ಮೈಸೂರಿನಲ್ಲಿ ಗುತ್ತಿಗೆದಾರನ ಅಪಹರಣ: 16 ಲಕ್ಷ ರೂ. ನಗದು, ಚಿನ್ನಾಭರಣ ದೋಚಿ ದುಷ್ಕರ್ಮಿಗಳು ಪರಾರಿ – Kannada News | Mysuru Contractor Kidnapped, Gang Robs Rs 16 Lakh Cash and Gold Worth Rs 3.5 Lakh; Three Police Teams Formed

ಗುತ್ತಿಗೆದಾರನ ಕಿಡ್ನಾಪ್ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರಿಂದ ಪರಿಶೀಲನೆImage Credit source: tv9

ಮೈಸೂರು, ಜುಲೈ 18: ಮೈಸೂರು (Mysuru) ನಗರದ ಹೊರವಲಯದಲ್ಲಿ ಗುತ್ತಿಗೆದಾರನೊಬ್ಬನನ್ನು ಅಪಹರಿಸಿ 16 ಲಕ್ಷ ರೂ. ನಗದು ಹಾಗೂ ಸುಮಾರು 3.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಸಿದು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೈಸೂರು ತಾಲೂಕಿನ ಮುದ್ದೇಗೌಡನ ದೊಡ್ಡಿ ಗ್ರಾಮದ ನಿವಾಸಿ ರಾಮು ಅಪಹರಣಕ್ಕೊಳಗಾದ ಗುತ್ತಿಗೆದಾರ. ಜುಲೈ 15ರಂದು ತೋಟದಿಂದ ಮನೆಗೆ ತೆರಳುತ್ತಿದ್ದ ವೇಳೆ ನಾಲ್ವರು ದುಷ್ಕರ್ಮಿಗಳು ರಾಮುವನ್ನು ಅಪಹರಿಸಿದ್ದಾರೆ. ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿ ರಾತ್ರಿಯಿಡೀ ಕಾರಿನಲ್ಲಿ ವಿವಿಧೆಡೆ ಸುತ್ತಾಡಿಸಿದ ಆರೋಪಿಗಳು, ಅವರ ಮೊಬೈಲ್‌ನಿಂದ ಪತ್ನಿಗೆ ಕರೆ ಮಾಡಿಸಿ ‘‘ಇಂದು ಮನೆಗೆ ಬರುವುದಿಲ್ಲ’’ ಎಂದು ಬಲವಂತವಾಗಿ ಹೇಳಿಸಿದ್ದಾರೆ.

ಕೊಲೆ ಮಾಡಲು ಸುಪಾರಿ ಕೊಟ್ಟಿದ್ದಾರೆಂದು ಯಾಮಾರಿಸಿದ ಗ್ಯಾಂಗ್

ಬಳಿಕ, ‘ನಿನ್ನನ್ನು ಕೊಲೆ ಮಾಡಲು 9 ಲಕ್ಷ ರೂ. ಸುಪಾರಿ ನೀಡಲಾಗಿದೆ. ಪ್ರಾಣ ಉಳಿಸಿಕೊಳ್ಳಬೇಕಾದರೆ 40 ಲಕ್ಷ ರೂ. ಕೊಡಬೇಕು’ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಇದಕ್ಕೆ ರಾಮು ತನ್ನ ಬಳಿ 40 ಲಕ್ಷ ರೂ. ಇಲ್ಲ, 16 ಲಕ್ಷ ರೂ. ಮಾತ್ರ ಇದೆ ಎಂದು ತಿಳಿಸಿದ್ದಾರೆ.

ಗುತ್ತಿಗೆದಾರನ ಪತ್ನಿಗೆ ಕರೆ ಮಾಡಿಸಿ ಹಣ ತರಿಸಿಕೊಂಡ ಆರೋಪಿಗಳು

ಆ ಬಳಿಕ ಆರೋಪಿಗಳು ರಾಮುವಿನ ಪತ್ನಿಗೆ ಕರೆ ಮಾಡಿಸಿ, ಅವರ ಸಂಬಂಧಿ ಸುರೇಶ್ ಮೂಲಕ 16 ಲಕ್ಷ ರೂ. ಹಣವನ್ನು ನಂದಗುಂದ ಸೇತುವೆ ಬಳಿ ತಲುಪಿಸುವಂತೆ ಸೂಚಿಸಿದ್ದಾರೆ. ಗ್ಯಾಂಗ್ ಸೂಚಿಸಿದಂತೆ, ಸುರೇಶ್ ಅವರು ಕಪ್ಪು ಬಣ್ಣದ ಶರ್ಟ್ ಧರಿಸಿದ್ದ ವ್ಯಕ್ತಿಗೆ ಹಣ ನೀಡಿದ ನಂತರವೂ ಆರೋಪಿಗಳು ಸುಮಾರು ಒಂದು ಗಂಟೆ ಕಾಲ ರಾಮುವನ್ನು ಕಾರಿನಲ್ಲಿ ಸುತ್ತಾಡಿಸಿ, ಬಳಿಕ ಅಜ್ಞಾತ ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಇದೇ ವೇಳೆ ಪೊಲೀಸರಿಗೆ ಮಾಹಿತಿ ನೀಡಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆರೋಪಿಗಳು ರಾಮುವಿನ ಕತ್ತಿನಲ್ಲಿದ್ದ 30 ಗ್ರಾಂ ಚಿನ್ನದ ಸರ, ಎರಡು 10 ಗ್ರಾಂ ಚಿನ್ನದ ಉಂಗುರಗಳು ಹಾಗೂ ಜೇಬಿನಲ್ಲಿದ್ದ 50 ಸಾವಿರ ರೂ. ನಗದನ್ನೂ ಕಸಿದುಕೊಂಡಿದ್ದಾರೆ. ಒಟ್ಟಾರೆ ಸುಮಾರು 3.5 ಲಕ್ಷ ರೂ.ಮೌಲ್ಯದ ಚಿನ್ನಾಭರಣ ದೋಚಲಾಗಿದೆ.

ಇದನ್ನೂ ಓದಿ: ಡಿಕೆಶಿ ಸಿಎಂ ಆಗಲಿ ಎಂದು ಹರಕೆ ಹೊತ್ತಿದ್ದ ಪತ್ನಿ; ಮೈಸೂರು ಚಾಮುಂಡೇಶ್ವರಿಗೆ ಸೀರೆ ಹರಕೆ ತೀರಿಸಿದ ಉಷಾ ಶಿವಕುಮಾರ್!

ಈ ಸಂಬಂಧ ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಹರಣಕಾರರ ಪತ್ತೆಗಾಗಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಮೊಬೈಲ್ ನೆಟ್‌ವರ್ಕ್ ಹಾಗೂ ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ತನಿಖೆ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *