ಮೊದಲ ಸಭೆಯಲ್ಲೇ ಅಧಿಕಾರಿಗಳ ಬೆವರಿಳಿಸಿದ ನೂತನ ಸಚಿವ ಕಾಶಪ್ಪನವರ್: ಕಚೇರಿಗಳಿಗೆ ತಡವಾಗಿ ಬರುವವರಿಗೆ ವಾರ್ನ್ – Kannada News | Minister Vijayanand Kashappanavar angry on officials in his first meeting: Warning for those arriving late to offices

ವಿಜಯಾನಂದ ಕಾಶಪ್ಪನವರ್Image Credit source: tv9 kannada

ಬಾಗಲಕೋಟೆ, ಆಗಸ್ಟ್​​ 06: ಬಾಗಲಕೋಟೆ (bagalkot) ಜಿಲ್ಲೆಯ ಹುನಗುಂದ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ್ (Vijayanand Kashappanavar) ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಸಭೆಯಲ್ಲೇ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ತೀವ್ರ ತರಾಟೆಗೆ ತೆಗೆದುಕೊಂಡರು. ಕುಡಿಯುವ ನೀರಿನ ವಿಚಾರವಾಗಿ ಸಭೆಯಲ್ಲಿ ಅಧಿಕಾರಿಗಳ ಬೆವರಿಳಿಸಿದರು. ಅಷ್ಟೇ ಅಲ್ಲದೆ ಕಚೇರಿಗಳಿಗೆ ತಡವಾಗಿ ಬರುವ ಅಧಿಕಾರಗಳಿಗೂ ಖಡಕ್​​ ಎಚ್ಚರಿಕೆ ನೀಡಿದ್ದಾರೆ.

ಅಧಿಕಾರಿಗಳನ್ನ ತೀವ್ರ ತರಾಟೆ ತೆಗೆದುಕೊಂಡ ವಿಜಯಾನಂದ ಕಾಶಪ್ಪನವರ್

ಬಾಗಲಕೋಟೆ ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಸಚಿವ ವಿಜಯಾನಂದ ಕಾಶಪ್ಪನವರ್ ಅಧ್ಯಕ್ಷತೆಯಲ್ಲಿ ಬರ ಪರಿಸ್ಥಿತಿ ಕುರಿತು ಸಭೆ ನಡೆಯಿತು. ಈ ವೇಳೆ ಮುಖ್ಯವಾಗಿ ಕುಡಿಯುವ ನೀರಿನ ಸಮಸ್ಯೆ ಮತ್ತು ಕಾಮಗಾರಿಗಳ ವಿಳಂಬದ ಬಗ್ಗೆ ಸಚಿವರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇಳಕಲ್ ನಗರಸಭೆ ಕಮಿಷನರ್ ಶ್ರೀನಿವಾಸ ಜಾಧವ್ ಹಾಗೂ ಅಮೀನಗಢ ಪಟ್ಟಣ ಪಂಚಾಯಿತಿ ಅಧಿಕಾರಿ ವಿದ್ಯಾ ಅವರಿಗೆ ಎಚ್ಚರಿಕೆ ನೀಡಿದ ಸಚಿವರು, ‘ನೀವು ಕೆಲಸ ಮಾಡುವುದು ಇಳಕಲ್ ಮತ್ತು ಅಮೀನಗಢದಲ್ಲಿ, ಆದರೆ ವಾಸವಿರುವುದು ಬಾಗಲಕೋಟೆಯಲ್ಲಿ. ಮಧ್ಯಾಹ್ನದ ಮೇಲೆ ಕಚೇರಿಗೆ ಬಂದರೆ ಸಾರ್ವಜನಿಕರ ಕೆಲಸಗಳು ಹೇಗೆ ಆಗಬೇಕು?’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: Minister Vijayanand Kashappanavar Oath: ಪಂಚಪೀಠಾಧೀಶ್ವರ ಹೆಸರಲ್ಲಿ ಕಾಶಪ್ಪನವರ್ ಪ್ರಮಾಣವಚನ

ಇದೇ ವೇಳೆ, ಸಾರ್ವಜನಿಕರಿಗೆ ಸಿಗದ ಹಾಗೂ ಸರಿಯಾಗಿ ಸ್ಪಂದಿಸದ ಪಿಡಿಒಗಳ ವಿರುದ್ಧವೂ ಗರಂ ಆದ ಸಚಿವ ‘ಇನ್ಮೇಲೆ ಇದೆಲ್ಲ ನಡೆಯುವುದಿಲ್ಲ. ಸಾರ್ವಜನಿಕರಿಗೆ ಲಭ್ಯವಿರುವಂತೆ ಸೂಚನೆ ನೀಡುವಂತೆ’ ಜಿಲ್ಲಾ ಪಂಚಾಯತ ಸಿಇಒಗೆ ನಿರ್ದೇಶನ ನೀಡಿದರು.

ಆರ್​ಟಿಓ ಅಧಿಕಾರಿಗಳ ವಿರುದ್ಧ ಗರಂ 

ಸಭೆಗೆ ಆರ್​ಟಿಓ ಅಧಿಕಾರಿಗಳು ಗೈರಾಗಿದ್ದಕ್ಕೆ ತೀವ್ರ ಆಕ್ರೋಶಗೊಂಡ ಸಚಿವ, ‘ಆರ್​ಟಿಓ ಅಧಿಕಾರಿಗಳಿಗೆ ಸರ್ಕಾರಕ್ಕೂ ಸಂಬಂಧವೇ ಇಲ್ಲವೇ? ಸಭೆಗೆ ಬಾರದೆ ಜನಪ್ರತಿನಿಧಿಗಳಿಗೆ ಗೌರವ ನೀಡುವುದಿಲ್ಲವೇ?’ ಎಂದು ಪ್ರಶ್ನಿಸಿದರು. ‘ಮುಂದಿನ ಸಭೆಯಲ್ಲಿ ಎಲ್ಲಾ ಅಧಿಕಾರಿಗಳು ಇರಬೇಕು. ಸಾರ್ವಜನಿಕ ದೂರು ಬಂದರೆ ಸಹಿಸುವುದಿಲ್ಲ. ಮುಂದೆ ನೀವು ಪರಿಣಾಮ ಎದುರಿಸಬೇಕಾಗುತ್ತದೆ’ ಎಂದರು.

ಇದನ್ನೂ ಓದಿ: ಸಚಿವ ಸ್ಥಾನ ಹಂಚಿಕೆಯಲ್ಲಿ ಪೇಮೆಂಟ್ ಸೀಟ್ ಆರೋಪ; ಕೈ ನಾಯಕರ ಆಡಿಯೋ ವೈರಲ್!

ಇದೇ ವೇಳೆ ಶಾಸಕ ಉಮೇಶ ಮೇಟಿ ಮಾತನಾಡಿ, ‘ಕೆಲವು ಅಧಿಕಾರಿಗಳಿಗೆ ಫೋನ್ ಮಾಡಿದರೆ ನಾನ್ಯಾರು ಎಂದು ಉದ್ಧಟತನ ತೋರುತ್ತಾರೆ’ ಎಂದು ಸಚಿವರ ಗಮನಕ್ಕೆ ತಂದರು. ‘ಎಲ್ಲಾ ಕ್ಷೇತ್ರದ ಎಂಎಲ್​ಎ,‌ ಎಂಎಲ್​ಸಿಗಳಿಗೆ ಭೇಟಿಯಾಗಿ ಮೊದಲು ಪರಿಚಯ ಮಾಡಿಕೊಂಡ ನಿಮ್ಮ ನಂಬರ್ ಕೊಟ್ಟು ಬನ್ನಿ’ ಎಂದು ಸಚಿವ ವಿಜಯಾನಂದ ಕಾಶಪ್ಪನವರ್​​ ಹೇಳಿದ್ದಾರೆ.

ನೂತನ ಸಚಿವ ಕಾಶಪ್ಪನವರ್ ಹೇಳಿದ್ದಿಷ್ಟು

ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ನಾನು ಎಲ್ಲರನ್ನೂ ವಿಶ್ವಾಸದಿಂದ ಕರೆದುಕೊಂಡು ಹೋಗುವೆ. ಮುಧೋಳ ಕ್ಷೇತ್ರದಲ್ಲಿ ಬರ ಪರಿಸ್ಥಿತಿ ವೀಕ್ಷಣೆಗೆ ತೆರಳಿದ್ದೆ. ಈ ವೇಳೆ ಆರ್​.ಬಿ.ತಿಮ್ಮಾಪುರ ಅವರನ್ನ ಭೇಟಿಯಾಗಿದ್ದೇನೆ. ಆಡಿಯೋ ವೈರಲ್ ಆದ ವಿಚಾರದ ಕುರಿತು ಮಾತನಾಡಿಲ್ಲ. ನಂಜಯ್ಯನಮಠ ಅವರು ದೂರು ಕೊಡಲಿ, ತನಿಖೆಯಾಗಲಿ. ನಾನು ಕೂಡ ಬಾಗಲಕೋಟೆ ಎಸ್​​ಪಿಯವರಿಗೆ ಹೇಳ್ತೇನೆ. ಸತ್ಯಾಸತ್ಯತೆ ಬಗ್ಗೆ ತನಿಖೆಯಾಗಲಿ’ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *