ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್ ಗಿರಿ: ಬೈಕ್ ಅಡ್ಡಗಟ್ಟಿ ದಲಿತ ಕ್ರಿಶ್ಚಿಯನ್ ಬಾಲಕನ ಮೇಲೆ ಹಲ್ಲೆ – Kannada News | Moral policing In Chikkamagaluru: Muslim Youths Assaults On Christian Boy, case Book

ಚಿಕ್ಕಮಗಳೂರು, (ಫೆಬ್ರವರಿ 19): ಕಾಫಿನಾಡು ಚಿಕ್ಕಮಗಳೂರಿನಲ್ಲಿ (Chikkamagaluru) ನೈತಿಕ ಪೊಲೀಸ್ ಗಿರಿ (Moral Policing) ನಡೆದಿರುವುದು ಬೆಳಕಿಗೆ ಬಂದಿದೆ. ದಲಿತ ಕ್ರಿಶ್ಚಿಯನ್ ಬಾಲಕನೋರ್ವ, ಮುಸ್ಲಿಂ ಯುವತಿಯೊಂದಿಗೆ ಬೈಕ್​​ನಲ್ಲಿ ತೆರಳುತ್ತಿದ್ದಾಗ ಗುಂಪೋಂದು ಅಡ್ಡಗಟ್ಟಿದೆ. ತಮ್ಮ ಸಮುದಾಯದ ಯುವತಿಯನ್ನು ಬೈಕ್ ಮೇಲೆ ಕರೆದುಕೊಂಡು ಹೋಗುತ್ತಿದ್ದಕ್ಕೆ ಮುಸ್ಲಿಂ ಯುವಕರ ತಂಡ ಬೈಕ್ ಅಡ್ಡಗಟ್ಟಿ ಕ್ರಿಶ್ಚಿಯನ್ ಬಾಲಕನ ಮೇಲೆ ಹಲ್ಲೆ ಮಾಡಿದೆ. ಚಿಕ್ಕಮಗಳೂರಿನ ಮಾರ್ಕೆಟ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ 8 ಯುವಕರ ವಿರುದ್ಧ ಎಫ್​​ಐಆರ್ ದಾಖಲಾಗಿದೆ.

ಅಪ್ರಾಪ್ತ ಕ್ರಿಶ್ಚಿಯನ್ ಬಾಲಕ, ಮುಸ್ಲಿಂ ಯುವತಿಯನ್ನು ಬೈಕ್​​ನಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ಚಿಕ್ಕಮಗಳೂರಿನ ಮಾರ್ಕೆಟ್ ರಸ್ತೆಯಲ್ಲಿ ಅಡ್ಡಗಟ್ಟಿದ್ದಾರೆ. ಬಳಿಕ ಕ್ರಿಶ್ಚಿಯನ್ ಬಾಲಕ ಮೇಲೆ ಹಲ್ಲೆ ಮಾಡಿದ್ದಾರೆ. ಇನ್ನು ಈ ಬಗ್ಗೆ  ಅಪ್ರಾಪ್ತ ಬಾಲಕನ ಸಹೋದರ ನೀಡಿದ ದೂರಿನನ್ವಯ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.

ಎಸ್ಪಿ ಜಿತೇಂದ್ರ ಕುಮಾರ್ ದಯ್ಮಾ ಹೇಳಿದ್ದಿಷ್ಟು

ಇನ್ನು ಈ ಪ್ರಕರಣದ ಬಗ್ಗೆ ಚಿಕ್ಕಮಗಳೂರು ಎಸ್ಪಿ ಜಿತೇಂದ್ರ ಕುಮಾರ್ ದಯ್ಮಾ ಪ್ರತಿಕ್ರಿಯಿಸಿದ್ದು, ಬಾಲಕ‌,ಬಾಲಕಿ ಅಪ್ರಾಪ್ತರು ಬೈಕಿನಲ್ಲಿ ಹೋಗುತ್ತಿದ್ದರು. ಈ ವೇಳೆ ಅಡ್ಡ ಹಾಕಿ ಬೆದರಿಕೆ ಹಾಕಿದ್ದಾರೆ. ಇದು ಮೇಲ್ನೋಟಕ್ಕೆ ನೈತಿಕ ಪೊಲೀಸ್ ಗಿರಿ ಎನ್ನುವುದು ಕಂಡು ಬರುತ್ತಿದೆ. ಇಬ್ಬರು ಯುವಕರು ಬಂದು ಬೈಕ್ ಅಡ್ಡ ಹಾಕಿದ್ದಾರೆ. ಇನ್ನೂ ಕೆಲವರು ಬೆದರಿಕೆ ಹಾಕಿದ್ದಾರೆ. ಅಪ್ರಾಪ್ತ ಬಾಲಕನ‌ ಮನೆಗೆ ತೆರಳಿ ಕೆಲವರು ಹಲ್ಲೆ ಮಾಡಲು ‌ಯತ್ನಿಸಿ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಇಬ್ಬರನ್ನ ಬಂಧನ ಮಾಡಲಾಗಿದ್ದು, ರಾತ್ರಿ, ಹಗಲು ಎರಡು ಪಾಳಿಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ರಂಜಾನ್ ಇರುವುದರಿಂದ ಸಂಪೂರ್ಣ ಭದ್ರತೆ ಮಾಡಲಾಗಿದೆ. ಯಾವುದೇ ನೈತಿಕ ಪೊಲೀಸ್ ಗಿರಿಗೆ ಅವಕಾಶ ನೀಡುವುದಿಲ್ಲ ಎಂದರು.

ಇದನ್ನೂ ಓದಿ: ಗದಗದಲ್ಲಿ ಮುಂದುವರೆದ ಹಿಂದೂ ದೇವರ ಮೇಲಿನ ಅಟ್ಟಹಾಸ: 2 ಗ್ರಾಮಗಳಲ್ಲಿ ಮೂರ್ತಿಗಳು ಧ್ವಂಸ

60ಕ್ಕೂ ಹೆಚ್ಚು ಜನ ಬಂದಿದ್ರು ಎಂದ ಯುವಕನ ತಾಯಿ

ಈ ಬಗ್ಗೆ ಯುವಕನ ತಾಯಿ ಪಲ್ಲವಿ ಮಾತನಾಡಿದ್ದು, ಹುಡುಗಿ ಯಾವಾಗಲೂ ನನ್ನ ಮನೆಗೆ ಬರುತ್ತಾಳೆ. ನನಗೆ ಹುಷಾರಿಲ್ಲ ಮನೆಗೆ ಬಿಡು ಎಂದಿದ್ದಾಳೆ.ಆ ಹುಡುಗಿ ನನ್ನ ಅಮ್ಮ ಎಂದು ಕರೆಯುತ್ತಾಳೆ. ಮನೆಗೆ ಬಿಡಲು ಹೋಗುತ್ತಿದ್ದಾಗ ಜ್ಯೋತಿ ಟಾಕೀಸ್ ಬಳಿ 39ಕ್ಕೂ ಹೆಚ್ಚು ಜನರು ಅಡ್ಡ ಹಾಕಿದ್ದಾರೆ. ಮನೆಯ ಬಳಿ ಬನ್ನಿ ಮಾತನಾಡೋಣ ಎಂದು ಕರೆದುಕೊಂಡು ಹೋದೆ. ಆದ್ರೆ, ಮನೆಯ ಬಳಿ 60ಕ್ಕೂ ಹೆಚ್ಚು ಜನ ಬಂದಿದ್ದರು. ಕೆಲವರು ಮಗನ ಮೇಲೆ ಹಲ್ಲೆ ಮಾಡಿದ್ದಾರೆ. ಅನಂತರ ನಾವು ಪೊಲೀಸ್ ಠಾಣೆಗೆ ಬಂದ್ವಿ. ಎಲ್ಲರೂ ಹಲ್ಲೆ ಮಾಡಿಲ್ಲ‌ ಇಬ್ಬರು ಮಾತ್ರ ಹಲ್ಲೆ ಮಾಡಿದ್ದಾರೆ. ನಮ್ಮ‌ ಹುಡುಗ ಮತ್ತು ಹುಡುಗಿಯದ್ದು ಯಾವುದೇ ತಪ್ಪಿಲ್ಲ. ಇವನು ಹಿಂದೂ ಅವಳು ಮುಸ್ಲಿಂ ‌ಎಂದು ಈ‌ ರೀತಿಯಲ್ಲಿ ಮಾಡಿದ್ದಾರೆ. ಹೇಗೆ ಕರೆದುಕೊಂಡು ಬಂದ್ರಿ ಎಂದು ನನ್ನ ಮುಂದೆ ಪ್ರಶ್ನೆ ಮಾಡಿದ್ರು. ನಮ್ಮ ಮತ್ತು ಹುಡುಗಿಯ ನಡುವೆ ಏನು ಇಲ್ಲ. ಮಧ್ಯದಲ್ಲಿ ಇದ್ದವರು ಈ ರೀತಿ ಮಾಡಿದ್ದಾರೆ ಎಂದಿದ್ದಾರೆ.

ಮುಸ್ಲಿಂ ಮುಖಂಡ ಅಲಿ ಹೇಳಿದ್ದೇನು?

ಮೂರು ಜನ ಯಾರೋ‌ ತಪ್ಪು ಮಾಡಿದ್ದಾರೆ. ಯಾರೂ ತಪ್ಪು ಮಾಡಿಲ್ಲ ಅಂತಾ ಏನಿಲ್ಲ. ಏರಿಯಾದಲ್ಲೊ ಯಾರೋ‌ ಮನೆಗೆ ನುಗ್ಗಿದ್ದಾರೆಂದು ಬಿಡಿಸಲು ಹೋಗಿದ್ದಾರೆ.ಆವಮ್ಮ ಬಾರಪ್ಪ ಮನೆಯಲ್ಲಿ ಸೆಟಲ್ಮೆಂಟ್ ಮಾಡೋಣ ಅಂತಾ ಕರೆದುಕೊಂಡು ಹೋಗಿದ್ದಾರೆ. ಕರೆದುಕೊಂಡು ಹೋಗಿ ನಮಗೆ ಹೊಡೆಯೋಕೆ ಬಂದಿದ್ರು ಎಂದು ಕೇಸ್ ಮಾಡಿದ್ದಾರೆ. ಯಾಕೆ ಇವನ ಜೊತೆಯಲ್ಲಿ ಹೋಗುತ್ತಿದ್ದೀಯಾ ಅಂತ ಹಿಡಿದಿದ್ದಾರೆ. ಮಾರ್ಕೆಟ್ ರೋಡ್ ನಲ್ಲಿ ಹೋಗುತ್ತಿದ್ದಾಗ ಹಿಡಿದು ಕೇಳಿದ್ದಾರೆ ಅಷ್ಟೇ. ಎಲ್ಲಾದರೂ ಓಡಾಡ್ಲಿ ಅವರಿನ್ನು 7th ಓದುತ್ತಿದ್ದಾರಂತೆ. ಇವರು ಹೊಡೆಯುವುದಕ್ಕೆ ಹೋಗಿಲ್ಲ. ಮನೆಯಲ್ಲಿ ಸೆಟ್ಲ್ಮೆಂಟ್ ಮಾಡೋಣ ಅಂತ ಕರೆದುಕೊಂಡು ಹೋಗಿ ಇಲ್ಲಿ ಬಂದು ಎಲ್ಲರ ಮೇಲೂ ಕೇಸ್ ಫಿಟ್ ಮಾಡಿದ್ದಾರೆ. ನಾಲ್ಕು ಜನರನ್ನು ಮನೆಗೆ ಕರೆದುಕೊಂಡು ಹೋಗಿ ಓಡಿಯೋಕೆ ಬಂದಿದ್ರು ಅಂತ ಕೇಸ್ ಕೊಟ್ಟಿದ್ದಾರೆ ಹೀಗೆ ಮಾಡಬಹುದಾ? ಮಾರ್ಕೆಟ್ ರೋಡ್ ನಲ್ಲಿ ಹೋಗುತ್ತಿದ್ದಾಗ ಹಿಡಿದು ಕೇಳಿದ್ದಾರೆ ಅಷ್ಟೇ. ಇವರನ್ನು ಮನೆಗೆ ಕರೆದುಕೊಂಡು ಹೋಗುವ ಬದಲು ಸ್ಟೇಷನ್ ಗೆ ಕರೆದುಕೊಂಡು ಬರಬಹುದು ಅಲ್ವಾ? ಮನೆಗೆ ಕರೆದುಕೊಂಡು ಹೋಗಿ ಮುಸ್ಲಿಂ ಹುಡುಗರು ಈ ರೀತಿ ಮಾಡಿದ್ದಾರೆ ಅಂದ್ರೆ ಅದು ತಪ್ಪಲ್ವಾ ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *