ಮೈಸೂರು, ಏಪ್ರಿಲ್ 25: ಮಗ ಅಂದರೆ ಹೆತ್ತ ತಾಯಿಗೆ ಪ್ರಾಣಕ್ಕಿಂತ ಮಿಗಿಲು. ಆದರೆ ಅದೇ ಮಗ ಕುಡಿತದ ಚಟಕ್ಕೆ ಬಿದ್ದು, ದಿನನಿತ್ಯ ಹೆತ್ತವಳಿಗೆ ನರಕಯಾತನೆ ನೀಡಿದರೆ ಏನಾಗಬಹುದು ಎಂಬುದಕ್ಕೆ ಮೈಸೂರಿನಲ್ಲಿ ನಡೆದ ಈ ಭೀಕರ ಘಟನೆಯೇ ಸಾಕ್ಷಿ. ಕುಡಿಯಲು ಹಣಕ್ಕಾಗಿ ಪೀಡಿಸುತ್ತಿದ್ದ ಮಗನನ್ನು ತಾಯಿಯೇ (Mother) ಕಲ್ಲಿನಿಂದ ಹೊಡೆದು ಕೊಲೆ (kill) ಮಾಡಿದ ಘಟನೆ ಸಾಂಸ್ಕೃತಿಕ ನಗರಿಯನ್ನು ಬೆಚ್ಚಿಬೀಳಿಸಿದೆ.
ಮೈಸೂರಿನ ಎನ್.ಆರ್. ಮೊಹಲ್ಲಾ ನಿವಾಸಿ ಮಂಜುಳಾ ಎಂಬುವವರ ಮಗ ರಮೇಶ (43) ಕೊಲೆಯಾದ ವ್ಯಕ್ತಿ. ಈತನನ್ನು ಕೊಲೆ ಮಾಡಿದ್ದು, ಹೆತ್ತ ತಾಯಿ ಮಂಜುಳಾ. ಬೇರೆಯವರ ಮನೆಯಲ್ಲಿ ಮಂಜುಳಾ ಕೆಲಸ ಮಾಡಿಕೊಂಡಿದ್ದರು. ಮಗ ರಮೇಶನಿಗೆ ಕುಡಿತದ ಚಟವಿತ್ತು. ಈತ ಕೆಲಸಕ್ಕೂ ಹೋಗದೆ ದಿನನಿತ್ಯ ಕುಡಿಯಲು ಹಣ ನೀಡುವಂತೆ ತಾಯಿಗೆ ಕಿರುಕುಳ ನೀಡುತ್ತಿದ್ದ.
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕೊಲೆ
ಪ್ರತಿದಿನ ಮಗ ನೀಡುತ್ತಿದ್ದ ಮಾನಸಿಕ ಮತ್ತು ದೈಹಿಕ ಹಿಂಸೆ ಮಂಜುಳಾ ಅವರಿಗೆ ಅಸಹನೀಯವಾಗಿತ್ತು. ಕೊನೆಗೆ ಈ ಹಿಂಸೆಯಿಂದ ಮುಕ್ತಿ ಪಡೆಯಲು ತಾಯಿ ಒಂದು ಭೀಕರ ಪ್ಲ್ಯಾನ್ ಮಾಡಿದ್ದರು. ಚಾಮುಂಡಿ ಬೆಟ್ಟದ ತಪ್ಪಲಿಗೆ ಮಗನನ್ನು ಕರೆದುಕೊಂಡು ಹೋಗಿದ್ದ ಮಂಜುಳಾ, ಅಲ್ಲಿ ಮಗನ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ಗಲಾಟೆ ವಿಕೋಪಕ್ಕೆ ಹೋದಾಗ, ಅಲ್ಲೇ ಇದ್ದ ಕಲ್ಲನ್ನು ಎತ್ತಿ ಮಗನ ತಲೆಗೆ ಹೊಡೆದಿದ್ದಾರೆ. ತೀವ್ರ ರಕ್ತಸ್ರಾವದಿಂದ ರಮೇಶ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಪೊಲೀಸ್ ವಿಚಾರಣೆಯಲ್ಲಿ ಸತ್ಯ ಬಾಯಿಬಿಟ್ಟ ತಾಯಿ
ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ನಜರ್ಬಾದ್ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಮೊದಲು ಕೊಲೆಯ ಬಗ್ಗೆ ಚಿಕ್ಕ ಸುಳಿವು ಸಿಕ್ಕಿರಲಿಲ್ಲ. ನಂತರ ಪೊಲೀಸರು ಸಿಸಿ ಕ್ಯಾಮೆರಾ ಮೊರೆ ಹೋಗಿದ್ದಾರೆ. ಈ ವೇಳೆ ತಾಯಿ, ಮಗನನ್ನು ಚಾಮುಂಡಿಬೆಟ್ಟಕ್ಕೆ ಕರೆದುಕೊಂಡು ಹೋದ ದೃಶ್ಯ ಸೆರೆಯಾಗಿತ್ತು. ಈ ನಿಟ್ಟಿನಲ್ಲಿ ತನಿಖೆ ನಡೆಸಿದ ಪೊಲೀಸರು ತಾಯಿಯ ವಿಚಾರಣೆ ಮಾಡಿದ್ದು, ಆಗ ತಾಯಿ ಸತ್ಯ ಬಾಯಿ ಬಿಟ್ಟಿದ್ದಾರೆ.
ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಪರಲೋಕಕ್ಕೆ ಕಳುಹಿಸಿದ ಪತ್ನಿ!: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಕೊಲೆ?
ಸದ್ಯ ತಾಯಿ ಮಂಜುಳಾರನ್ನು ಬಂಧಿಸಿರುವ ಪೊಲೀಸರು ಜೈಲಿಗಟ್ಟಿದ್ದಾರೆ. ಕುಡಿತದ ಚಟ ಒಂದು ಸುಂದರ ಕುಟುಂಬವನ್ನು ಹೇಗೆ ಬೀದಿಗೆ ತರುತ್ತದೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ ಎನ್ನಬಹುದು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
