ ಸಮನಾಗಿರಬೇಕು. ಅಲ್ಲೇ ನಾನು ಸಿಲುಕಿಕೊಂಡಿದ್ದೇನೆ, ಅದಕ್ಕೆ ‘ಮುನ್ನಾಭಾಯಿ 3’ ತಡವಾಗುತ್ತಿದೆ” ಎಂದು ಅವರು ಹೇಳಿದ್ದಾರೆ.
ನಟ ಅರ್ಷದ್ ವಾರ್ಸಿ ಮಾತನಾಡಿ, ‘ವಾಸ್ತವವಾಗಿ, ಮೂರು ಅಪೂರ್ಣವಾದ ಸ್ಕ್ರಿಪ್ಟ್ಗಳು ಇವೆ. ಮತ್ತು ಅವುಗಳಲ್ಲಿ ಮೂರೂ ನಾನು ಕೇಳಿದ ಹೆಚ್ಚಿನ ಸ್ಕ್ರಿಪ್ಟ್ಗಳಿಗಿಂತ ಉತ್ತಮವಾಗಿವೆ. ಪ್ರತಿಯೊಂದೂ ತಕ್ಷಣವೇ ಗಮನ ಸೆಳೆಯುವ ಅಂಶಗಳನ್ನು ಹೊಂದಿವೆ. ಆಲೋಚನೆಗಳು ಮತ್ತು ದೃಶ್ಯಗಳು ಅದ್ಭುತವಾಗಿವೆ. ಆದರೆ ಅದಕ್ಕೆ ಆ ಒಂದು ಸಣ್ಣ ಕೊಂಡಿ ಇಲ್ಲ. ಅದೆಲ್ಲ ಬಿಡಿ-ಬಿಡಿ ಆಗಿವೆ. ಒಮ್ಮೆ ಅದು ಸರಿಯಾದ ಜಾಗದಲ್ಲಿ ಕೂತರೆ, ನಾವು ಸಿನಿಮಾ ಮಾಡಲು ರೆಡಿ ಆಗಬಹುದು’ ಎಂದು ಅವರು ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
