ಮೈಸೂರು, ಜುಲೈ 05: ಗ್ರಾಹಕರನ್ನು ಆಕರ್ಷಿಸಲು ಒಣಗಿದ ಬಟಾಣಿಗೆ ರಾಸಾಯನಿಕಯುಕ್ತ ಕೃತಕ ಹಸಿರು ಬಣ್ಣ ಬಳಿದು ಮಾರಾಟ ಮಾಡುತ್ತಿದ್ದ ದಂಧೆಯನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕ್ರಾಂತಿ ಪ್ರಾಧಿಕಾರದ (FSSAI) ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಮೈಸೂರಿನ (Mysore) ಪ್ರಸಿದ್ಧ ಎಂ.ಜಿ. ರಸ್ತೆ ಸಗಟು ತರಕಾರಿ ಮಾರುಕಟ್ಟೆಯಲ್ಲಿ ಶನಿವಾರ ಮುಂಜಾನೆ ಅಧಿಕಾರಿಗಳ ತಂಡ ಭರ್ಜರಿ ದಾಳಿ ನಡೆಸಿ, ಒಟ್ಟು 106 ಕೆಜಿ ಕೃತಕ ಬಣ್ಣದ ಹಸಿರು ಬಟಾಣಿಯನ್ನು ಜಪ್ತಿ ಮಾಡಿದೆ.
ಎಫ್ಎಸ್ಎಸ್ಎಐ ನಿಯೋಜಿತ ಅಧಿಕಾರಿ ಎಸ್.ಎಲ್. ರವೀಂದ್ರ ಅವರ ನೇತೃತ್ವದಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ಶನಿವಾರ ಮುಂಜಾನೆ 4.30ರ ಸುಮಾರಿಗೆ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ವೇಳೆ ಆರು ಮಂದಿ ವ್ಯಾಪಾರಿಗಳು ಹಸಿರು ಬಣ್ಣದ ರಾಸಾಯನಿಕ ಏಜೆಂಟ್ಗಳನ್ನು ಬಳಸಿ ಕೃತಕವಾಗಿ ಬಣ್ಣ ಹಚ್ಚಿದ ಬಟಾಣಿ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ಎಂ.ಜಿ. ರಸ್ತೆ ತರಕಾರಿ ಮಾರುಕಟ್ಟೆಯಲ್ಲಿ ಇಂತಹ ಕೃತಕ ಬಣ್ಣದ ಬಟಾಣಿ ದಂಧೆ ಗುರಿಯಾಗಿಸಿ ನಡೆಸಲಾದ ಮೂರನೇ ದೊಡ್ಡ ಕಾರ್ಯಾಚರಣೆ ಇದಾಗಿದೆ.
ಲ್ಯಾಬ್ಗೆ ಸ್ಯಾಂಪಲ್ ರವಾನೆ – ಕಠಿಣ ಕ್ರಮದ ಎಚ್ಚರಿಕೆ
ವಶಪಡಿಸಿಕೊಳ್ಳಲಾದ 106 ಕೆಜಿ ಸಂಶಯಾಸ್ಪದ ಬಟಾಣಿಗಳ ಸ್ಯಾಂಪಲ್ಗಳನ್ನು ಸಂಗ್ರಹಿಸಲಾಗಿದ್ದು, ಅವುಗಳಲ್ಲಿ ಯಾವ ರೀತಿಯ ಅಪಾಯಕಾರಿ ರಾಸಾಯನಿಕ ಬಣ್ಣ ಬಳಸಲಾಗಿದೆ ಎಂಬುದನ್ನು ಪತ್ತೆಹಚ್ಚಲು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ವ್ಯಾಪಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲ ವ್ಯಾಪಾರಿಗಳು ಒಣಗಿದ ಹಸಿರು ಬಟಾಣಿಗಳನ್ನು ತಂದು, ಅವು ಹಸಿರು ಮತ್ತು ತಾಜಾ ಆಗಿ ಕಾಣುವಂತೆ ಮಾಡಲು ಕೃತಕ ಬಣ್ಣಗಳನ್ನು ಹಚ್ಚಿ ಗ್ರಾಹಕರಿಗೆ ವಂಚಿಸುತ್ತಿದ್ದಾರೆ ಎಂದು ತನಿಖೆ ವೇಳೆ ತಿಳಿದುಬಂದಿದೆ. ದಾಳಿಯ ವೇಳೆ ಮಾರುಕಟ್ಟೆಯ ಸುಮಾರು 25ಕ್ಕೂ ಹೆಚ್ಚು ವ್ಯಾಪಾರಿಗಳಿಗೆ ಇಂತಹ ಅನಧಿಕೃತ ಬಣ್ಣದ ಬಳಕೆಯಿಂದ ಸಾರ್ವಜನಿಕರ ಆರೋಗ್ಯದ ಮೇಲಾಗುವ ಗಂಭೀರ ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಯಿತು.
ಕೃತಕ ಬಣ್ಣ ಗುರುತಿಸುವುದು ಹೇಗೆ?
ಬಟಾಣಿಗೆ ಕೃತಕ ಬಣ್ಣ ಹಚ್ಚಲಾಗಿದೆಯೇ ಎಂಬುದನ್ನು ಗ್ರಾಹಕರು ಸುಲಭವಾಗಿ ಪತ್ತೆಹಚ್ಚಬಹುದು ಎಂದು ಅಧಿಕಾರಿ ರವೀಂದ್ರ ತಿಳಿಸಿದ್ದಾರೆ. ಸಂಶಯಾಸ್ಪದ ಬಟಾಣಿಗಳನ್ನು ಒಂದು ಪಾರದರ್ಶಕ ಗ್ಲಾಸ್ ಅಥವಾ ಪಾತ್ರೆಯ ನೀರಿನಲ್ಲಿ ಹಾಕಿ ಸ್ವಲ್ಪ ಅಲ್ಲಾಡಿಸಿದರೆ, ಬಟಾಣಿಗೆ ಬಳಸಲಾದ ಕೃತಕ ಹಸಿರು ಬಣ್ಣವು ತಕ್ಷಣವೇ ನೀರಿಗೆ ಬಿಟ್ಟುಕೊಳ್ಳುತ್ತದೆ. ಇದರಿಂದ ರಾಸಾಯನಿಕ ಬಣ್ಣ ಬಳಸಿರುವುದನ್ನು ಸುಲಭವಾಗಿ ತಿಳಿಯಬಹುದು ಎಂದಿದ್ದಾರೆ.
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಮೈಸೂರಿನ ಮೂರು ವಲಯಗಳ ಆಹಾರ ಸುರಕ್ಷತಾ ಅಧಿಕಾರಿಗಳಾದ ಗಿರೀಶ್ ಎಸ್.ಆರ್ (ವಲಯ 1), ರಾಜೇಶ್ (ವಲಯ 2) ಮತ್ತು ಬಾಲಸುಬ್ರಹ್ಮಣ್ಯ (ವಲಯ 3) ಪಾಲ್ಗೊಂಡಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
