ಪುಣೆ, ಜೂನ್ 24: ರಾಜಸ್ಥಾನದ ಉದಯಪುರದ ಅರಮನೆಯಲ್ಲಿ ಈ ವರ್ಷದ ಕೊನೆಯಲ್ಲಿ ಭರ್ಜರಿಯಾಗಿ ಮದುವೆಯಾಗಬೇಕಿದ್ದ ಜೋಡಿ. ಇಬ್ಬರ ಕುಟುಂಬಗಳೂ ಮದುವೆ(Marriage)ಯ ಸಂಭ್ರಮದಲ್ಲಿದ್ದವು. ಆದರೆ, ಯಾರೂ ಊಹಿಸದ ಕರಾಳ ಸಂಚೊಂದು ಸಂಭ್ರಮವನ್ನು ದುರಂತವಾಗಿ ಬದಲಿಸಿದೆ. 26 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಅವರನ್ನು ಅವರ ಭಾವಿ ಪತ್ನಿ ಸಿಯಾ ಗೋಯಲ್, ತನ್ನ ಸೀಕ್ರೆಟ್ ಪ್ರಿಯಕರನೊಂದಿಗೆ ಸೇರಿ ಲೋಹಗಡ್ ಕೋಟೆಯಿಂದ 400 ಅಡಿ ಆಳದ ಕಂದಕಕ್ಕೆ ತಳ್ಳಿ ಬರ್ಬರವಾಗಿ ಕೊಲೆ ಮಾಡಿದ್ದಾಳೆ.
ಮೊದಲು ಇದು ಕೇವಲ ಆಕಸ್ಮಿಕ ಅಪಘಾತ ಎಂದು ಬಿಂಬಿಸಲಾಗಿತ್ತು. ಆದರೆ ಪೊಲೀಸರ ತನಿಖೆ ತೀವ್ರಗೊಂಡಾಗ ಸಿಯಾ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ (22) ಅವರ ಕ್ರೂರ ಮುಖವಾಡ ಕಳಚಿ ಬಿದ್ದಿದೆ.
ಮೊದಲ ಕೊಲೆ ಯತ್ನ: ಹಾವಿನ ನೆಪ ಮತ್ತು ಅಪ್ಪುಗೆ
ಮೃತನ ತಂದೆ ವಿಶಾಲ್ ಅಗರ್ವಾಲ್ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ಅತ್ಯಂತ ಬೆಚ್ಚಿಬೀಳಿಸುವ ಸತ್ಯವೊಂದನ್ನು ಬಿಚ್ಚಿಟ್ಟಿದ್ದಾರೆ. ಜೂನ್ 18 ರಂದು ನಡೆದ ಕೊಲೆಗೆ ಕೇವಲ ನಾಲ್ಕು ದಿನಗಳ ಮುಂಚೆ, ಅಂದರೆ ಜೂನ್ 14 ರಂದೇ ಸಿಯಾ ಮೊದಲ ಬಾರಿಗೆ ಕೇತನ್ನನ್ನು ಕೊಲ್ಲಲು ಯತ್ನಿಸಿದ್ದಳು.
ಪಾಸ್ಪೋರ್ಟ್ ನಾಪತ್ತೆ: ಇಬ್ಬರೂ ವಿವಾಹಪೂರ್ವ ಪ್ರವಾಸಕ್ಕಾಗಿ ಬಾಲಿಗೆ ಹೋಗಲು ವಿಮಾನ ನಿಲ್ದಾಣಕ್ಕೆ ತಲುಪಿದ್ದರು. ಆದರೆ ಅಲ್ಲಿ ಹಠಾತ್ ಆಗಿ ಕೇತನ್ನ ಪಾಸ್ಪೋರ್ಟ್ ನಾಪತ್ತೆಯಾಗಿತ್ತು ಇದರಿಂದ ಪ್ರವಾಸ ರದ್ದಾಗಿ ಇಬ್ಬರೂ ಮನೆಗೆ ಮರಳಿದ್ದರು.
ಮತ್ತಷ್ಟು ಓದಿ: ಮದುವೆಗೂ ಸ್ವಲ್ಪ ಮುನ್ನ ಗೆಳೆಯನೊಂದಿಗೆ ಅಕ್ಕ ಪರಾರಿ, ತಂಗಿಗಾದರೂ ಕೊಟ್ಟು ಮದುವೆ ಮಾಡೋಣವೆಂದ್ರೆ ಆಕೆಯ ಪ್ರಿಯಕರನೂ ಪ್ರತ್ಯಕ್ಷ
ಕೋಟೆಯ ಮೇಲಿಂದ ತಳ್ಳಿದ್ದಳು: ಮೂರನೇ ದಿನ ಸಿಯಾ ಜಗಳವಾಡಿ, ತನ್ನೊಂದಿಗೆ ಲೋಹಗಡ್ ಕೋಟೆಗೆ ಬರುವಂತೆ ಕೇತನ್ನನ್ನು ಒಪ್ಪಿಸಿದಳು. ಕೋಟೆಯ ಮೇಲೆ ಇಬ್ಬರೇ ಇದ್ದಾಗ ಸಿಯಾ ಕೇತನ್ನನ್ನು ತಳ್ಳಿದ್ದಾಳೆ.
‘ಹಾವು, ಹಾವು’ ಎಂದು ನಾಟಕವಾಡಿ ಅಪ್ಪಿಕೊಂಡಳು: ಅದೃಷ್ಟವಶಾತ್ ಕೇತನ್ ಕೆಳಗೆ ಬೀಳುವಾಗ ಅಲ್ಲಿದ್ದ ಪೊದೆಯೊಂದನ್ನು ಗಟ್ಟಿಯಾಗಿ ಹಿಡಿದು ಪ್ರಾಣ ಉಳಿಸಿಕೊಂಡಿದ್ದ. ತಾನು ತಳ್ಳಿದ ರಹಸ್ಯ ಬಯಲಾಗಬಹುದು ಎಂದು ಹೆದರಿದ ಸಿಯಾ, ತಕ್ಷಣವೇ ‘ಹಾವು ಹಾವು’ ಎಂದು ಜೋರಾಗಿ ಕೂಗುತ್ತಾ ಓಡಿ ಬಂದು ಕೇತನ್ನನ್ನು ಬಿಗಿಯಾಗಿ ತಬ್ಬಿಕೊಂಡು ನಾಟಕವಾಡಿದ್ದಳು ಅಂದು ಕೇತನ್ ತನ್ನ ಭಾವಿ ಪತ್ನಿಯ ಕುತಂತ್ರವನ್ನು ಅರಿಯದೆ ಆಕೆಯನ್ನು ನಂಬಿಬಿಟ್ಟಿದ್ದ.
ಎರಡನೇ ಯತ್ನದಲ್ಲಿ ಪ್ರಿಯಕರನ ಎಂಟ್ರಿ; ಯಶಸ್ವಿಯಾದ ಸಂಚು
ಸಿಯಾ ತನ್ನ ಬೇಕರಿ ವ್ಯವಹಾರದ ಸಂಪರ್ಕದ ಮೂಲಕ ಪರಿಚಯವಾಗಿದ್ದ ಡ್ರೈ ಫ್ರೂಟ್ಸ್ ಕಂಪನಿ ಮಾಲೀಕ ಚೇತನ್ ಚೌಧರಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ತಮಗೆ ಅಡ್ಡಿಯಾಗಿದ್ದ ಕೇತನ್ನನ್ನು ಮುಗಿಸಲು ಇಬ್ಬರೂ ಸ್ಕೆಚ್ ಹಾಕಿದ್ದರು.
ಜೂನ್ 18 ರಂದು ಸಿಯಾ ಮತ್ತೆ ಕೇತನ್ನನ್ನು ವಿಹಾರದ ನೆಪದಲ್ಲಿ ಲೋಹಗಡ್ ಕೋಟೆಗೆ ಕರೆದೊಯ್ದಳು. ಮೊದಲೇ ಪ್ಲಾನ್ ಮಾಡಿದಂತೆ ಆಕೆಯ ಪ್ರಿಯಕರ ಚೇತನ್ ಕೂಡ ಅಲ್ಲಿಗೆ ಬಂದಿದ್ದ. ಬಿರುಗಾಳಿ ಬೀಸುತ್ತಿದ್ದ ಸಮಯದಲ್ಲಿ ಇಬ್ಬರೂ ಸೇರಿ ಕೇತನ್ನನ್ನು ಕೋಟೆಯ ತುದಿಯಿಂದ 400 ಅಡಿ ಆಳದ ಕಂದಕಕ್ಕೆ ತಳ್ಳಿದ್ದಾರೆ. ತೀವ್ರವಾಗಿ ಗಾಯಗೊಂಡ ಕೇತನ್ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಕಳ್ಳಾಟ ಬಯಲು ಮಾಡಿದ್ದೇಗೆ?
ಕೊಲೆಯ ಬಳಿಕ ಸಿಯಾ ಪೊಲೀಸರ ಮುಂದೆ, ಕೋಟೆಯ ಮೇಲೆ ಜೋರಾಗಿ ಗಾಳಿ ಬೀಸುತ್ತಿತ್ತು, ಆಗ ಕೇತನ್ ಕಾಲು ಜಾರಿ ಆಕಸ್ಮಿಕವಾಗಿ ಬಿದ್ದರು ಎಂದು ಕಣ್ಣೀರು ಹಾಕಿದ್ದಳು. ಪೊಲೀಸರು ಮೊದಲು ಆಕಸ್ಮಿಕ ಸಾವು ಎಂದು ಕೇಸ್ ದಾಖಲಿಸಿದ್ದರು. ಆದರೆ, ಕೇತನ್ ತಂದೆಯ ಅನುಮಾನ ಮತ್ತು ಸ್ಥಳೀಯ ಅಪರಾಧ ವಿಭಾಗದ ತನಿಖೆಯ ವೇಳೆ ಚೇತನ್ ಸಿಕ್ಕಿಬಿದ್ದಿದ್ದಾನೆ. ಪೊಲೀಸರು ಚೇತನ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ಇಡೀ ಕೊಲೆ ಸಂಚನ್ನು ಒಪ್ಪಿಕೊಂಡಿದ್ದಾನೆ. ಆ ಮಾಹಿತಿಯ ಆಧಾರದ ಮೇಲೆ ಸಿಯಾಳನ್ನು ಕೂಡ ಬಂಧಿಸಲಾಗಿದೆ.
ಪುಣೆ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಸಿಂಗ್ ಗಿಲ್ ಪ್ರಕಾರ, ಕೋರ್ಟ್ ಇಬ್ಬರೂ ಆರೋಪಿಗಳನ್ನು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ಆಕ್ರಂದನ ಮುಗಿಲು ಮುಟ್ಟಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
